ಬೆಂಗಳೂರು: ಕ್ಯಾನ್ಸರ್ನಂತಹ ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಮನೆಯಲ್ಲಿ ಸೂಕ್ತ ವೈದ್ಯಕೀಯ ಆರೈಕೆ ನೀಡುವುದು ಕುಟುಂಬದವರಿಗೆ ದೊಡ್ಡ ಸವಾಲು. ಈ ಸವಾಲನ್ನು ನೀಗಿಸಲು ಬೆಂಗಳೂರು ಹಾಸ್ಪೀಸ್ ಟ್ರಸ್ಟ್ – ಕರುಣಾಶ್ರಯ ಸಂಸ್ಥೆಯು ರೂಪಿಸಿರುವ “ಮುಖ್ಯವಾದ ಕ್ಷಣಗಳು” (Moments That Matter) ಎಂಬ ವಿಶೇಷ ಶೈಕ್ಷಣಿಕ ವಿಡಿಯೋ ಸರಣಿಯ ಕನ್ನಡ ಆವೃತ್ತಿಯನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಆರೋಗ್ಯ ಸೌಧದಲ್ಲಿ ಲೋಕಾರ್ಪಣೆಗೊಳಿಸಿದರು.
ಮನೆಯಲ್ಲೇ ಸಿಗಲಿದೆ ತರಬೇತಿ:
ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಸಾಮಾನ್ಯ ಜನರಿಗೆ ರೋಗಿಗಳ ನಿರ್ವಹಣೆಯ ಬಗ್ಗೆ ವೈದ್ಯಕೀಯ ಜ್ಞಾನ ನೀಡುವ ನಿಟ್ಟಿನಲ್ಲಿ ಈ ಸರಣಿಯನ್ನು ಸಿದ್ಧಪಡಿಸಲಾಗಿದೆ. ಇದರಲ್ಲಿ ಒಟ್ಟು 17 ಸರಳ ಅನಿಮೇಷನ್ ಆಧಾರಿತ ವಿಡಿಯೋಗಳಿದ್ದು, ಬೆಡ್ಸೋರ್ಗಳ (ಬೆನ್ನು ಅಥವಾ ಚರ್ಮದ ಗಾಯ) ನಿರ್ವಹಣೆ, ಗಾಯಗಳಿಗೆ ಔಷಧ ಹಾಕುವುದು ಹಾಗೂ ಮೂತ್ರಕೋಶದ ಆರೈಕೆಯಂತಹ ಪ್ರಾಯೋಗಿಕ ಕೌಶಲ್ಯಗಳನ್ನು ಅತ್ಯಂತ ಸುಲಭವಾಗಿ ವಿವರಿಸಲಾಗಿದೆ ಎಂದು ಮಾಹಿತಿ ನೀಡಿದರು.
ರೋಗಿಗಳ ಘನತೆಗೆ ಆದ್ಯತೆ:
“ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಸೌಕರ್ಯ ಮತ್ತು ಅವರ ಘನತೆಯನ್ನು ಕಾಪಾಡುವುದು ಬಹಳ ಮುಖ್ಯ. ಅರಿವಿನ ಕೊರತೆಯಿಂದ ಎದುರಾಗುವ ಸೋಂಕುಗಳನ್ನು ತಡೆಗಟ್ಟಲು ಈ ವಿಡಿಯೋಗಳು ಸಹಕಾರಿಯಾಗಲಿವೆ,” ಎಂದು ಸಚಿವರು ಈ ಸಂದರ್ಭದಲ್ಲಿ ತಿಳಿಸಿದರು. 1994 ರಿಂದ ಉಚಿತ ಉಪಶಮನ ಆರೈಕೆ (Palliative Care) ನೀಡುತ್ತಿರುವ ಕರುಣಾಶ್ರಯ ಸಂಸ್ಥೆಯ ಈ ಕಾರ್ಯವನ್ನು ಅವರು ಶ್ಲಾಘಿಸಿದರು.
ಎಲ್ಲಿ ವೀಕ್ಷಿಸಬಹುದು?:
ಸಾರ್ವಜನಿಕರ ಅನುಕೂಲಕ್ಕಾಗಿ ಈ ಎಲ್ಲಾ ವಿಡಿಯೋಗಳನ್ನು ‘Karunashraya BHT’ ಎಂಬ ಯೂಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಮಾಡಲಾಗಿದೆ. ಮನೆಯಲ್ಲಿ ರೋಗಿಗಳ ಆರೈಕೆಯಲ್ಲಿ ತೊಡಗಿರುವವರು ಈ ಡಿಜಿಟಲ್ ಕೈಪಿಡಿಯ ಸದುಪಯೋಗ ಪಡೆದುಕೊಳ್ಳಬಹುದು ಎಂದು ಸಂಸ್ಥೆ ತಿಳಿಸಿದೆ.

