ಬೆಂಗಳೂರು: ಬೃಹತ್ ಬೆಂಗಳೂರು ವ್ಯಾಪ್ತಿಯ ಮತದಾರರ ಪಟ್ಟಿಯಲ್ಲಿ ಕಂಡುಬಂದಿರುವ ಗಂಭೀರ ಲೋಪದೋಷಗಳನ್ನು ತಕ್ಷಣವೇ ಸರಿಪಡಿಸಬೇಕು ಹಾಗೂ ಮನೆಗಳ ಮರು ಮ್ಯಾಪಿಂಗ್ ಮಾಡಬೇಕು ಎಂದು ಒತ್ತಾಯಿಸಿ ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.
ಮತದಾರರ ಪಟ್ಟಿಯಲ್ಲಿನ ಅಸ್ತವ್ಯಸ್ತತೆ ಕೇವಲ ತಾಂತ್ರಿಕ ದೋಷವಲ್ಲ, ಇದು ವ್ಯವಸ್ಥಿತವಾಗಿ ನಡೆಸಿರುವ ಪಿತೂರಿಯಂತೆ ಕಾಣುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಪತ್ರದಲ್ಲಿನ ಪ್ರಮುಖ ಅಂಶಗಳು:
ಕುಟುಂಬಗಳ ವಿಭಜನೆ: ಒಂದೇ ಕುಟುಂಬದ ಸದಸ್ಯರ ಹೆಸರುಗಳನ್ನು ಬೇರೆ ಬೇರೆ ವಾರ್ಡ್ ಹಾಗೂ ಮತಗಟ್ಟೆಗಳಿಗೆ ಹಂಚಿಕೆ ಮಾಡಲಾಗಿದೆ. ಇದರಿಂದ ಮತದಾನದ ದಿನ ಮತದಾರರು ಪರದಾಡುವಂತಾಗಿದೆ.
ತಪ್ಪು ಮಾಹಿತಿ: ಗುರುತಿನ ಚೀಟಿಗಳಲ್ಲಿ ಮನೆ ಸಂಖ್ಯೆ ಹಾಗೂ ರಸ್ತೆಗಳ ಹೆಸರುಗಳನ್ನು ತಪ್ಪಾಗಿ ನಮೂದಿಸಲಾಗಿದೆ. ಇದು ಗೊಂದಲಕ್ಕೆ ಕಾರಣವಾಗಿದೆ.
ಹೆಸರುಗಳ ನಾಪತ್ತೆ: ಪಟ್ಟಿಯಿಂದ ಸಾವಿರಾರು ಅರ್ಹ ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ. ಕೆಲವು ಕಡೆಗಳಲ್ಲಿ ಇಡೀ ಬೀದಿಯ ಮತದಾರರ ಹೆಸರುಗಳೇ ಪಟ್ಟಿಯಲ್ಲಿ ಇಲ್ಲದಂತಾಗಿದೆ. ಇನ್ನು ಕೆಲವು ಕಡೆ ಒಂದೇ ಹೆಸರನ್ನು ಎರಡು ಬಾರಿ ಸೇರಿಸಲಾಗಿದೆ.
ವ್ಯವಸ್ಥಿತ ಸಂಚು: “ಈ ಎಲ್ಲಾ ಲೋಪಗಳು ನೋಡಲು ಆಕಸ್ಮಿಕ ಎನಿಸುತ್ತಿಲ್ಲ. ರಾಜಕೀಯ ಪಕ್ಷಗಳಲ್ಲಿ ಗೊಂದಲ ಮೂಡಿಸಲು ವ್ಯವಸ್ಥಿತವಾಗಿ ಇಂತಹ ಲೋಪಗಳನ್ನು ಎಸಗಲಾಗಿದೆ,” ಎಂದು ಡಿ.ಕೆ. ಶಿವಕುಮಾರ್ ಪತ್ರದಲ್ಲಿ ದೂರಿದ್ದಾರೆ.
ವಿಶೇಷ ಅಭಿಯಾನಕ್ಕೆ ಒತ್ತಾಯ:
ಮತದಾರರ ಪಟ್ಟಿಯ ನಿಖರತೆಯನ್ನು ಕಾಪಾಡುವುದು ಮತ್ತು ನಕಲಿ ಮತದಾರರನ್ನು ಪಟ್ಟಿಯಿಂದ ಹೊರಹಾಕುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಚುನಾವಣಾ ಆಯೋಗವು ತಕ್ಷಣವೇ ಮನೆಗಳ ಮ್ಯಾಪಿಂಗ್ ನಡೆಸಿ, ಪಟ್ಟಿಯನ್ನು ಪರಿಷ್ಕರಿಸಲು ವಿಶೇಷ ಅಭಿಯಾನ ಹಮ್ಮಿಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.

