ಬೆಂಗಳೂರು:ಅಕ್ರಮ ವಲಸಿಗರಿಗೆ, ರೋಹಿಂಗ್ಯಾಗಳಿಗೆ ಸರಕಾರಿ ಮನೆ ಕೊಟ್ಟರೆ ಬೆಂಗಳೂರು ಏನಾದೀತು? ಸರ್ಕಾರದ ನಿರ್ಧಾರ ಸರಿಯಲ್ಲ,ಸೂರು ನೀಡುವ ಬದಲು ಕರ್ನಾಟಕದ ಪೊಲೀಸರು ಅವರ ಆಧಾರ್ ಕಾರ್ಡ್ ವಶಕ್ಕೆ ಪಡೆಯಬೇಕು. ಅವರು ಪಶ್ಚಿಮ ಬಂಗಾಳದವರೇ? ಅಥವಾ ಬೇರೆ ಕಡೆಯಿಂದ ಬಂದಿದ್ದಾರಾ ಎಂದು ಪತ್ತೆ ಮಾಡಬೇಕು, ದೇಶದ ಮತ್ತು ಕರ್ನಾಟಕದ ಉಳಿವಿಗಾಗಿ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಶಿವಕುಮಾರರಿಗೆ ಸರಕಾರ ನಡೆಸಲು ಸಾಂವಿಧಾನಿಕ ಹಕ್ಕು, ಶಕ್ತಿ ಇದೆಯೇ ಇಲ್ಲವೇ? ಕೋಗಿಲು ಅಕ್ರಮ ವಲಸಿಗರನ್ನು ನೋಟಿಸ್ ಕೊಟ್ಟು 167 ಮನೆಗಳನ್ನು ತೆರವುಗೊಳಿಸಿದ್ದು ಒಳ್ಳೆಯ ಕೆಲಸ. ತೆರವನ್ನು ಕೆ.ಸಿ.ವೇಣುಗೋಪಾಲ್ ಪ್ರಶ್ನಿಸಿದ್ದಾರೆ. ಪಿಣರಾಯಿ ವಿಜಯನ್ ಒತ್ತಡ ತರುತ್ತಿದ್ದಾರೆ.ಈ ವಲಸಿಗರು ಯಾರು? ಎಂದು ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದರು.
ಅಲ್ಲಿದ್ದವರೆಲ್ಲ ಪಶ್ಚಿಮ ಬಂಗಾಳದಿಂದ ಬಂದವರು. ಅಲ್ಲಿಯೂ ಸಮರ್ಪಕ ವಿಳಾಸ ಇಲ್ಲದವರು. ಹೆಬ್ಬಾಳದ ಅಮೀನ್ಕೆರೆಯಲ್ಲಿ ವಾಸ ಮಾಡುವವರು, ಅಕ್ರಮ ಚಟುವಟಿಕೆ ಮಾಡುವವರು ಯಾರೆಂದು ಪೊಲೀಸ್ ಕಮೀಷನರ್ಗೆ ಪತ್ರ ಬರೆದಿದ್ದೇನೆ. ಕ್ರಮ ಕೈಗೊಳ್ಳಲು ಹೇಳಿದ್ದೆ. ಅದೇರೀತಿಯ ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದವರನ್ನು ಕೋಗಿಲುವಿನಲ್ಲಿ ತೆರವು ಮಾಡಿದ್ದಾರೆ ಎಂದು ವಿವರಿಸಿದರು.
ದೆಹಲಿ ಒತ್ತಡಕ್ಕೆ ಮಣಿದ ಸಿಎಂ, ಡಿಸಿಎಂ:
ಬೆಂಗಳೂರಿನ ವಾಸಿಂ ಬಡಾವಣೆ, ಫಕೀರ್ ಬಡಾವಣೆಯಲ್ಲಿ ಯಾರಿದ್ದಾರೆ? ದೆಹಲಿ ಒತ್ತಡಕ್ಕೆ ಮಣಿದು ಸಿಎಂ, ಡಿಸಿಎಂ ಸಭೆ ನಡೆಸುತ್ತಾರೆ. ಬಹಳ ದಿನದಿಂದ ಅವರು ಒಟ್ಟಾಗಿಲ್ಲ; ಕುರ್ಚಿ ಉಳಿಸಿಕೊಳ್ಳಲು ಒಬ್ಬರು, ಕುರ್ಚಿಯನ್ನು ಪಡೆಯಲು ಒಬ್ಬರು ಸ್ಪರ್ಧೆಯ ಮೇಲೆ ದೆಹಲಿ ಹೈಕಮಾಂಡನ್ನು ಸಂತುಷ್ಟಗೊಳಿಸಲು ಒಟ್ಟಿಗೆ ಸಭೆ ನಡೆಸಿ ತೆರವುಗೊಳಿಸಿ ಅಕ್ರಮ ವಲಸಿಗರಿಗೆ ಬೈಯಪ್ಪನಹಳ್ಳಿಯಲ್ಲಿ ಮನೆ ಕೊಡಲು ನಿರ್ಧರಿಸಿದ್ದಾರೆ. ಯಾರವರು? ಯಾವಾಗ ಅರ್ಜಿ ಸಲ್ಲಿಸಿದ್ದಾರೆ. ಕರ್ನಾಟಕದ ನಿವಾಸಿಗಳಾಗಿದ್ದವರಲ್ಲಿ ಅರ್ಜಿ ಸಲ್ಲಿಸಿದವರ ಗತಿ ಏನು ಎಂದು ಪ್ರಶ್ನೆಗಳನ್ನು ಮುಂದಿಟ್ಟರು.
