ಬೆಂಗಳೂರು: ಇದೇ ಮೊದಲ ಬಾರಿಗೆ ಹೊಸ ವರ್ಷಾಚರಣೆಗೆ ಅತಿಹೆಚ್ಚು ಭದ್ರತಾ ಕ್ರಮಗಳನ್ನು ಕೈಗೊಂಡ ಸರ್ಕಾರ ಹಾಗೂ ಬೆಂಗಳೂರು ನಗರ ಪೊಲೀಸರ ಕ್ರಮ ಶ್ಲಾಘನೀಯವಾಗಿದ್ದು,ಅಗತ್ಯ ಮುನ್ನೆಚ್ಚರಿಕೆಯೊದಿಗೆ ಸಂಭ್ರಮದಿಂದ ಸುರಕ್ಷಿತವಾಗಿ ಹೊಸವರ್ಷವನ್ನು ಸ್ವಾಗತಿಸಿ ಎಂದು ಮಹಿಳಾ ಸಮುದಾಯಕ್ಕೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಕರೆ ನೀಡಿದ್ದಾರೆ.
ಹೊಸ ವರ್ಷದ ಆಚರಣೆಗೆ ಸಂಬಂಧಿಸಿದಂತೆ ಕೈಗೊಂಡ ಮುನ್ನೆಚ್ಚರಿಕಾ ಕ್ರಮಗಳು, ಮಹಿಳೆಯರ ಭದ್ರತೆಗೆ ತೆಗೆದುಕೊಂಡಿರುವ ಸುರಕ್ಷತಾ ಕ್ರಮಗಳು ಮೊದಲಾದ ವಿಚಾರಗಳ ಕುರಿತು ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಸಹಾಯಕ ಪೊಲೀಸ್ ಆಯುಕ್ತರು, ಕ್ರೈಂ ಕಮಿಷನರ್ ಮೊದಲಾದವರ ಜೊತೆ ಡಾ.ನಾಗಲಕ್ಷ್ಮಿ ಸಭೆ ನಡೆಸಿದರು. ಮಹಿಳಾ ಸುರಕ್ಷತಗಾಗಿ ಕೈಗೊಂಡಿರುವ ಭದ್ರತಾ ವ್ಯವಸ್ಥೆ ಕುರಿತು ಸಮಾಲೋಚ ನಡೆಸಿದರು.
ಸಭೆ ನಂತರ ಮಾತನಾಡಿದ ಡಾ.ನಾಗಲಕ್ಷ್ಮಿ,112 ತುರ್ತು ಸಹಾಯವಾಣಿ, ಮಹಿಳೆಯರ ಆಟೋ, ಸಾರ್ವಜನಿಕ ಸಾರಿಗೆ ಮುಂತಾದವುಗಳನ್ನು ಪ್ರತ್ಯೇಕವಾಗಿ ಮೀಸಲಿಡಲಾಗಿದೆ. ರಾಣಿ ಚೆನ್ನಮ್ಮ ಪಡೆ ಕಾರ್ಯನಿರತವಾಗಿದ್ದು ತುರ್ತು ಸಂದರ್ಭದಲ್ಲಿ ಸಹಾಯ ಒದಗಿಸಲಿದೆ. ಆ್ಯಂಬುಲೆನ್ಸ್, ಬಸ್ಗಳು, ಟೆಂಪೋ ಟ್ರಾವೆಲ್ಗಳ ಏರ್ಪಾಡು ಮಾಡಲಾಗಿದೆ. 20 ಸಾವಿರ ಪೊಲೀಸರನ್ನು ಇಡೀ ಬೆಂಗಳೂರು ನಗರದಲ್ಲಿ ಸುರಕ್ಷತೆಗಾಗಿ ನೇಮಿಸಲಾಗಿದೆ. AI ತಂತ್ರಜ್ಞಾನ ಬಳಸಿ ಜನಸಂದಣಿಯ ಮೇಲೆ ನಿಗಾ ಇರಿಸಲಾಗಿದೆ. Karnataka Safe Police (KSP) connect application ಡೌನ್ಲೋಡ್ ಮಾಡಿಕೊಳ್ಳಿ. ಇದು ಅತ್ಯಂತ ಮಹತ್ವದ್ದಾಗಿದ್ದು ನಿಮ್ಮ ಸಹಾಯಕ್ಕೆ ಸಿದ್ಧವಿರಲಿದೆ ಎಂದರು.
ಡ್ರೋನ್ಸ್, ಒಂದೂವರೆ ಲಕ್ಷ ಸಿಸಿಟಿವಿ ಬಳಕೆ ಮೊದಲಾದ ಕ್ರಮಗಳ ಮೂಲಕ ಮೊದಲ ಬಾರಿಗೆ ಅತಿಹೆಚ್ಚು ಭದ್ರತಾ ಕ್ರಮಗಳನ್ನು ಕೈಗೊಂಡ ಸರ್ಕಾರ ಹಾಗೂ ಬೆಂಗಳೂರು ನಗರ ಪೊಲೀಸರಿಗೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಸಂಭ್ರಮದಿಂದ ಸುರಕ್ಷಿತವಾಗಿ ಹೊಸವರ್ಷವನ್ನು ಸ್ವಾಗತಿಸೋಣ ಎಂದು ಕರೆ ನೀಡಿದರು.

