Sat. Jun 6th, 2026

ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ‘ಮಾಸ್ಟರ್ ಪ್ಲಾನ್’: ಅಲ್ಪಸಂಖ್ಯಾತರ ಮುನಿಸು ಶಮನಕ್ಕೆ ಜಮೀರ್ ಬೆನ್ನಲ್ಲೇ ಅಜರುದ್ದೀನ್ ಎಂಟ್ರಿ!

Share this with Friends

ದಾವಣಗೆರೆ: ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಕಣದಲ್ಲಿ ದಿನಕ್ಕೊಂದು ಹೊಸ ತಿರುವುಗಳು ಕಾಣಿಸಿಕೊಳ್ಳುತ್ತಿವೆ. ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮತದಾರರಲ್ಲಿ ಕಾಣಿಸಿಕೊಂಡಿದ್ದ ಸಣ್ಣಮಟ್ಟದ ಅಸಮಾಧಾನವನ್ನು ಶಮನಗೊಳಿಸಿ, ಮತಬ್ಯಾಂಕ್ ಭದ್ರಪಡಿಸಿಕೊಳ್ಳಲು ಕಾಂಗ್ರೆಸ್ ಈಗ ‘ಡಬಲ್ ಸ್ಟ್ರಾಟಜಿ’ ಮೊರೆ ಹೋಗಿದೆ. ಭಾನುವಾರವಷ್ಟೇ ಸಚಿವ ಜಮೀರ್ ಅಹ್ಮದ್ ಖಾನ್ ಅವರು ನಡೆಸಿದ ಸಂಚಲನದ ಬೆನ್ನಲ್ಲೇ, ಮಂಗಳವಾರ ಮಾಜಿ ಕ್ರಿಕೆಟ್ ತಾರೆ ಹಾಗೂ ತೆಲಂಗಾಣ ಸಚಿವ ಮೊಹಮ್ಮದ್ ಅಜರುದ್ದೀನ್ ಅವರನ್ನು ಅಖಾಡಕ್ಕಿಳಿಸುವ ಮೂಲಕ ಕಾಂಗ್ರೆಸ್ ಭರ್ಜರಿ ಕಸರತ್ತು ನಡೆಸಿದೆ.

ಸಮುದಾಯದ ಮನವೊಲಿಕೆಗೆ ‘ಕೈ’ ಕಸರತ್ತು:

ಕ್ಷೇತ್ರದ ಕೆಲವು ಭಾಗಗಳಲ್ಲಿ ಅಲ್ಪಸಂಖ್ಯಾತ ಸಮುದಾಯದ ಮುಖಂಡರು ಮತ್ತು ಯುವಕರಲ್ಲಿ ಪಕ್ಷದ ಬಗ್ಗೆ ಇದ್ದ ಅಸಮಾಧಾನವು ಅಭ್ಯರ್ಥಿ ಸಮರ್ಥ್ ಅವರಿಗೆ ಹಿನ್ನಡೆಯಾಗುವ ಭೀತಿ ಇತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್, ಸತತವಾಗಿ ಇಬ್ಬರು ಪ್ರಭಾವಿ ಮುಸ್ಲಿಂ ನಾಯಕರನ್ನು ಪ್ರಚಾರಕ್ಕೆ ಬಳಸಿಕೊಂಡಿದ್ದಾರೆ. ಮೊದಲು ಜಮೀರ್ ಅಹ್ಮದ್ ಅವರು ಸ್ಥಳೀಯವಾಗಿ ಸಭೆಗಳನ್ನು ನಡೆಸಿ ಮುನಿಸು ತಣಿಸುವ ಕೆಲಸ ಮಾಡಿದ್ದರೆ, ಈಗ ಅಜರುದ್ದೀನ್ ಅವರ ಮೂಲಕ ಯುವ ಸಮುದಾಯದ ‘ಕ್ರಿಕೆಟ್ ಕ್ರೇಜ್’ ಅನ್ನು ಮತಗಳನ್ನಾಗಿ ಪರಿವರ್ತಿಸಲು ಮುಂದಾಗಿದ್ದಾರೆ.

ಬಸವಣ್ಣನವರ ಸನ್ನಿಧಿಯಿಂದ ಅಜಾದ್ ನಗರದವರೆಗೆ ರೋಡ್ ಶೋ:

ಮಂಗಳವಾರ ಮಧ್ಯಾಹ್ನ ಬಸವಣ್ಣನವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಹಾಗೂ ಬಸವೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ ಡಿ.ಕೆ. ಶಿವಕುಮಾರ್ ಮತ್ತು ಅಜರುದ್ದೀನ್ ಪ್ರಚಾರಕ್ಕೆ ಚಾಲನೆ ನೀಡಿದರು. ಅಲ್ಲಿಂದ ಸಾಗಿದ ರೋಡ್ ಶೋ ದೊಡ್ಡಪೇಟೆ, ವಿಠ್ಠಲ ಮಂದಿರ ರಸ್ತೆ, ಹಳೇ ಬೇತೂರು ರಸ್ತೆ ಹಾಗೂ ಪ್ರಮುಖವಾಗಿ ಅಲ್ಪಸಂಖ್ಯಾತರು ಹೆಚ್ಚಿರುವ ಮದೀನಾ ಸರ್ಕಲ್ ಮತ್ತು ಅಜಾದ್ ನಗರ ಬೀದಿಗಳಲ್ಲಿ ಸಂಚರಿಸಿತು. ಅಜರ್ ಅವರನ್ನು ಕಾಣಲು ಕ್ರಿಕೆಟ್ ಅಭಿಮಾನಿಗಳು ಮತ್ತು ಮಹಿಳೆಯರು ಮುಗಿಬಿದ್ದಿದ್ದರು.

ಒಗ್ಗಟ್ಟಿನ ಪ್ರದರ್ಶನ:

ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಸಮ್ಮುಖದಲ್ಲಿ ನಡೆದ ಈ ರೋಡ್ ಶೋನಲ್ಲಿ ಕಾಂಗ್ರೆಸ್ ನಾಯಕರು ತೆರೆದ ವಾಹನದಲ್ಲಿ ಸಂಚರಿಸುತ್ತಾ ಕೈ ಬೀಸಿದರು. “ಸಮರ್ಥ್ ಒಬ್ಬ ಸಮರ್ಥ ಅಭ್ಯರ್ಥಿ, ಎಲ್ಲರೂ ಒಗ್ಗಟ್ಟಿನಿಂದ ಕೈ ಹಿಡಿಯಿರಿ” ಎಂದು ಡಿ.ಕೆ. ಶಿವಕುಮಾರ್ ಮನವಿ ಮಾಡಿದರು. ಜಮೀರ್ ಅಹ್ಮದ್ ಅವರ ಅಬ್ಬರದ ಭಾಷಣ ಮತ್ತು ಅಜರುದ್ದೀನ್ ಅವರ ಸೌಮ್ಯ ಸ್ವಭಾವದ ಪ್ರಚಾರವು ಅಲ್ಪಸಂಖ್ಯಾತ ಮತದಾರರ ಮೇಲೆ ಯಾವ ರೀತಿ ಪ್ರಭಾವ ಬೀರಲಿದೆ ಎಂಬುದು ಚುನಾವಣಾ ಫಲಿತಾಂಶದಲ್ಲಿ ಸ್ಪಷ್ಟವಾಗಲಿದೆ

 


Share this with Friends

Related Post