ಬೆಂಗಳೂರು:ಅಬಕಾರಿ ಇಲಾಖೆಯಲ್ಲಿ 6,000 ಕೋಟಿ ರೂ. ಹಗರಣ ನಡೆದಿದ್ದು, ಇದಕ್ಕೆ ಸಂಬಂದಿಸಿದಂತೆ 5 ದಾಖಲೆಗಳನ್ನು ನಾನು ನೀಡಿದ್ದೇನೆ.ಇಷ್ಟಾದರೂ ಸಚಿವ ಆರ್.ಬಿ.ತಿಮ್ಮಾಪುರ ರಾಜೀನಾಮೆ ನೀಡಿಲ್ಲ ಎಂದು ಕಿಡಿಕಾರಿದ ಪ್ರತಿಪಕ್ಷ ನಾಯಕ ಆರ್.ಅಶೋಕ್,ಸಚಿವರ ರಾಜೀನಾಮೆವರೆಗೂ ನಮ್ಮ ಹೋರಾಟ ನಿಲ್ಲಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಅವರು, ಇಡೀ ಕರ್ನಾಟಕ ಬೆಚ್ಚಿಬೀಳುವಂತೆ ಅಬಕಾರಿ ಇಲಾಖೆಯಲ್ಲಿ 6,000 ಕೋಟಿ ರೂ. ಹಗರಣ ನಡೆದಿದೆ. ಇದಕ್ಕೆ ಸಂಬಂದಿಸಿದಂತೆ 5 ದಾಖಲೆಗಳನ್ನು ನಾನು ನೀಡಿದ್ದೇನೆ. ಆಡಿಯೋ ದಾಖಲೆ, ಲೋಕಾಯುಕ್ತದಲ್ಲಿನ ದೂರಿನ ಪ್ರತಿ ನೀಡಿದ್ದೇನೆ. ಅಬಕಾರಿ ಇಲಾಖೆಯ ಜಂಟಿ ಆಯುಕ್ತ ಮಾತನಾಡಿದ ಮಾತಿನ ಧ್ವನಿ ಮುದ್ರಣ ಲಭ್ಯವಿದೆ. ಇಷ್ಟಾದರೂ ಸಚಿವ ಆರ್.ಬಿ.ತಿಮ್ಮಾಪುರ ರಾಜೀನಾಮೆ ನೀಡಿಲ್ಲ. ಹಿಂದೆ ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆ ಕೊಟ್ಟು ತನಿಖೆಯ ಬಳಿಕ ಮತ್ತೆ ಸಚಿವರಾಗಿದ್ದರು. ಅದರಂತೆಯೇ ತಿಮ್ಮಾಪುರ ಕೂಡ ರಾಜೀನಾಮೆ ನೀಡಿ, ತನಿಖೆಯಾಗಲಿ. ಬಳಿಕ ಆರೋಪಮುಕ್ತರಾಗಿ ಮತ್ತೆ ಸಚಿವರಾಗಲಿ ಎಂದರು.
ಮದ್ಯ ಮಾರಾಟಗಾರರು ಅಬಕಾರಿ ಇಲಾಖೆ ಅಧಿಕಾರಿಗಳು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಇದರ ವಿರುದ್ಧ ಕ್ರಮ ವಹಿಸದಿದ್ದರೆ ಸಿಎಂ ಸಿದ್ದರಾಮಯ್ಯನವರಿಗೆ ಇದರಲ್ಲಿ ಪಾಲು ಇದೆ ಎಂದೇ ಭಾವಿಸಬೇಕಾಗುತ್ತದೆ. ಬಳ್ಳಾರಿ ಲೋಕಸಭಾ ಚುನಾವಣೆಗೆ ಅಕ್ರಮವಾಗಿ ಹಣ ಬಳಸಲಾಗಿತ್ತು. ಈಗ ಅಸ್ಸಾಂ ಹಾಗೂ ಕೇರಳ ಚುನಾವಣೆಗೂ ಹಣ ಬಳಸಲಾಗುತ್ತಿದೆ. ಇದು ಕೇವಲ ಎಟಿಎಂ ಅಲ್ಲ, ಕರ್ನಾಟಕವನ್ನು ಕೇಂದ್ರದ ಕಾಂಗ್ರೆಸ್ ನಾಯಕರು ರಿಸರ್ವ್ ಬ್ಯಾಂಕ್ ಮಾಡಿಕೊಂಡಿದ್ದಾರೆ ಎಂದರು.

