Sat. Jun 6th, 2026

“ಬೆಂಗಳೂರು ಆಡಳಿತಕ್ಕೆ ಆರ್‌ಸಿಬಿ ‘ಬಿಗ್ ಸಲ್ಯೂಟ್’: ಅಭಿಮಾನಿಗಳ ಸುರಕ್ಷಿತ ಸಂಭ್ರಮಕ್ಕೆ ಧನ್ಯವಾದ!”

Share this with Friends

Photo credit:RCB Page

ಬೆಂಗಳೂರು: ಶನಿವಾರ ರಾತ್ರಿ ಚಿನ್ನಸ್ವಾಮಿ ಕ್ರೀಡಾಂಗಣ ‘ಈ ಸಲ ಕಪ್ ನಮ್ದೇ’ ಎಂಬ ಗರ್ಜನೆಯಿಂದ ನಡುಗುತ್ತಿದ್ದರೆ, ಮೈದಾನದ ಹೊರಗೆ ಸದ್ದಿಲ್ಲದೆ ಮತ್ತೊಂದು ಗೆಲುವು ದಾಖಲಾಗಿತ್ತು. ಅದುವೇ – ವ್ಯವಸ್ಥಿತ ಆಯೋಜನೆಯ ಗೆಲುವು.

ಲಕ್ಷಾಂತರ ಅಭಿಮಾನಿಗಳು ಜೇನುಗೂಡಿನಂತೆ ಜಮಾಯಿಸುವ ಬೆಂಗಳೂರಿನ ಹೃದಯಭಾಗದಲ್ಲಿ, ಒಂದು ಐಪಿಎಲ್ ಪಂದ್ಯವನ್ನು ಸುಗಮವಾಗಿ ನಡೆಸುವುದು ಸಣ್ಣ ಮಾತಲ್ಲ. ಆದರೆ, ನಿನ್ನೆ ರಾತ್ರಿ ನಡೆದ ಪಂದ್ಯದಲ್ಲಿ ಅಭಿಮಾನಿಗಳ ಸಂಭ್ರಮಕ್ಕೆ ಯಾವುದೇ ವಿಘ್ನ ಎದುರಾಗಲಿಲ್ಲ. ಈ ಯಶಸ್ವಿ ಸಮನ್ವಯಕ್ಕಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮ್ಯಾನೇಜ್‌ಮೆಂಟ್, ನಗರದ ವಿವಿಧ ಇಲಾಖೆಗಳಿಗೆ ಸಾಷ್ಟಾಂಗ ನಮಸ್ಕಾರ ಹಾಕಿದೆ.

ಖಾಕಿ ಕಣ್ಗಾವಲು – ಮೆಟ್ರೋ ಸಾಥ್:

ಬೆಂಗಳೂರು ಸಿಟಿ ಪೊಲೀಸ್ ಮತ್ತು ಅಗ್ನಿಶಾಮಕ ದಳದ ಹಗಲಿರುಳು ಶ್ರಮ, ಅಭಿಮಾನಿಗಳ ಸುರಕ್ಷತೆಗೆ ಭದ್ರಕೋಟೆಯಾಗಿತ್ತು. ಇನ್ನು, ಪಂದ್ಯ ಮುಗಿದು ತಡರಾತ್ರಿಯಾದರೂ ನಮ್ಮ ಮೆಟ್ರೋ ರೈಲುಗಳು ಅಭಿಮಾನಿಗಳನ್ನು ಸುರಕ್ಷಿತವಾಗಿ ಮನೆ ತಲುಪಿಸುವ ಮೂಲಕ ‘ನಮ್ಮ ಬೆಂಗಳೂರಿನ’ ಅತಿಥಿ ಸತ್ಕಾರವನ್ನು ಮೆರೆದವು. ಬಿಬಿಎಂಪಿ ಮತ್ತು ಲೋಕೋಪಯೋಗಿ ಇಲಾಖೆಯ ವ್ಯವಸ್ಥಿತ ಸಿದ್ಧತೆಗಳು ಕ್ರೀಡಾಂಗಣದ ಪರಿಸರವನ್ನು ಅಚ್ಚುಕಟ್ಟಾಗಿರಿಸಿದ್ದವು.

“ಅಭಿಮಾನಿಗಳೇ ನಮ್ಮ ಆಸ್ತಿ”:

ಈ ಬಗ್ಗೆ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿರುವ ಆರ್‌ಸಿಬಿ ತಂಡ, “ನಮ್ಮ ಅಭಿಮಾನಿಗಳ ಸುರಕ್ಷತೆ ಮತ್ತು ಹಿತರಕ್ಷಣೆಯೇ ನಮಗೆ ಅತಿ ಮುಖ್ಯ. ಈ ನಿಟ್ಟಿನಲ್ಲಿ ಬೆನ್ನೆಲುಬಾಗಿ ನಿಂತ ಕರ್ನಾಟಕ ಸರ್ಕಾರ ಹಾಗೂ ಬೆಂಗಳೂರಿನ ಎಲ್ಲಾ ಇಲಾಖೆಗಳಿಗೆ ನಾವು ಚಿರಋಣಿ” ಎಂದು ಧನ್ಯವಾದ ಅರ್ಪಿಸಿದೆ.

ಗೆಲುವಿನ ಸಂಭ್ರಮದ ಜೊತೆಗೆ, ವ್ಯವಸ್ಥೆಯ ಶಿಸ್ತು ಕೂಡ ಕ್ರಿಕೆಟ್ ಪ್ರೇಮಿಗಳ ಮನ ಗೆದ್ದಿರುವುದು ಈ ಬಾರಿಯ ವಿಶೇಷ

 


Share this with Friends

Related Post