ಬೆಂಗಳೂರು: ರಾಷ್ಟ್ರಕವಿ ಕುವೆಂಪುರವರ ಮೈಸೂರಿನ ನಿವಾಸ ಉದಯರವಿಯನ್ನು ರಾಷ್ಟ್ರ ಕವಿ ಸ್ಮಾರಕವಾಗಿ ಸಂರಕ್ಷಿಸಿ ಅಭಿವೃದ್ಧಿಪಡಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವಶಿವರಾಜ ಎಸ್.ತಂಗಡಗಿ ಭರವಸೆ ನೀಡಿದ್ದಾರೆ.
ವಿಧಾನ ಪರಿಷತ್ತಿನ ಕಲಾಪದಲ್ಲಿ ಸದಸ್ಯ ಪ್ರತಾಪ್ ಸಿಂಹ ನಾಯಕ್ ಕೆ.ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ರಾಷ್ಟ್ರಕವಿ ಕುವೆಂಪು ಅವರ ಮಗಳು ಮೈಸೂರು ನಿವಾಸ ಉದಯರವಿಯನ್ನು ಸ್ಮಾರಕವನ್ನಾಗಿ ಸಂರಕ್ಷಿಸಿ ಸರ್ಕಾರಕ್ಕೆ ಹಸ್ತಾಂತರಿಸಲು ಕೆಲವು ಬೇಡಿಕೆಗಳನ್ನು ಸಲ್ಲಿಸಿರುತ್ತಾರೆ.
ಈಗಾಗಲೇ ರಾಷ್ಟ್ರ ಕವಿ ಕುವೆಂಪು ಅವರ ಮಗಳು ಮತ್ತು ಅಳಿಯ ಅವರ ಜೊತೆ ಮಾತನಾಡಿದ್ದು, ಕುವೆಂಪು ರವರು ವಾಸವಿದ್ದ ಉದಯರವಿ ನಿವಾಸವನ್ನು ವಸ್ತು ಸಂಗ್ರಹಾಲಯವಾಗಿ ಅಭಿವೃದ್ಧಿ ಪಡಿಸುವ ಬಗ್ಗೆ ಮುಖ್ಯ ಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರವನ್ನು ಕೈಗೊಳ್ಳುವುದಾಗಿ ತಿಳಿಸಿದರು.
ಕುವೆಂಪು ದರ್ಶನವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಸ್ಮಾರಕದ ಉದ್ದೇಶವಾಗಿದೆ ಅದಕ್ಕೆ ಪೂರಕವಾಗಿ ಉದಯರವಿ ನಿವಾಸವನ್ನು ಸ್ಮಾರಕವನ್ನಾಗಿಸಲಾಗುತ್ತದೆ ಎಂದರು.

