Fri. Mar 6th, 2026

ಪಿಣರಾಯಿ ವಿಜಯನ್‌, ವೇಣುಗೋಪಾಲ್‌ ನಡುವಿನ ಸಂಘರ್ಷಕ್ಕೆ ಕನ್ನಡಿಗರ ಹಿತ ಬಲಿ: ಅಶೋಕ್

Share this with Friends

ಬೆಂಗಳೂರು:ಕೋಗಿಲು ಕ್ರಾಸ್‌ನಲ್ಲಿ ಏಕಾಏಕಿ ಮನೆ ನೀಡಲು ಸಾಧ್ಯವೇ ಇಲ್ಲ. ಜನರು ಅರ್ಜಿ ಸಲ್ಲಿಸಿ, ಶಾಸಕರ ಸಮಿತಿಯಿಂದ ಪರಿಶೀಲನೆಯಾಗಿ ಆಯ್ಕೆಯಾಗಬೇಕು ಆದರೂ ಸರ್ಕಾರ ವಸತಿ ಘೋಷಿಸಿದೆ ಇದು ಕೇರಳ ಸಿಎಂ ಪಿಣರಾಯಿ ವಿಜಯನ್‌ ಹಾಗೂ ವೇಣುಗೋಪಾಲ್‌ ನಡುವೆ ನಡೆಯುತ್ತಿರುವ ಸಂಘರ್ಷ. ಇದರಿಂದ ಕನ್ನಡಿಗರು ಬಲಿಯಾಗಿದ್ದಾರೆ.ಒಂದು ವೇಳೆ ನಿಯಮ ಬಾಹಿರ ಹಂಚಿಕೆ ಮಾಡಿದ್ದೇ ಆದಲ್ಲಿ ಕಾನೂನು ಮೊರೆ ಹೋಗುತ್ತೇವೆ, ಸದನದಲ್ಲಿಯೂ ಹೋರಾಟ ಮಾಡುತ್ತೇವೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಎಚ್ಚರಿಕೆ ನೀಡಿದ್ದಾರೆ.

ರಾಜೀವ್‌ ಗಾಂಧಿ ವಸತಿ ನಿಗಮಕ್ಕೆ ಭೇಟಿ ನೀಡಿ ಅಧಿಕಾರಿಗಳ ಜೊತೆ ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಚಿಕ್ಕಬಾಣಾವರದಲ್ಲಿ ಒಂದು ಯೋಜನೆ ಇನ್ನೂ ಐದಾರು ವರ್ಷಗಳಿಂದ ಪ್ರಗತಿಯಲ್ಲಿದೆ. ಆದರೆ ಸರ್ಕಾರ ಕೋಗಿಲು ಕ್ರಾಸ್‌ನಲ್ಲಿ ಮಾತ್ರ ನಿಯಮ ಗಾಳಿಗೆ ತೂರಿ ಮನೆ ನೀಡಲು ಮುಂದಾಗಿದೆ. ಅಲ್ಲಿ ಇರುವವರು ಇದೇ ದೇಶದವರೇ ಎಂಬುದಕ್ಕೆ ಯಾವುದೇ ಆಧಾರ ಇಲ್ಲ. ಅವರ ಮೂಲಕ ಯಾವುದು, ಅವರ ಅಪ್ಪ ಅಮ್ಮ ಎಲ್ಲಿದ್ದಾರೆ ಎಂಬುದಕ್ಕೆ ಮಾಹಿತಿ ಇಲ್ಲ. ಇದು ಸಿಎಂ ಪಿಣರಾಯಿ ವಿಜಯನ್‌ ಹಾಗೂ ವೇಣುಗೋಪಾಲ್‌ ನಡುವೆ ನಡೆಯುತ್ತಿರುವ ಸಂಘರ್ಷ. ಇದರಿಂದ ಕನ್ನಡಿಗರು ಬಲಿಯಾಗಿದ್ದಾರೆ. 13,000 ಜನರು ಪ್ರವಾಹದಿಂದ ಮನೆ ಕಳೆದುಕೊಂಡಿದ್ದರೂ ಅವರಿಗೆ ಮನೆ ನೀಡಿಲ್ಲ. ಉತ್ತರ ಕರ್ನಾಟಕದ ಭಾಗದ ಶಾಸಕರು ಇಲ್ಲಿಗೆ ಬಂದು ಪ್ರವಾಹ ಸಂತ್ರಸ್ತರ ಪರ ಮನೆ ಕೇಳುತ್ತಿದ್ದಾರೆ. ಅಧಿಕಾರಿಗಳು ನಿಯಮ ಮೀರಿದರೆ ಅವರೇ ಬಲಿಪಶುವಾಗುತ್ತಾರೆ. ಆದ್ದರಿಂದ ಮನೆ ನೀಡುವಾಗ ವಂಶವೃಕ್ಷವನ್ನು ಕಡ್ಡಾಯ ಮಾಡಬೇಕಿದೆ ಎಂದರು.