ಹಲವೆಡೆ, ಸರಕಾರಿ ಭೂಮಿಗಳಲ್ಲಿ ಇರುವ ಅಕ್ರಮ ವಲಸಿಗರ ಪಟ್ಟಿ ಯಾವಾಗ ತಯಾರು ಮಾಡುತ್ತೀರಿ? ಅಮೀನ್ಕೆರೆ ಒಂದು ಸ್ಯಾಂಪಲ್ ಅಷ್ಟೇ. ಅಕ್ರಮ ವಲಸಿಗರಿಗೆ, ರೋಹಿಂಗ್ಯಾಗಳಿಗೆ ಸರಕಾರಿ ಮನೆ ಕೊಟ್ಟರೆ ಬೆಂಗಳೂರು ಏನಾದೀತು ಎಂದು ಆತಂಕ ವ್ಯಕ್ತಪಡಿಸಿದರು.
ಕರ್ನಾಟಕ ಸರಕಾರ, ಪೊಲೀಸರು ಅಕ್ರಮ ವಲಸಿಗರ ಗುರುತಿಸುವಿಕೆ ವಿಚಾರದಲ್ಲಿ ಸಹಕಾರ ಕೊಡದೇ ಇದ್ದರೆ ಇವರನ್ನು ಪತ್ತೆ ಮಾಡುವುದು ಹೇಗೆ ಎಂದು ಕೇಳಿದರು.
ನೀವೇ ಅವರಿಗೆ ಮನೆ ಕೊಟ್ಟು, ಸರ್ಟಿಫಿಕೇಟ್ ಕೊಟ್ಟು ಅವರನ್ನು ಖಾಯಂ ಮಾಡುತ್ತಿದ್ದೀರಿ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇವರ ಮತದಾರರ ಚೀಟಿ, ಆಧಾರ್ ಕಾರ್ಡನ್ನು ತಕ್ಷಣ ವಶಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.
ಕರ್ನಾಟಕಕ್ಕೆ ಹೊರದೇಶಗಳಿಂದ ಅಕ್ರಮ ವಲಸೆ ಬರುತ್ತಿರುವವರ ಕುರಿತು ಉನ್ನತ ಮಟ್ಟದ ತನಿಖೆ ಆಗಬೇಕು ಎಂದು ಆಗ್ರಹಿಸಿದರು. ಡ್ರಗ್ ಮಾಫಿಯ ನಿರತ ಅಕ್ರಮ ವಲಸಿಗರ ವಿರುದ್ಧ ಎಲ್ಲ ಇಲಾಖೆಗಳು ಸೇರಿ ಕ್ರಮ ಕೈಗೊಳ್ಳಲಿ ಎಂದು ವಿನಂತಿಸಿದರು. ರಾಜ್ಯ ಸರಕಾರವೂ ರೋಹಿಂಗ್ಯಾಗಳನ್ನು ಪತ್ತೆ ಹಚ್ಚಿ ಹೊರಹಾಕಲು ಸಹಕರಿಸಬೇಕಿದೆ ಎಂದು ಮನವಿ ಮಾಡಿದರು.
ರಾಜ್ಯದಲ್ಲಿ ಯಾರ ಸರಕಾರ ನಡೆಯುತ್ತಿದೆ. ಯಾರಿಗಾಗಿ ಸರಕಾರ ನಡೆಯುತ್ತಿದೆ ಎಂದು ಪ್ರಶ್ನಿಸಿದರು. ರಾಜ್ಯದ ಮೂಗುದಾರ ಎಲ್ಲಿದೆ? ಕೆ.ಸಿ.ವೇಣುಗೋಪಾಲ್ ಅವರು ಕರ್ನಾಟಕದ ವಿಚಾರದಲ್ಲಿ ಮೂಗು ತೂರಿಸುತ್ತಾರೆ. ಟ್ವೀಟ್ ಮಾಡಿ ಸರಕಾರ ಹೇಗೆ ನಡೆಸಬೇಕೆಂದು ಕಿವಿಮಾತು ಹೇಳಿದ್ದಾರೆ. ಅವರದೇ ರಾಜ್ಯದ ಪಿಣರಾಯಿ ವಿಜಯನ್ ಕರ್ನಾಟಕದಲ್ಲಿ ಏನು ಮಾಡಬೇಕು, ಏನು ಮಾಡಬಾರದೆಂದು ಹೇಳುತ್ತಿದ್ದಾರೆ ಎಂದು ಟೀಕಿಸಿದರು.

