ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ವರದಿಯಾದ ತಾಯಿ ಮರಣಗಳ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ಆರೋಗ್ಯ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಲು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಈ ನಿಯಮಗಳನ್ನು ಉಲ್ಲಂಘಿಸುವ ವೈದ್ಯರು ಮತ್ತು ಸಿಬ್ಬಂದಿಗಳ ವಿರುದ್ಧ ಕಟ್ಟುನಿಟ್ಟಿನ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಎಚ್ಚರಿಸಿದ್ದಾರೆ.
ತಾಯಿ ಮರಣಗಳ ಪರಿಶೀಲನಾ ವರದಿಯ ಆಧಾರದ ಮೇಲೆ ಹೊರಡಿಸಲಾದ ಪ್ರಮುಖ ನಿರ್ದೇಶನಗಳ ಕುರಿತು ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದಾರೆ.
ತಜ್ಞ ವೈದ್ಯರ ಲಭ್ಯತೆ ಕಡ್ಡಾಯ:
ಒಬ್ಬರೇ ಸ್ತ್ರೀರೋಗ ತಜ್ಞರಿರುವ ಆಸ್ಪತ್ರೆಗಳಿಂದ ಅವರನ್ನು ಬೇರೆಡೆಗೆ ನಿಯೋಜಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಈಗಾಗಲೇ ಅಂತಹ ನಿಯೋಜನೆಗಳಿದ್ದರೆ ಅವುಗಳನ್ನು ತಕ್ಷಣ ರದ್ದುಗೊಳಿಸಲು ಸೂಚಿಸಲಾಗಿದೆ. ಅಲ್ಲದೆ, ತಾಲೂಕು ಆಸ್ಪತ್ರೆಗಳಲ್ಲಿಯೇ ಲ್ಯಾಪರೋಸ್ಕೋಪಿಕ್ ಶಸ್ತ್ರಚಿಕಿತ್ಸೆ ನೀಡಲು ಅಗತ್ಯ ತರಬೇತಿ ನೀಡಲಾಗುವುದು.
ಸ್ಥಳೀಯ ವಾಸ್ತವ್ಯಕ್ಕೆ ಸೂಚನೆ:
ಎಲ್ಲಾ ತಜ್ಞ ವೈದ್ಯರು ತಾವು ಕರ್ತವ್ಯ ನಿರ್ವಹಿಸುವ ಕೇಂದ್ರ ಸ್ಥಾನದಲ್ಲೇ ವಾಸಿಸುವುದು ಕಡ್ಡಾಯ. ಇದನ್ನು ಖಚಿತಪಡಿಸಿಕೊಳ್ಳಲು ಮೊಬೈಲ್ ಆಧಾರಿತ ‘KAMS’ ಹಾಜರಾತಿ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ.
ರಕ್ತದ ಕೊರತೆ ನೀಗಿಸಲು ಕ್ರಮ:
ಪ್ರಸವ ಸೇವೆ ನೀಡುವ ಆಸ್ಪತ್ರೆಗಳಲ್ಲಿ ರಕ್ತದ ಲಭ್ಯತೆ ನಿರಂತರವಾಗಿರಬೇಕು. ಇದಕ್ಕಾಗಿ ಖಾಸಗಿ ರಕ್ತನಿಧಿಗಳೊಂದಿಗೆ ಒಪ್ಪಂದ (MoU) ಮಾಡಿಕೊಳ್ಳಲು ನಿರ್ದೇಶಿಸಲಾಗಿದೆ. ಖಾಸಗಿ ರಕ್ತದಾನ ಶಿಬಿರಗಳಲ್ಲಿ ಸಂಗ್ರಹವಾಗುವ ಒಟ್ಟು ರಕ್ತದ ಪೈಕಿ ಶೇ. 25ರಷ್ಟನ್ನು ಸರ್ಕಾರಿ ಆಸ್ಪತ್ರೆಗಳಿಗೆ ನೀಡುವುದು ಇನ್ನು ಮುಂದೆ ಕಡ್ಡಾಯವಾಗಲಿದೆ.
ರಿಯಲ್-ಟೈಮ್ ದಾಖಲಾತಿ ಮತ್ತು ನಿಗಾ:
ಪ್ರತಿ ಪ್ರಸವ ಪ್ರಕರಣವನ್ನು ‘ARC ಪಾರ್ಟೋಗ್ರಾಫ್’ ಮೂಲಕ ರಿಯಲ್-ಟೈಮ್ನಲ್ಲಿ ದಾಖಲಿಸಬೇಕು. ಇದರಲ್ಲಿ ವಿಳಂಬ ಅಥವಾ ನಿರ್ಲಕ್ಷ್ಯ ಕಂಡುಬಂದಲ್ಲಿ, ಸಂಬಂಧಿತ ಆಸ್ಪತ್ರೆಯ ತಂಡದ ಪ್ರೋತ್ಸಾಹಧನವನ್ನು ತಡೆಹಿಡಿಯಲಾಗುವುದು. ಅಲ್ಲದೆ, ತುರ್ತು ಕರ್ತವ್ಯದಲ್ಲಿರುವ ತಜ್ಞರು ಪ್ರಸವ ಕೊಠಡಿ ಮತ್ತು ಬಾಣಂತಿ ವಾರ್ಡ್ಗಳಿಗೆ ನಿಯಮಿತವಾಗಿ ಭೇಟಿ ನೀಡಬೇಕು.
ಒಟ್ಟಾರೆಯಾಗಿ, ಮಾತೃ ಮರಣ ಪ್ರಮಾಣವನ್ನು ತಗ್ಗಿಸಲು ಸರ್ಕಾರ ಈ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು, ನಿಯಮ ಪಾಲಿಸದವರ ವಿರುದ್ಧ ಸೇವಾ ನಿಯಮಾವಳಿಗಳ ಅಡಿಯಲ್ಲಿ ಕ್ರಮ ಜರುಗಿಸಲಾಗುವುದು ಎಂದು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