ಕೋಗಿಲು ಕ್ರಾಸ್‌ಗೆ ಬಿಜೆಪಿ ನಿಯೋಗ ಬರಲಿದೆ ಎಂದಾಕ್ಷಣ ಕನ್ನಡಿಗರನ್ನು ಕರೆತಂದು ಇರಿಸಿದ್ದಾರೆ. 16 ಸಾವಿರ ರೂ. ಗೆ ಆಧಾರ್‌ ಕಾರ್ಡ್‌ ಮಾಡಿಸಿಕೊಡುವ ಗ್ಯಾಂಗ್‌ ಇದೆ. ಮತಕ್ಕಾಗಿ ಇಂತಹವರನ್ನು ಇಲ್ಲಿ ನೆಲೆಸುವಂತೆ ಮಾಡಿದ್ದಾರೆ. ಬಾಂಗ್ಲಾದೇಶದ 16 ಕೋಟಿ ಜನರಲ್ಲಿ 3 ಕೋಟಿ ಜನರು ಕಾಣೆಯಾಗಿದ್ದು, 20-25 ಲಕ್ಷ ಜನರು ಕರ್ನಾಟಕಕ್ಕೆ ಬಂದಿದ್ದಾರೆ. ಸರ್ಕಾರ 6-8 ಲಕ್ಷ ಬಾಂಗ್ಲಾದವರನ್ನು ಗುರುತಿಸಿದೆ. ಅವರಿಗೆ ಮನೆ ಕೊಡಲೇಬೇಕೆಂಬ ಹಠ ಯಾಕೆ? ಮನೆ ಕೊಡುವುದಾದರೆ ಕನ್ನಡಿಗರಿಗೆ ಆದ್ಯತೆ ನೀಡಬೇಕು. ಕೋಗಿಲು ಕ್ರಾಸ್‌ನಲ್ಲಿ ಪಶ್ಚಿಮ ಬಂಗಾಳದ ಕಾರು ಇರುವುದು ಕಂಡುಬಂದಿದೆ ಎಂದರು.

ರಾಜೀವ್‌ ಗಾಂಧಿ ವಸತಿ ನಿಗಮಕ್ಕೆ ರಾಜ್ಯದ ಸುಮಾರು 65 ಸಾವಿರ ಜನರು ಮನೆಗಾಗಿ ಅರ್ಜಿ ಹಾಕಿದ್ದಾರೆ. ನಿಗಮದಲ್ಲಿ ವಿವಿಧ ಯೋಜನೆಗಳಲ್ಲಿ ಸುಮಾರು 7,000 ಮನೆಗಳನ್ನು ನಿರ್ಮಿಸಲಾಗಿದೆ. ಇನ್ನೂ 10,000 ಮನೆಗಳು ನಿರ್ಮಾಣ ಹಂತದಲ್ಲಿದೆ. 80 ವರ್ಷದ ಮಹಿಳೆ ಪೂರ್ತಿ ಮೊತ್ತವನ್ನು ಪಾವತಿಸಿದ್ದು, ಅವರಿಗೆ ಇನ್ನೂ ಮನೆ ನೀಡಿಲ್ಲ. ಕಳೆದ ನಾಲ್ಕು ತಿಂಗಳಿಂದ ಅವರನ್ನು ಅಲೆದಾಡಿಸುತ್ತಿದ್ದು, ಆ ಮನೆಗೆ ಇನ್ನೂ ಕುಡಿಯುವ ನೀರು ಹಾಗೂ ವಿದ್ಯುತ್‌ ಸಂಪರ್ಕ ಸಿಕ್ಕಿಲ್ಲ. ಇವರು ಬಾಡಿಗೆ ಮನೆಯಲ್ಲಿದ್ದು, ಆ ಮನೆಯಿಂದಲೂ ಹೊರಬರುವ ಆತಂಕದಲ್ಲಿದ್ದಾರೆ. ಇದೇ ರೀತಿ ಸಾವಿರಾರು ಕನ್ನಡಿಗರು ಅರ್ಜಿ ಹಾಕಿ ಮನೆಗಾಗಿ ಕಾಯುತ್ತಿದ್ದಾರೆ. ಆದರೆ ಕಾಂಗ್ರೆಸ್‌ ಸರ್ಕಾರ ಬಾಂಗ್ಲಾ ನಿವಾಸಿಗಳಿಗೆ ಕೋಗಿಲು ಕ್ರಾಸ್‌ನಲ್ಲಿ ಮನೆ ನೀಡುತ್ತಿದೆ. ಇದನ್ನು ವಿರೋಧಿಸಿ ಜನವರಿ 5 ರಂದು ಪ್ರತಿಭಟನೆ ಮಾಡುತ್ತೇವೆ. ಜೊತೆಗೆ ಕಾನೂನು ಹೋರಾಟ ಮಾಡುತ್ತೇವೆ. ಮುಂದಿನ ಸದನದಲ್ಲೂ ಹೋರಾಟ ಮಾಡುತ್ತೇವೆ ಎಂದರು.

