ಬೆಂಗಳೂರು: ಬಿಜೆಪಿಯಿಂದ ದೇಶದಲ್ಲಿ ವೋಟ್ ಚೋರಿಯಾಗಿದೆ ಎಂದು ಜಂಟಿ ಸುದ್ದಿಗೋಷ್ಠಿ ಮಾಡಿ ಆರೋಪಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮೊದಲು ಕೋಲಾರ ಘಟನೆ,ಹೈಕೋರ್ಟ್ ಆದೇಶದ ಬಗ್ಗೆ ಮಾತನಾಡಲಿ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ದೇಶದಲ್ಲಿ ವೋಟ್ ಚೋರಿ ಯಾರಾದರೂ ಇದ್ದರೆ ಅದು ಕಾಂಗ್ರೆಸ್, ದೇಶವನ್ನು ೬೦ ವರ್ಷ ವೋಟ್ ಚೋರಿ ಮಾಡಿಯೇ ಆಳಿದಾರೆ. ವೋಟ್ ಚೋರಿ ಆರೋಪಕ್ಕೆ ಇವರು ಈವರೆಗೂ ದಾಖಲೆ ಕೊಟ್ಟಿಲ್ಲ,ಸುಮ್ಮನೆ ರಾಹುಲ್ ಗಾಂದಿ ಯಾವುದೋ ಸ್ಕ್ರೀನ್ ತೋರಿಸಿ ಇಲ್ಲಿ ಚೋರಿಯಾಗಿದೆ, ಅಲ್ಲಿ ಚೋರಿಯಾಗಿದೆ ಎನ್ನುತ್ತಾರೆ. ನಮ್ಮ ದೇಶದಲ್ಲಿ ಕಾನೂನು ಏನು ಹೇಳುತ್ತದೆ ಗೊತ್ತಾ? ಕಾನೂನು ಉಲ್ಲಂಘನೆಯಾಗಿದ್ದರೆ ಚುನಾವಣಾ ಆಯೋಗಕ್ಕೆ ದೂರು ಕೊಡಬೇಕು, ನ್ಯಾಯಾಲಯಕ್ಕಾದರೂ ದೂರು ಕೊಡಬೇಕು ಅದನ್ನು ಮಾಡಿಲ್ಲ. ಹೋದರೆ ಈ ಕಳ್ಳರೆ ಸಿಕ್ಕಿಹಾಕಿಕೊಳ್ಳುತ್ತಾರೆ ಹಾಗಾಗಿ ಹಿಟ್ ಅಂಡ್ ರನ್ ಮಾಡುತ್ತಿದ್ದಾರೆ ಎಂದರು.
ಮಾಲೂರಿನಲ್ಲಿ ವೋಟ್ ಚೋರಿ ಮಾಡಿ ಹೈಕೋರ್ಟ್ ನಲ್ಲಿ ಛೀಮಾರಿ ಹಾಕಿಸಿಕೊಂಡಿದ್ದಾರೆ. ಅಲ್ಲಿನ ಡಿಸಿ ಮತ ಎಣಿಕಾ ಕೇಂದ್ರದ ವೀಡಿಯೋ ಡಿಲಿಟ್ ಮಾಡಿದ್ದು,ಅವರ ವಿರುದ್ಧ ಕ್ರಮವಾಗುತ್ತಿದೆ, ಅಲ್ಲಿ ಗೆದ್ದಿರುವುದು ಕಾಂಗ್ರೆಸ್. ಅವರ ಸದಸ್ಯತ್ವವನ್ನೂ ವಜಾಮಾಡಿ ಮರು ಎಣಿಕೆಗೆ ಆದೇಶಿಸಿದೆ ಹಾಗಾದರೆ ವೋಟ್ ಚೋರಿ ಯಾರು? ರಾಹುಲ್ ಗಾಂಧಿ ಹೇಳಿದರೆ ಆಗಲ್ಲ, ಯಾವುದಾದರೂ ನ್ಯಾಯಾಲಯ ವೋಟ್ ಚೋರಿ ಎಂದು ಹೇಳಿದೆಯಾ?ಎಂದು ಪ್ರಶ್ನಿಸಿದರು.
ರಾಹುಲ್ ಗಾಂಧಿ ಮೊದಲು ಇವಿಎಂ ಸರಿಯಿಲ್ಲ ಎನ್ನುತ್ತಾರೆ, ನಂತರ ಜನ ಸರಿಯಿಲ್ಲ ಎನ್ನುತ್ತಾರೆ, ವಿದೇಶಕ್ಕೆ ಹೋಗಿ ಭಾರತವೇ ಸರಿಯಿಲ್ಲ ಎನ್ನುತ್ತಾರೆ. ಇಂತಹ ಬುದ್ದಿಗೆಟ್ಟ ನಾಯಕ ರಾಹುಲ್ ಗಾಂಧಿ ಈಗ ಸೈನಿಕರಲ್ಲಿ ಮೀಸಲಾತಿ ಬರಬೇಕು ಎನ್ನುತ್ತಿದ್ದಾಋಎ, ದೇಶದ ಸೈನಿಕರನ್ನೂ ಹೊಡೆಯುವ ಮನಸ್ಥಿತಿ ಇವರದ್ದು. ಸೈನಿಕರಲ್ಲಿ ಜಾತಿ ತರುವ ಹೀನ ಕಾರ್ಯ ಯಾರೂ ಮಾಡಿಲ್ಲ. ಅಷ್ಟು ಜ್ಞಾನವೂ ಇಲ್ಲದ ನಾಲಾಯಕ್ ಇವರು. ಸೈನಿಕರು ಭಾರತ್ ಮಾತಾ ಕೀಜೈ, ಜೈ ಹಿಂದ್ ಎನ್ನುತ್ತಾರೆ ಅಲ್ಲಿಯೂ ಜಾತಿ ತರಲು ಹೊರಟಿದ್ದಾರೆ. ಇಂತಹ ನಾಯಕರಿಗೆ ವೋಟ್ ಚೋರಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದರು.
ಇವರಿಗೆ ನಿಜಕ್ಕೂ ಧೈರ್ಯ ಇದ್ದರೆ ಮೊದಲು ಕೋಲಾರದಲ್ಲಿನ ವೋಟ್ ಚೋರಿ ಬಗ್ಗೆ ಮಾತನಾಡಲಿ, ಹೈಕೋರ್ಟ್ ಆದೇಶವನ್ನು ಹೇಳಲಿ ಎಂದು ಸವಾಲು ಹಾಕಿದ ಅಶೋಕ್ ವೋಟ್ ಚೋರಿ ಬಗ್ಗೆ ಇವರು ರಾಜ್ಯದಲ್ಲಿ ಒಂದು ಕೋಟಿ ಸಹಿ ಸಂಗ್ರಹ ಮಾಡಿದ್ದಾರಂತೆ ಬೇಕಾದರೆ ನಾವು ಏಳು ಕೋಟಿ ಸಹಿ ಸಂಗ್ರಹ ಮಾಡುತ್ತೇವೆ. ಕಾಂಗ್ರೆಸ್ ಬರೀ ಸುಳ್ಳು ಹೇಳುವ ಪಕ್ಷ ಎಂದು ಟೀಕಿಸಿದರು.

