Fri. Mar 6th, 2026

ಭಕ್ತಿಯ ಸಾಗರದಲ್ಲಿ ತಿಮ್ಮಾಪುರ ಮಹಿಳೆಯರು: ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ 17 ಲಕ್ಷ ರೂ. ಗೃಹಲಕ್ಷ್ಮಿ ಹಣ ಅರ್ಪಣೆ

Share this with Friends

ಬೆಳಗಾವಿ:ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ’ ಯೋಜನೆಯು ಕೇವಲ ಕುಟುಂಬಗಳ ಆರ್ಥಿಕ ಆಸರೆಯಾಗದೆ, ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಿಗೂ ಪ್ರೇರಣೆಯಾಗುತ್ತಿದೆ ಎಂಬುದಕ್ಕೆ ತಿಮ್ಮಾಪುರ ಗ್ರಾಮದ ಮಹಿಳೆಯರು ಸಾಕ್ಷಿಯಾಗಿದ್ದಾರೆ.

ಗ್ರಾಮದ ಸುಮಾರು 850ಕ್ಕೂ ಹೆಚ್ಚು ಮಹಿಳೆಯರು ತಮಗೆ ಬಂದ ಒಂದು ತಿಂಗಳ ಗೃಹಲಕ್ಷ್ಮಿ ಯೋಜನೆಯ ಒಟ್ಟು 17 ಲಕ್ಷ ರೂಪಾಯಿಗಳನ್ನು ಗ್ರಾಮದ ರೇಣುಕಾ ಯಲ್ಲಮ್ಮ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಅರ್ಪಿಸುವ ಮೂಲಕ ನಾಡಿಗೆ ಮಾದರಿಯಾಗಿದ್ದಾರೆ.

ಸರ್ಕಾರದ ಯೋಜನೆಗೆ ಭಕ್ತಿಯ ಸ್ಪರ್ಶ:

ಮುಖ್ಯಮಂತ್ರಿ  ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಾರಥ್ಯದಲ್ಲಿ ಜಾರಿಗೆ ಬಂದ ಈ ಯೋಜನೆಯ ಫಲಾನುಭವಿಗಳು ತಮ್ಮ ವೈಯಕ್ತಿಕ ಅಗತ್ಯಗಳನ್ನು ಬದಿಗಿರಿಸಿ, ಸಮಾಜದ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿರುವುದು ವಿಶೇಷ. ಮಹಿಳೆಯರು ಆರ್ಥಿಕವಾಗಿ ಸ್ವತಂತ್ರರಾಗಬೇಕು ಎಂಬ ಸರ್ಕಾರದ ಆಶಯವು ಈ ಮೂಲಕ ಸಾರ್ಥಕಗೊಂಡಂತಾಗಿದೆ.

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಶ್ಲಾಘನೆ:

ತಿಮ್ಮಾಪುರ ಮಹಿಳೆಯರ ಈ ಅಪೂರ್ವ ಕಾರ್ಯವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳಕರ್ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. “ತಾಯಂದಿರ ಈ ಭಕ್ತಿ ಮತ್ತು ತ್ಯಾಗ ಮನೋಭಾವ ಕಂಡು ನನಗೆ ಅಪಾರ ಹೆಮ್ಮೆಯಾಗುತ್ತಿದೆ. ಗೃಹಲಕ್ಷ್ಮಿ ಯೋಜನೆಯು ಇಂದು ಕೇವಲ ಆರ್ಥಿಕ ಶಕ್ತಿಯಾಗದೆ, ಧಾರ್ಮಿಕ ಕಾರ್ಯಗಳಿಗೂ ವಿನಿಯೋಗವಾಗುತ್ತಿರುವುದು ಯೋಜನೆಯ ಯಶಸ್ಸಿಗೆ ಸಾಕ್ಷಿ,” ಎಂದು ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ಗ್ರಾಮಸ್ಥರ ಸಂಭ್ರಮ:

ತಾಯಂದಿರ ಈ ನಿರ್ಧಾರದಿಂದ ಇಡೀ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ದೇವಸ್ಥಾನದ ಸಮಿತಿಯು ಮಹಿಳೆಯರ ಈ ಉದಾತ್ತ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸಿದ್ದು, ಸಮಾಜಕ್ಕೆ ಇದೊಂದು ದೊಡ್ಡ ಪ್ರೇರಣೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.


Share this with Friends

Related Post