ಪೊಲೀಸರ ಮೇಲೆ ಒತ್ತಡ:

ಇದು ಕೊಲೆಗಡುಕ ಸರ್ಕಾರ. ಕಾಂಗ್ರೆಸ್‌ನಿಂದ ಕಾನೂನು ವ್ಯವಸ್ಥೆ ಹದಗೆಟ್ಟಿದ್ದು, ಪೊಲೀಸ್‌ ಅಧಿಕಾರಿಗಳಿಗೆ ಮಾನಸಿಕ ಒತ್ತಡ ಹೆಚ್ಚಿದೆ. ಪೊಲೀಸ್‌ ಅಧಿಕಾರಿಗಳು ಹಣ ಕೊಟ್ಟರೆ ಮಾತ್ರ ಪೋಸ್ಟಿಂಗ್‌ ಕೊಡುತ್ತಾರೆ. ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿಯವರ ಮೇಲೆ ಗುಂಡಿನ ದಾಳಿಯ ಪ್ರಯತ್ನ ನಡೆದಿದೆ. ಅದಕ್ಕೆ ಬಲಿಪಶುವಾಗಿ ಎಸ್‌ಪಿ ಯನ್ನು ಅಮಾನತು ಮಾಡಲಾಗಿದೆ. ಶಾಸಕ ಭರತ್‌ ರೆಡ್ಡಿ ಗನ್‌ ಮ್ಯಾನ್‌ ಗುಂಡು ಹಾರಿಸಿದ್ದು ಎಂದಿದ್ದಕ್ಕೆ ಎಸ್‌ಪಿ ಮೇಲೆ ಕ್ರಮ ವಹಿಸಿದ್ದಾರೆ. ಈಗ ಆ ಎಸ್‌ಪಿ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದಾರೆ. ಗನ್‌ ಮಾತ್ರ ವಶಕ್ಕೆ ಪಡೆದು ಆರೋಪಿಗಳು ರಾಜ್ಯ ಬಿಟ್ಟು ಓಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಓಡಿ ಹೋದ ನಂತರ ಎಫ್‌ಐಆರ್‌ ಮಾಡುತ್ತಾರೆ. ಸರ್ಕಾರದ ಒತ್ತಡದಿಂದ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 12 ಪೊಲೀಸ್‌ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎರಡು ಗಂಟೆಯಲ್ಲಿ ಎಸ್‌ಪಿಯನ್ನು ಅಮಾನತು ಮಾಡಿದ್ದಾರೆ ಎಂದರೆ, ಎರಡೂವರೆ ವರ್ಷದಿಂದ ಸಚಿವರಾಗಿರುವ ಗೃಹ ಸಚಿವರು, ಜಮೀರ್‌ ಅಹ್ಮದ್‌ ಅವರನ್ನು ಅಮಾನತು ಮಾಡಬೇಕಿತ್ತು, ಇದು ನೇಣಿನ ಭಾಗ್ಯದ ಸರ್ಕಾರ ಎಂದು ಟೀಕಿಸಿದರು.


Share this with Friends

Related Post