Thu. Mar 5th, 2026

ಬಿಡದಿ ಟೌನ್ ಶಿಪ್ ಮಾಡುವುದೇ ಆದರೆ ಈಗಲ್ ಟನ್ ಗೆ ನಿಗದಿ ಮಾಡಿದಷ್ಟು ಬೆಲೆ ನೀಡಿ: ಕುಮಾರಸ್ವಾಮಿ

Share this with Friends

ಮಂಡ್ಯ: ಬಿಡದಿ ಈಗಲ್ ಟನ್ ರೆಸಾರ್ಟ್ ಒತ್ತುವರಿ ಮಾಡಿದ್ದ ಪ್ರತೀ ಎಕರೆಗೆ 13 ಕೋಟಿ ದಂಡ ವಿಧಿಸಬೇಕು ಎಂದು ನಿಮ್ಮ ಪಕ್ಷವೇ ಅಧಿಕಾರದಲ್ಲಿ ಇದ್ದಾಗ ನಿಮ್ಮವರೇ ಸಿಎಂ, ಸಚಿವರು ಇದ್ದಾಗ ನೀವೆ ನಿಗದಿ ಮಾಡಿದ ದರ. ಈಗ ಬಿಡದಿ ಟೌನ್ ಶಿಪ್ಯೋಜನೆ ಮಾಡುವ ಹಾಗಿದ್ದರೆ ಈಗಲ್ ಟನ್ ಗೆ ದಂಡ ನಿಗದಿ ಮಾಡಿದಷ್ಟು ಪರಿಹಾರ ರೈತರ ಭೂಮಿಗೆ ನೀಡಲಿ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಒತ್ತಾಯಿಸಿದರು.

ಮಂಡ್ಯದಲ್ಲಿ ದಿಶಾ ಸಮಿತಿ ಸಭೆಯ ನಂತರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು,ಬಿಡದಿಯಲ್ಲಿ ಸರ್ಕಾರ ಸ್ವಾಧೀನ ಮಾಡಿಕೊಳ್ಳಲು ಹೊರಟಿರುವ ಭೂಮಿಯ ವ್ಯಾಪ್ತಿಯಲ್ಲಿಯೇ ಈಗಲ್‌ಟನ್ ಗಾಲ್ಫ್ ಕ್ಲಬ್ ಇದೆ. ಅದು ಸರಕಾರಿ ಕರಾಬು ಭೂಮಿ ಅತಿಕ್ರಮಿಸಿದೆ ಎಂದು ಆರೋಪ ಮಾಡಲಾಗಿತ್ತು. ಆ ಸಂಸ್ಥೆಯ ಮೇಲೆ ಆರೋಪಗಳನ್ನು ಹೊರೆಸಿ 2018ರಲ್ಲಿ ಚದರ ಅಡಿ ಲೆಕ್ಕದಲ್ಲಿ ದಂಡ ವಿಧಿಸಿದ್ದಾರೆ. ಈಗಿನ ಉಪ ಮುಖ್ಯಮಂತ್ರಿ ಹಿಂದೆ ಡಿ.ಕೆ. ಶಿವಕುಮಾರ್ ಅದೇ ಈಗಲ್ ಟನ್ ಕ್ಲಬ್‌ಗೆ ಊಟಕ್ಕೆ ಹೋದಾಗ ಅಲ್ಲಿನ ಸಿಬ್ಬಂದಿ 98 ಸಾವಿರ ರೂಪಾಯಿ ಬಿಲ್ ಕೊಟ್ಟಿದ್ದರು. ನನಗೇ ಬಿಲ್ ಕೊಡುತ್ತೀರಾ ಎಂದು 70 ಎಕರೆ ಕರಾಬು ಭೂಮಿಗೆ ₹984 ಕೋಟಿ ದಂಡ ವಿಧಿಸಿದರು. ಅಂದರೆ, ಪ್ರತೀ ಎಕರೆಗೆ 13 ಕೋಟಿ ದಂಡ ವಿಧಿಸಬೇಕು ಎಂದು ಸಂಪುಟ ಸಭೆ ತೀರ್ಮಾನ ಕೈಗೊಂಡಿತು. ನಿಮ್ಮ ಪಕ್ಷವೇ ಅಧಿಕಾರದಲ್ಲಿ ಇದ್ದಾಗ ನಿಮ್ಮವರೇ ಸಿಎಂ, ಸಚಿವರು ಇದ್ದಾಗ ನೀವೆ ನಿಗದಿ ಮಾಡಿದ ದರ ಅದಲ್ಲವೇ? ಈಗ ನೀವೇ ರೈತರಿಗೆ 1:3 ಅನುಪಾತದಲ್ಲಿ ಪರಿಹಾರ ಕೊಟ್ಟುಬಿಡಿ ಎಂದರು.

ಬಿಡದಿ ಟೌನ್ ಶಿಪ್ ಮಾಡುವುದು ಕುಮಾರಸ್ವಾಮಿ ಅವರ ಕಾಲದಲ್ಲಿ ಆಗಿರುವ ತೀರ್ಮಾನ ಎಂದು ನನ್ನ ಹೆಸರಿನಲ್ಲಿ ಶೆಲ್ಟರ್ ತೆಗೆದುಕೊಳ್ಳಬೇಡಿ. ನನ್ನ ಕಾಲದ ತೀರ್ಮಾನವೇ ಬೇರೆ, ಇವತ್ತಿನ ತೀರ್ಮಾನಗಳು ಬೇರೆ ಇವೆ. ಅಂದು ಭೂಮಿ ಬೆಲೆ ದೊಡ್ಡ ಮಟ್ಟದಲ್ಲಿರಲಿಲ್ಲ. ಆದರೆ, ಇವತ್ತು ಭೂಮಿಗೆ ಭಾರೀ ಬೆಲೆ ಬಂದಿದೆ. 9 ಸಾವಿರ ಎಕರೆ ಭೂಮಿಯನ್ನು ಟೌನ್‌ಶಿಪ್‌ಗೆ ಸ್ವಾಧೀನ ಮಾಡಿಕೊಳ್ಳಲು ಹೊರಟಿದ್ದಾರೆ. ರೈತರು ಇದಕ್ಕೆ ವಿರೋಧ ಇದ್ದಾರೆ.ಬಿಡದಿ ಟೌನ್ ಶಿಪ್‌ ಹೆಸರಿನಲ್ಲಿ ಈ ಸರ್ಕಾರ ರೈತರ ಫಲವತ್ತಾದ ಭೂಮಿಯನ್ನು ಲೂಟಿ ಹೊಡೆಯಲು ಹೊರಟಿದೆ. ಯಾರೂ ಕೂಡ  ಒಂದು ಇಂಚು ಭೂಮಿ ಕೊಡಬೇಡಿ. ಯಾರೂ ಹೆದರುವ ಅಗತ್ಯ ಇಲ್ಲ. ಜನರ ಜತೆ ನಾನಿದ್ದೇನೆ ಎಂದು ಕೇಂದ್ರ ಸಚಿವರಾದ ಹೆಚ್.ಡಿ.  ಕುಮಾರಸ್ವಾಮಿ ಅವರು ಅಭಯ ನೀಡಿದರು.

ಹಿಂದೆ ಕನಕಪುರದಲ್ಲಿ ಹಾಲಿನ ಡೇರಿ ಮಾಡುವಾಗ ರೈತರಿಗೆ ಎಷ್ಟು ದುಡ್ಡು ಕೊಟ್ಟಿರಿ? ನಿಮ್ಮ ಪಟಾಲಂಗೆ ಎಷ್ಟು ಪರಿಹಾರ ಕೊಟ್ಟಿರಿ? ಅಲ್ಲೆಲ್ಲೂ ಒಣ ಬೇಸಾಯದ ಭೂಮಿ ಇದೆ ಅಂತ ನಿಮ್ಮ ಅಧಿಕಾರಿಗಳೇ ಹೇಳುತ್ತಿದ್ದಾರೆ. ಆ ಭೂಮಿಯನ್ನೇ ವಶಕ್ಕೆ ತೆಗೆದುಕೊಂಡು ಟೌನ್ ಶಿಪ್ ಮಾಡಬಹುದು ಅಲ್ಲವೇ? ರಾಜ್ಯದಲ್ಲಿ ಬೇರೆ ಬೇರೆ ಇಂತಹ ಒಣಭೂಮಿ ಬೇಕಾದಷ್ಟು ಇದೆ. ಅಲ್ಲೆಲ್ಲ ಮಾಡುವುದು ಬಿಟ್ಟು ಬಿಡದಿಯ ಮೇಲೆಯೇ ಯಾಕೆ ಬಿದ್ದಿದ್ದೀರಿ ಎಂದು ಕೇಂದ್ರ ಸಚಿವರು ಕೆಂಡ ಕಾರಿದರು.

ನಿಮ್ಮ ಉದ್ದೇಶ ಬಿಡದಿಯ ಜನರನ್ನು ಉದ್ಧಾರ ಮಾಡುವುದು ಅಲ್ಲ. ನಿಮ್ಮನ್ನು ನೀವು ಉದ್ಧಾರ ಮಾಡಿಕೊಳ್ಳಲು ಈ ಯೋಜನೆ ರೂಪಿಸಿದ್ದೀರಿ ಅಷ್ಟೇ. ಭೂಮಿ ಸ್ವಾಧೀನ ಮಾಡಿಕೊಂಡು ಪರಿಹಾರ ಕೊಡಲಿಕ್ಕೆ ನಿಮ್ಮಲ್ಲಿ ದುಡ್ಡಿಲ್ಲ. ಒಣ ಭೂಮಿ ಇರುವ ಕಡೆ ಟೌನ್‌‌ಶಿಪ್ ಮಾಡಿ. ಯಾರು ಬೇಡ ಅಂತಾರೆ. ಕೃಷಿಗೆ ಉತ್ತಮವಾದ ವಾತಾವರಣವಿರುವ ಕಡೆ ರೈತರನ್ನು ಒಕ್ಕಲೆಬ್ಬಿಸಬೇಡಿ. ಯಾವುದೇ ಒತ್ತಡ, ದಬ್ಬಾಳಿಕೆಗೆ ರೈತರು ಹೆದರಬಾರದು. ರೈತರೊಂದಿಗೆ ನಾನಿದ್ದೇನೆ ಎಂದು ಕೇಂದ್ರ ರೈತರಿಗೆ ರೈತರಿಗೆ ಧೈರ್ಯ ತುಂಬಿದರು.

 


Share this with Friends

Related Post