ಬೆಂಗಳೂರು ನ.20 : ರಾಜ್ಯ ಸರ್ಕಾರವು ಪೋಲಿಸ್ ಇಲಾಖೆಯ ಇ-ಚಲನ್ ಮುಖಾಂತರ ದಾಖಲಾಗಿರುವ ಸಂಚಾರ ನಿಯಮ ಉಲ್ಲಂಘನೆ ದಂಡದ ಮೇಲೆ ಶೇಕಡಾ 50ರಷ್ಟು ರಿಯಾಯಿತಿ ಘೋಷಿಸಿದೆ.
ನವೆಂಬರ್ 21 ರಿಂದ ಡಿಸೆಂಬರ್ 12 ರ ವರೆಗೆ ಈ ರಿಯಾಯಿತಿ ಲಭ್ಯವಿದ್ದು, ವಾಹನ ಸವಾರರು ಇಲ್ಲಿಯವರೆಗೂ ಉಳಿಸಿಕೊಂಡಿರುವ ದಂಡವನ್ನು ಮತ್ತೆ ಸುವರ್ಣಾವಕಾಶ ಕಲ್ಪಿಸಿದೆ.
ದಂಡ ಪಾವತಿ ಉಳಿಸಿಕೊಂಡಿರುವ ವಾಹನ ಸವಾರರು ಬೆಂಗಳೂರಿನಲ್ಲಿ ಸಂಚಾರ ಪೊಲೀಸ್ ಠಾಣೆಗಳು, ಸಂಚಾರ ನಿರ್ವಹಣಾ ಕೇಂದ್ರ, ಕರ್ನಾಟಕ ಒನ್ ಹಾಗೂ ಬೆಂಗಳೂರು ಒನ್ ವೆಬ್ಸೈಟ್ಗಳಲ್ಲಿ ಹಾಗೂ ಕೆಎಸ್’ಪಿ ಆಪ್’ನಲ್ಲಿ ವಿವರ ಪಡೆದು ಪಾವತಿಸಬಹುದು. ಜಿಲ್ಲೆಗಳಲ್ಲಿ ಸಮೀಪದ ಪೊಲೀಸ್ ಠಾಣೆಗಳಿಗೆ ಖುದ್ದು ಭೇಟಿ ನೀಡಿ ರಿಯಾಯಿತಿ ದರದಲ್ಲಿ ದಂಡ ಕಟ್ಟಬಹುದಾಗಿದೆ.
ಆನ್ಲೈನ್ ಮೂಲಕ ಪಾವತಿ ಮಾಡುವವರು ಕರ್ನಾಟಕ ಸ್ಟೇಟ್ ಪೊಲೀಸ್ (ಕೆಎಸ್ಪಿ) ಆ್ಯಪ್ ಬಿಟಿಪಿ ಅಸ್ತ್ರಂ ಮುಖಾಂತರವೂ ಖುದ್ದಾಗಿ ದಂಡ ಪಾವತಿಸಬಹುದಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಇದೇ ರೀತಿಯ ಅವಕಾಶವನ್ನು ಆಗಸ್ಟ್ ತಿಂಗಳಿನಲ್ಲೂ ಸಹ ನೀಡಿತ್ತು. ಸಂಚಾರ ನಿಯಮ ಉಲ್ಲಂಘನೆಯ ನೂರಾರು ಕೋಟಿ ರೂ. ದಂಡ ಕಟ್ಟದೆ ವಾಹನ ಸವಾರರು ಬಾಕಿ ಉಳಿಸಿಕೊಂಡಿದ್ದರು. ಹೀಗಾಗಿ, ಸಾರಿಗೆ ಇಲಾಖೆ ಹಾಗೂ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಪ್ರಾಧಿಕಾರ ಜಂಟಿ ಸಭೆ ನಡೆಸಿ 2023ರಲ್ಲಿ ಮೊದಲ ಬಾರಿಗೆ ದಂಡ ಪಾವತಿಗೆ ಶೇ. 50ರಷ್ಟು ರಿಯಾಯಿತಿಗೆ ಶಿಫಾರಸು ಮಾಡಿದ್ದವು. ಸರಕಾರ ಕೂಡ ಶಿಫಾರಸು ಒಪ್ಪಿ ರಿಯಾಯಿತಿ ಘೋಷಿಸಿತ್ತು. ರಿಯಾಯಿತಿ ದರದಲ್ಲಿ ದಂಡ ಪಾವತಿಗೆ ವಾಹನ ಸವಾರರು ಹೆಚ್ಚು ಆಸಕ್ತಿ ತೋರಿಸಿ ಮೊದಲ ಹಂತದಲ್ಲಿ ರಾಜ್ಯಾದ್ಯಂತ 120 ಕೋಟಿ ರೂ.ಗಳಿಗೂ ಹೆಚ್ಚು ದಂಡ ಪಾವತಿಯಾಗಿತ್ತು. ಬಳಿಕ ದಂಡ ಪಾವತಿ ಅವಧಿಯನ್ನು ಹಂತ- ಹಂತವಾಗಿ ವಿಸ್ತರಿಸಲಾಗಿತ್ತು. ಪ್ರತಿ ವರ್ಷ ಸಹ ದಂಡ ಪಾವತಿ ಮಾಡಲು ಶೇ 50 ರಷ್ಟು ರಿಯಾಯಿತಿ ನೀಡಿ, ದಂಡ ಪಾವತಿಯನ್ನು ಪ್ರೋತ್ಸಾಹಿಸಲಾಗುತ್ತಿದೆ.
ಇತ್ತೀಚೆಗೆ ಸಾರಿಗೆ ಹಾಗೂ ರಸ್ತೆ ಸುರಕ್ಷತೆ ಆಯುಕ್ತರು ಪೊಲೀಸ್ ಇಲಾಖೆ ಇ-ಚಲನ್ಗಳಲ್ಲಿ ದಾಖಲಾಗಿರುವ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಶೇ. 50ರಷ್ಟು ದಂಡ ರಿಯಾಯಿತಿ ನೀಡಲು ಪ್ರಸ್ತಾವನೆ ಸಲ್ಲಿಸಿದ್ದರು. ಈ ಪ್ರಸ್ತಾವನೆಯನ್ನು ಪುರಸ್ಕರಿಸಿರುವ ರಾಜ್ಯ ಸರಕಾರವು ಪೊಲೀಸ್ ಇಲಾಖೆ ಇ-ಚಲನ್ನಲ್ಲಿ ದಾಖಲಾಗಿರುವ ಪ್ರಕರಣಗಳಿಗೆ ಮಾತ್ರ ಶೇ. 50ರಷ್ಟು ದಂಡ ವಿನಾಯಿತಿ ನೀಡಿ ಆದೇಶಿಸಿದೆ.


