ಶಿವಮೊಗ್ಗ: ಮುಂಬರುವ 2028ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಜಿಲ್ಲಾ ರಾಜಕಾರಣದಲ್ಲಿ ಈಗಿನಿಂದಲೇ ರಾಜಕೀಯ ದಾಳ ಉರುಳಿಸಲು ವೇದಿಕೆ ಸಿದ್ಧವಾಗಿದೆ. ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಾವು ಅಥವಾ ತಮ್ಮ ಪುತ್ರ ಕೆ.ಇ. ಕಾಂತೇಶ್ ಅವರು ಶಿವಮೊಗ್ಗ ನಗರ ಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತ ಎಂದು ಅಧಿಕೃತವಾಗಿ ಪ್ರಕಟಿಸಿದ್ದಾರೆ ಶಿವಮೊಗ್ಗದ ಫೇಸ್ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ರಾಷ್ಟ್ರಭಕ್ತರ ಬಳಗ’ದ ಬೂತ್ ಮಟ್ಟದ ಸಂಘಟನಾ ಸಮಾವೇಶದಲ್ಲಿ ಭಾಗವಹಿಸಿ ಅವರು ರಾಜಕೀಯ ಭವಿಷ್ಯದ ದಿಕ್ಸೂಚಿಯನ್ನು ಪ್ರಕಟಿಸಿದರು.
“2028ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದಿಂದ ತಾವಾಗಲಿ ಅಥವಾ ತಮ್ಮ ಮಗ ಕೆ.ಇ. ಕಾಂತೇಶ್ ಅವರಾಗಲಿ ಸ್ಪರ್ಧಿಸುವುದು ನೂರಕ್ಕೆ ನೂರರಷ್ಟು ಖಚಿತ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಪ್ರಸ್ತುತ ಭಾರತೀಯ ಜನತಾ ಪಕ್ಷದ (ಬಿಜೆಪಿ) ಒಳಗಡೆ ಸಾಕಷ್ಟು ಸಮಸ್ಯೆಗಳು ಮತ್ತು ಗೊಂದಲಗಳು ಸೃಷ್ಟಿಯಾಗಿವೆ. ಪಕ್ಷದ ಆಂತರಿಕ ಪರಿಸ್ಥಿತಿ ಸರಿಯಿಲ್ಲ. ಒಂದು ವೇಳೆ ಇದೇ ಪರಿಸ್ಥಿತಿಯಲ್ಲಿ ಬಿಜೆಪಿ ಈಗ ಏನಾದರೂ ಚುನಾವಣೆಗೆ ಹೋದರೆ ಖಂಡಿತವಾಗಿಯೂ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಸಾಧ್ಯವೇ ಇಲ್ಲ. ಬಿಜೆಪಿಯಲ್ಲಿ ಇನ್ನೂ ಹತ್ತು ಹಲವು ಸುಧಾರಣೆಗಳು ಆಗಬೇಕಿದೆ” ಎಂದು ಗುಡುಗಿದರು.
ಬೂತ್ ಮಟ್ಟದಿಂದಲೇ ಸಿದ್ಧತೆ ಆರಂಭ:
“ಚುನಾವಣೆಗೆ ಇನ್ನು ಸಮಯವಿದೆ ಎಂದು ನಾವು ಸುಮ್ಮನೆ ಕೂರಲು ಸಾಧ್ಯವಿಲ್ಲ. ಈಗಿನಿಂದಲೇ ನಮ್ಮ ಶಕ್ತಿಯನ್ನು ಕ್ರೋಢೀಕರಿಸಬೇಕಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದಾದ್ಯಂತ ಇರುವ ಎಲ್ಲಾ 297 ಬೂತ್ ಮಟ್ಟದ ಸಂಘಟನೆಯನ್ನು ಇಂದಿನಿಂದಲೇ ಅತ್ಯಂತ ಬಲಿಷ್ಠವಾಗಿ ಆರಂಭಿಸುತ್ತಿದ್ದೇವೆ. ಮುಂಬರುವ ಯಾವುದೇ ಚುನಾವಣೆಯನ್ನಾದರೂ ಎದುರಿಸಲು ನಮ್ಮ ರಾಷ್ಟ್ರಭಕ್ತರ ಬಳಗ ಸನ್ನದ್ಧವಾಗಿರಬೇಕು” ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ನಮ್ಮ ಕುಟುಂಬಕ್ಕೆ ಮಾತ್ರ ಅನ್ಯಾಯ ಮಾಡಲಾಗಿದೆ: ಕಾಂತೇಶ್ ಆಕ್ರೋಶ
ಸಮಾವೇಶದಲ್ಲಿ ಮಾತನಾಡಿದ ಈಶ್ವರಪ್ಪ ಅವರ ಪುತ್ರ ಕೆ.ಇ. ಕಾಂತೇಶ್, “ಬಿಜೆಪಿಯಲ್ಲಿ ಎಲ್ಲ ಹಿರಿಯ ನಾಯಕರ, ಮುಖಂಡರ ಮಕ್ಕಳಿಗೆ ಟಿಕೆಟ್ ನೀಡಿ ಗೌರವಿಸಲಾಗಿದೆ. ಆದರೆ ಇಡೀ ರಾಜ್ಯದಲ್ಲಿ ಕೇವಲ ಈಶ್ವರಪ್ಪ ಅವರ ಕುಟುಂಬಕ್ಕೆ ಮಾತ್ರ ಸತತವಾಗಿ ಅನ್ಯಾಯ ಮಾಡಲಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ ಅವರ ಸುಲಭ ಗೆಲುವಿನ ಹಿಂದೆ ಈಶ್ವರಪ್ಪನವರ ಬೆಂಬಲಿಗರ ಮತ್ತು ಕಾರ್ಯಕರ್ತರ ಶ್ರಮ ಅತಿ ದೊಡ್ಡದಾಗಿತ್ತು. ಹೀಗಿದ್ದರೂ ನಮ್ಮನ್ನು ಕಡೆಗಣಿಸಲಾಗಿದೆ. ಆದ್ದರಿಂದ ಮುಂಬರುವ ಚುನಾವಣೆಯಲ್ಲಿ ಈಶ್ವರಪ್ಪನವರು ಅಥವಾ ನಾನು ಕಣಕ್ಕಿಳಿಯುವುದು ನಿಶ್ಚಿತ. ಈ ಬಗ್ಗೆ ರಾಷ್ಟ್ರಭಕ್ತ ಬಳಗದ ಕಾರ್ಯಕರ್ತರೇ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ” ಎಂದು ಭಾವನಾತ್ಮಕವಾಗಿ ನುಡಿದರು.
ಮಾಜಿ ಡಿಸಿಎಂ ಈಶ್ವರಪ್ಪ ಅವರ ಈ ಪೂರ್ಣ ರಾಜಕೀಯ ಹೇಳಿಕೆಗಳು ಹಾಗೂ ಬೂತ್ ಮಟ್ಟದ ಸಮಾವೇಶದ ನಡೆಗಳು ಶಿವಮೊಗ್ಗ ನಗರದ ಹಾಲಿ ಶಾಸಕರು ಹಾಗೂ ರಾಜಕೀಯ ಮುಖಂಡರಲ್ಲಿ ಭಾರೀ ನಡುಕ ಹುಟ್ಟಿಸಿರುವುದಂತೂ ಸತ್ಯ

