Fri. Mar 6th, 2026

ಎಐ (AI) ಆಧಾರಿತ ನೀರು ನಿರ್ವಹಣೆಯಲ್ಲಿ ಬೆಂಗಳೂರು ಜಲಮಂಡಳಿ ಜಾಗತಿಕ ಮಾದರಿ: ಡಾ. ರಾಮ್ ಪ್ರಸಾತ್ ಮನೋಹರ್

Share this with Friends

ನವದೆಹಲಿ : ನಗರದ ನೀರು ನಿರ್ವಹಣೆಯಲ್ಲಿ ಕೃತಕ ಬುದ್ಧಿಮತ್ತೆಯ (Artificial Intelligence – AI) ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಬೆಂಗಳೂರು ಜಲಮಂಡಳಿಯು ಜಾಗತಿಕ ಮಟ್ಟದಲ್ಲಿ ಮಾದರಿಯಾಗಿ ಹೊರಹೊಮ್ಮಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷರು ಹಾಗೂ ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕರಾದ ಡಾ. ವಿ. ರಾಮ್ ಪ್ರಸಾತ್ ಮನೋಹರ್ (ಐಎಎಸ್) ತಿಳಿಸಿದರು.

ನವದೆಹಲಿಯ ಪ್ರತಿಷ್ಠಿತ ಭಾರತ್ ಮಂಟಪದಲ್ಲಿ ಇಂದು ನಡೆದ ‘ಎಐ ಇಂಪ್ಯಾಕ್ಟ್ ಶೃಂಗಸಭೆ-2026’ ರಲ್ಲಿ ಪಾಲ್ಗೊಂಡು “ಮಾಡೆಲ್‌ ಟೂ ಮಾಸಸ್‌  ಹವಾಮಾನ ವೈಪರೀತ್ಯ ಎದುರಿಸಲು ಎಐ ಬಳಕೆ” (From Models to the Masses: Deploying AI for Climate Resilience) ಎಂಬ ಸಂವಾದದಲ್ಲಿ ಮಾತನಾಡಿದ ಅವರು, ಬೆಂಗಳೂರು ಜಲಮಂಡಳಿಯು ಸಾಂಪ್ರದಾಯಿಕ ಪದ್ಧತಿಯಿಂದ ಹೊರಬಂದು, ಸ್ಮಾರ್ಟ್ ತಂತ್ರಜ್ಞಾನ ಆಧಾರಿತ ಸಂಸ್ಥೆಯಾಗಿ ಹೇಗೆ ಬದಲಾಗಿದೆ ಎಂಬುದನ್ನು ವಿವರಿಸಿದರು.

ಇಂಧನ ದಕ್ಷತೆ ಮತ್ತು ಆರ್ಥಿಕ ಉಳಿತಾಯ:

ತಮ್ಮ ಭಾಷಣದಲ್ಲಿ ಮಂಡಳಿಯ ‘ಐಪಂಪ್‌ನೆಟ್’ (IPUMPNET) ವ್ಯವಸ್ಥೆಯ ಯಶಸ್ಸನ್ನು ಪ್ರತಿಪಾದಿಸಿದ ಅವರು, ಪಂಪಿಂಗ್ ಸ್ಟೇಷನ್‌ಗಳು ಮತ್ತು ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ (STP) ನಿರ್ವಹಣೆಯಲ್ಲಿ ಈ ವ್ಯವಸ್ಥೆ ಕ್ರಾಂತಿ ಮಾಡಿದೆ ಎಂದರು.

“ನಮ್ಮ ಪಂಪಿಂಗ್ ಸ್ಟೇಷನ್‌ಗಳು ಮತ್ತು ಎಸ್‌ಟಿಪಿಗಳಲ್ಲಿ ಎಐ ಆಧಾರಿತ ಪಂಪ್‌ಗಳನ್ನು ಅಳವಡಿಸುವ ಮೂಲಕ ಕಾರ್ಯಕ್ಷಮತೆಯನ್ನು ಹೆಚ್ಚಿಸಿದ್ದೇವೆ. ಇದರಿಂದ ವಾರ್ಷಿಕವಾಗಿ 40 ಕೋಟಿ ರೂ.ಗೂ ಅಧಿಕ ವಿದ್ಯುತ್ ವೆಚ್ಚವನ್ನು ಉಳಿತಾಯ ಮಾಡುತ್ತಿದ್ದೇವೆ. ಇದು ಕೇವಲ ಮಂಡಳಿಗೆ ಆರ್ಥಿಕ ಲಾಭವಷ್ಟೇ ಅಲ್ಲ, ಇಂಗಾಲದ ಹೊರಸೂಸುವಿಕೆಯನ್ನು ತಗ್ಗಿಸುವ ಮೂಲಕ ಪರಿಸರಕ್ಕೂ ದೊಡ್ಡ ಕೊಡುಗೆ ನೀಡಿದ್ದೇವೆ,” ಎಂದು ಡಾ. ಮನೋಹರ್ ತಿಳಿಸಿದರು.

ನೀರು ಸೋರಿಕೆ ವಿರುದ್ಧ ತಂತ್ರಜ್ಞಾನ ಸಮರ:

ಲೆಕ್ಕಕ್ಕೆ ಸಿಗದ ನೀರಿನ (Non-Revenue Water – NRW) ಸವಾಲನ್ನು ಎದುರಿಸಲು ಮಂಡಳಿ ಹೈಟೆಕ್ ಪರಿಹಾರ ಕಂಡುಕೊಂಡಿದೆ. “ನೀರು ಸೋರಿಕೆ ಪತ್ತೆಹಚ್ಚಲು ಮತ್ತು ಅನಧಿಕೃತ ಸಂಪರ್ಕಗಳನ್ನು ನಿಖರವಾಗಿ ಗುರುತಿಸಲು ನಾವು ಈಗ ಎಐ ಚಾಲಿತ ರೋಬೋಟಿಕ್ಸ್ (AI-enabled Robotics) ಬಳಸುತ್ತಿದ್ದೇವೆ. ಮುಂಜಾಗ್ರತಾ ಕ್ರಮಗಳ ಮೂಲಕ ಸೋರಿಕೆಯಾಗುತ್ತಿದ್ದ ಅಮೂಲ್ಯವಾದ ನೀರನ್ನು ಉಳಿಸಿ, ಅದನ್ನು ಅಗತ್ಯವಿರುವ ನಾಗರಿಕರಿಗೆ ತಲುಪಿಸಲು ಸಾಧ್ಯವಾಗುತ್ತಿದೆ,” ಎಂದು ವಿವರಿಸಿದರು.

ವಿಜ್ಞಾನ ಆಧಾರಿತ ಅಂತರ್ಜಲ ರಕ್ಷಣೆ:

ನಗರದ ಅಂತರ್ಜಲ ಮರುಪೂರಣ ಕಾರ್ಯಕ್ಕೆ ವೈಜ್ಞಾನಿಕ ಸ್ಪರ್ಶ ನೀಡಲು ಭಾರತೀಯ ವಿಜ್ಞಾನ ಸಂಸ್ಥೆ (IISc) ಜೊತೆಗೆ ಸಹಯೋಗವನ್ನು ಹೊಂದಿರುವ ಬಗ್ಗೆ ವಿವರಣೆ ನೀಡಿದರು.

“ನಾವು ಬೆಂಗಳೂರು ನಗರದಾದ್ಯಂತ 40 ಕೆರೆಗಳನ್ನು ಸಂಸ್ಕರಿಸಿದ ನೀರಿನಿಂದ ತುಂಬಿಸುತ್ತಿದ್ದೇವೆ. ಬೆಂಗಳೂರು ನಗರ ಅಂತರ್ಜಲ ಮಟ್ಟ ಮತ್ತು ಪರಿಸರದ ಮೇಲಾಗುವ ಪರಿಣಾಮವನ್ನು ನೈಜ ಸಮಯದಲ್ಲಿ ಅರಿಯಲು ಹಾಗೂ ಅಂತರ್ಜಲ ಮಟ್ಟವನ್ನು ತಿಳಿಯಲು ‘ಎಐ ಆಧಾರಿತ ಐಒಟಿ ಸೆನ್ಸಾರ್‌’ಗಳನ್ನು (IoT Sensors) ಅಳವಡಿಸಿದ್ದೇವೆ. ನಾವು ಕೇವಲ ಕೆರೆ ತುಂಬಿಸುತ್ತಿಲ್ಲ, ಜೊತೆಯಲ್ಲಿಯೇ ನಿಖರವಾದ ದತ್ತಾಂಶದೊಂದಿಗೆ ಅಂತರ್ಜಲ ಮಟ್ಟದ ಸುಧಾರಣೆಯನ್ನು ದಾಖಲಿಸುತ್ತಿದ್ದೇವೆ,” ಎಂದರು.

ಬೃಹತ್ ಬಳಕೆದಾರರಿಗೆ ನಿಖರವಾದ ಬಿಲ್ ನೀಡಲು ಎಐ ಆಧಾರಿತ ಸ್ಮಾರ್ಟ್ ವಾಟರ್ ಮೀಟರ್‌ಗಳನ್ನು ಅಳವಡಿಸುವ ಪ್ರಸ್ತಾಪವಿದೆ ಎಂದರು. ಅಲ್ಲದೆ, ನಗರದ ನೀರು ಸರಬರಾಜು ವ್ಯವಸ್ಥೆಯ ಮೈಲಿಗಲ್ಲಾದ ಅತ್ಯಾಧುನಿಕ ‘ಎಐ ಸಮಗ್ರ ಸ್ಕಾಡಾ ನಿರ್ವಹಣಾ ವ್ಯವಸ್ಥೆ’ಯನ್ನು (AI-Integrated Comprehensive SCADA) ಸದ್ಯದಲ್ಲೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ಈ ಸಂವಾದದಲ್ಲಿ ಗೂಗಲ್ ಡೀಪ್‌ಮೈಂಡ್, ಐಐಟಿ ದೆಹಲಿ ಮತ್ತು ಸಿಇಇಡಬ್ಲ್ಯೂ (CEEW) ನ ಜಾಗತಿಕ ತಜ್ಞರು ಭಾಗವಹಿಸಿದ್ದರು.


Share this with Friends

Related Post