ಬೆಂಗಳೂರು: ಸದಾ ಒಂದಿಲ್ಲೊಂದು ವಿಭಿನ್ನ ಆಲೋಚನೆಗಳ ಮೂಲಕ ಸದ್ದು ಮಾಡುವ ‘ರಿಯಲ್ ಸ್ಟಾರ್’ ಉಪೇಂದ್ರ, ಈಗ ಏಪ್ರಿಲ್ 1ರ ‘ಮೂರ್ಖರ ದಿನ’ದ ಹೆಸರಲ್ಲಿ ಹೊಸ ಕುತೂಹಲ ಮೂಡಿಸಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ಬರಿ ‘ಖಾಲಿ ಗ್ಯಾಸ್ ಸಿಲಿಂಡರ್’ ಫೋಟೋ ಪೋಸ್ಟ್ ಮಾಡಿ, ಯಾವುದೇ ಶೀರ್ಷಿಕೆ ನೀಡದೆ ಅಭಿಮಾನಿಗಳನ್ನು ತಲೆಕೆಡಿಸಿಕೊಳ್ಳುವಂತೆ ಮಾಡಿದ್ದರು. ಆ ಸಿಲಿಂಡರ್ ಬೆಲೆ ಏರಿಕೆ ಬಗ್ಗೆಯೋ, ಪ್ರಜಾಕೀಯದ ಚಿಹ್ನೆಯೋ ಅಥವಾ ಸಿನಿಮಾದ ಕಥೆಯೋ ಎಂದು ಜನ ಚರ್ಚಿಸುತ್ತಿರುವಾಗಲೇ, ಈಗ ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದಾರೆ.
“ಏಪ್ರಿಲ್ 1ರಂದು ನಾನು ನಿಮ್ಮೊಂದಿಗೆ ನಿಜವಾಗಿಯೂ ಒಂದು ಸರಿಯಾದ ಲಿಂಕ್ ಹಂಚಿಕೊಳ್ಳುತ್ತಿದ್ದೇನೆ. ಇದು ಮೂರ್ಖರ ದಿನ ಎಂದು ಕನ್ಫ್ಯೂಸ್ ಆಗಬೇಡಿ,” ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಅಂದು ಯಾವುದೋ ಮಹತ್ವದ ಘೋಷಣೆ ಹೊರಬೀಳುವುದು ಪಕ್ಕಾ ಎನ್ನಲಾಗುತ್ತಿದೆ.
ಸಿಲಿಂಡರ್ ಮತ್ತು ಲಿಂಕ್ ನಡುವಿನ ಕನೆಕ್ಷನ್ ಏನು?
ಈ ಹಿಂದೆ ಸಿಲಿಂಡರ್ ಫೋಟೋ ಹಾಕಿದ್ದಾಗ ಅಭಿಮಾನಿಗಳು ತಮಗೆ ತೋಚಿದಂತೆ ಅರ್ಥೈಸಿದ್ದರು. ಈಗ ‘ಲಿಂಕ್’ ಹಂಚಿಕೊಳ್ಳುತ್ತೇನೆ ಎನ್ನುತ್ತಿರುವುದು ಬಹುಶಃ ಆ ಸಿಲಿಂಡರ್ ರಹಸ್ಯವನ್ನು ಬಿಚ್ಚಿಡಲಿಕ್ಕಾ? ಅಥವಾ ಅವರ ಬಹುನಿರೀಕ್ಷಿತ ‘UI’ ಚಿತ್ರದ ಟ್ರೈಲರ್ ಲಿಂಕ್ ಇರಬಹುದಾ? ಎಂಬ ಪ್ರಶ್ನೆ ಕಾಡುತ್ತಿದೆ.
ಸಾಮಾನ್ಯವಾಗಿ ಏಪ್ರಿಲ್ 1 ಎಂದರೆ ಜನರು ಸುಳ್ಳು ಸುದ್ದಿ ಎಂದು ನಿರ್ಲಕ್ಷಿಸುತ್ತಾರೆ. ಆದರೆ ಉಪ್ಪಿ ಮೊದಲೇ “ಇದು ನಿಜವಾದ ಲಿಂಕ್” ಎಂದು ಸ್ಪಷ್ಟಪಡಿಸಿರುವುದರಿಂದ, ಅಭಿಮಾನಿಗಳು ಅಂದು ಆ ‘ರಿಯಲ್’ ಅಪ್ಡೇಟ್ ನೋಡಲು ಕಾತರದಿಂದ ಕಾಯುತ್ತಿದ್ದಾರೆ.

