ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ದಿನದಿಂದ ದಿನಕ್ಕೆ ನೀರಿನ ಬೇಡಿಕೆ ಹೆಚ್ಚಾಗುತ್ತಿದ್ದು,ಬೆಂಗಳೂರಿನ ನೀರಿನ ಪೂರೈಕೆ ಸಮರ್ಪಕಗೊಳಿಸಿಕೊಳ್ಳಲು ಬೆಂಗಳೂರು ಜಲ ಮಂಡಳಿ ಇಸ್ರೇಲ್ ತಂತ್ರಜ್ಞಾನದ ಮೊರೆ ಹೋಗುತ್ತಿದೆ.
ಬೆಂಗಳೂರು ಜಲ ಮಂಡಳಿ ಕೇಂದ್ರ ಕಚೇರಿಯಲ್ಲಿ ಇಸ್ರೇಲ್ ಕಾನ್ಸುಲೇಟ್ ಜನರಲ್ ನೇತೃತ್ವದ ಉನ್ನತ ಮಟ್ಟದ ನಿಯೋಗದೊಂದಿಗೆ ಜಲ ಮಂಡಳಿಯ ಮಹತ್ವದ ಸಭೆ ನಡೆಯಿತು. ಸಭೆಯಲ್ಲಿ ಬೆಂಗಳೂರು ಜಲಮಂಡಳಿಯ ಕಾರ್ಯಕ್ಷಮತೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಇಸ್ರೇಲ್ ಕಾನ್ಸುಲೇಟ್ ಜನರಲ್ ನೇತೃತ್ವದ ಉನ್ನತ ಮಟ್ಟದ ನಿಯೋಗ, ಮಂಡಳಿಯ ಜೊತೆ ತಾಂತ್ರಿಕ ಹಾಗೂ ಸುಸ್ಥಿರ ನೀರು ನಿರ್ವಹಣೆಯಲ್ಲಿ ಪಾಲುದಾರಿಕೆ ಹೊಂದಲು ಒಲವು ವ್ಯಕ್ತಪಡಿಸಿದೆ.
ದೇಶದ ಅತಿದೊಡ್ಡ ಜಲಮಂಡಳಿಗಳಲ್ಲಿ ಒಂದಾದ ಬೆಂಗಳೂರು ಜಲ ಮಂಡಳಿ( BWSSB) ಕಾರ್ಯಾಚರಣೆಯನ್ನು ಶ್ಲಾಘಿಸಿದ ಇಸ್ರೇಲ್ ನಿಯೋಗ, ತ್ಯಾಜ್ಯ ನೀರು ಸಂಸ್ಕರಣೆ ಮತ್ತು ಸೋರಿಕೆ ಪತ್ತೆ ಹಚ್ಚುವಲ್ಲಿ ವಿಶ್ವದಲ್ಲೇ ಮುಂಚೂಣಿಯಲ್ಲಿರುವ ಇಸ್ರೇಲ್ ತಂತ್ರಜ್ಞಾನವನ್ನು ಬೆಂಗಳೂರಿನಲ್ಲಿ ಅಳವಡಿಸುವ ಬಗ್ಗೆ ಚರ್ಚೆ ನಡೆಸಿತು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಗರಕ್ಕೆ ವಿಶ್ವದರ್ಜೆಯ ನೀರಿನ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಈ ಪಾಲುದಾರಿಕೆಯು ಮಹತ್ವದ್ದಾಗಿದ್ದು, ತಂತ್ರಜ್ಞಾನ ನೀಡಲು ಅಂತಿಮ ಮುದ್ರೆ ಸಿಕ್ಕಲ್ಲಿ,ಬೆಂಗಳೂರಿನ ನೀರಿನ ಭದ್ರತೆಗೆ ಇಸ್ರೇಲ್ ತಂತ್ರಜ್ಞಾನದ ಸಾಥ್ ಸಿಗಲಿದೆ.
ಸಭೆಯಲ್ಲಿ ಜಲಮಂಡಳಿ ಅಧ್ಯಕ್ಷ ಡಾ. ವಿ. ರಾಮ್ ಪ್ರಸಾತ್ ಮನೋಹರ್ ಹಾಗೂ ಇಸ್ರೇಲ್ ಕಾನ್ಸುಲ್ ಜನರಲ್ ಓರ್ಲಿ ವೈಟ್ಜ್ಮನ್ ಹಾಗಹ ಇತರ ಅಧಿಕಾರಿಗಳು ಉಪಸ್ಥಿತರಿದ್ದರು

