ಶಿವಮೊಗ್ಗ: ದೆಹಲಿ ಕಾರು ಸ್ಪೋಟ ಘಟನೆಯನ್ನು ಬಿಹಾರ ಚುನಾವಣೆಗೆ ಜೋಡಿಸುವ ಷಡ್ಯಂತ್ರ, ಕುತಂತ್ರ ನಡೆಯುತ್ತಿದ್ದು, ಇದು ಕಾಂಗ್ರೆಸ್ಸಿಗರ ಮೂರ್ಖತನದ ಪ್ರದರ್ಶನ ಮಾತ್ರವಲ್ಲ ದೇಶದ್ರೋಹದ ಕೆಲಸ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಬಾಂಬ್ ಸ್ಫೋಟದಂಥ ಸಂದಿಗ್ಧ ಸಂದರ್ಭದಲ್ಲಿ ನಾವೆಲ್ಲರೂ ಭಾರತೀಯರು ಎಂಬ ಮನೋಭಾವದಿಂದ ದ್ವಂದ್ವ ಹೇಳಿಕೆ ನೀಡದೇ ದೇಶದ ಪರವಾಗಿ ಒಗ್ಗಟ್ಟಿನ ಪ್ರದರ್ಶನ ಮಾಡಬೇಕು.ಆದರೆ ಬಿಹಾರ ಚುನಾವಣೆಯನ್ನು ಇದಕ್ಕೆ ಜೋಡಿಸುವ ಷಡ್ಯಂತ್ರ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷದ ಹಿರಿಯರು, ದೇಶದ ಎಲ್ಲ ಮುಖಂಡರು ಇಂಥ ಸಂದಿಗ್ಧ ಸಂದರ್ಭದಲ್ಲಿ ಒಟ್ಟಾಗಿ ಯೋಚಿಸಬೇಕು ಎಂದರು.
ರಾಹುಲ್ ಗಾಂಧಿಯವರು ವಿಪಕ್ಷ ನಾಯಕರಾಗಿದ್ದರೂ ದೆಹಲಿಯ ಈ ಭಯೋತ್ಪಾದಕರ ದಾಳಿ ಕುರಿತು ತಮ್ಮ ಪ್ರತಿಕ್ರಿಯೆ ನೀಡಿಲ್ಲ. ಮತ್ತೊಂದು ಕಡೆ ಕಾಂಗ್ರೆಸ್ ಪಕ್ಷದ ಹಿರಿಯರು ಮನ ಬಂದಂತೆ ಮಾತನಾಡುತ್ತಿದ್ದಾರೆ.ಇದು ಏನನ್ನು ಸೂಚಿಸುತ್ತದೆ, ರಾಜಕೀಯ ಭಿನ್ನಾಭಿಪ್ರಾಯ ಸಹಜವಾದರೂ ಇಂತಹ ಸನ್ನಿವೇಶದಲ್ಲಿ ರಾಜಕಾರಣ ಸಲ್ಲದು ಎಂದರು.
ನವದೆಹಲಿಯ ಕೆಂಪು ಕೋಟೆಯ ಹತ್ತಿರ ಕಾರಿನಲ್ಲಿ ಬಾಂಬ್ ಸ್ಫೋಟ ಆಗಿದ್ದು,ಗೃಹ ಸಚಿವ ಅಮಿತ್ ಶಾ ಅವರು ತಕ್ಷಣ ಅಲ್ಲಿಗೆ ಭೇಟಿ ಕೊಟ್ಟರು. ಮರುದಿನ ಪ್ರಧಾನಿ ನರೇಂದ್ರ ಮೋದಿ ಅವರೂ ಆಸ್ಪತ್ರೆಗಳಿಗೂ ಭೇಟಿ ಕೊಟ್ಟಿದ್ದಾರೆ. ಸಂಸತ್ ಭವನ, ಬಿಜೆಪಿ ಕೇಂದ್ರ ಕಚೇರಿ, ವಾಯು ಪಡೆ ಕಚೇರಿ, ಸೇನಾ ಭವನ ಮೊದಲಾದ ಪ್ರಮುಖ ಸ್ಥಳಗಳು ಟಾರ್ಗೆಟ್ ಪಟ್ಟಿಯಲ್ಲಿ ಇತ್ತೆಂದು ಬಹಿರಂಗವಾಗಿದೆ ಇಷ್ಟಾದರೂ ಕಾಂಗ್ರೆಸ್ ಗೆ ರಾಜಕಾರಣವೇ ಮುಖ್ಯವಾಗಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ಪಕ್ಷದವರು ಬಳೆ ಕಾರ್ಖಾನೆ ತೆರೆಯಬೇಕಾದೀತು:
ಮೂರ್ಖ ಕಾಂಗ್ರೆಸ್ ಪಕ್ಷದವರು ಸ್ವಾತಂತ್ರ್ಯ ಬಂದಾಗಿನಿಂದ ನಡೆದ ಘಟನೆಗಳನ್ನು ಅವಲೋಕನ ಮಾಡಬೇಕು. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಎಷ್ಟು ಸಲ ಕೈಗೆ ಬಳೆ ಹಾಕಬೇಕಾಗಿತ್ತು ಎಂದು ಒಂದು ಕ್ಷಣ ಯೋಚಿಸಿ ಎಂದು ತಿಳಿಸಿದರು. ಬಳೆ ಹಾಕುವುದಲ್ಲ; ನಿಮ್ಮ ಕಾಂಗ್ರೆಸ್ ಪಕ್ಷದವರು ಒಂದು ಬಳೆ ಕಾರ್ಖಾನೆ ತೆರೆಯಬೇಕಾಗುತ್ತದೆ ಎಂದು ತಿಳಿಸಿದರು. ಉಗ್ರಗಾಮಿ ಚಟುವಟಿಕೆಗೆ ಯೋಧರು, ಭಾರತೀಯರು ಅಷ್ಟು ಬಾರಿ ಪ್ರಾಣ ತೆತ್ತಿದ್ದಾರೆ ಎಂದು ಗಮನ ಸೆಳೆದರು.
ಒಳಜಗಳ ಬದಿಗಿಡಿ- ರೈತರ ಹಿತ ಕಾಪಾಡಿ:
ಕಬ್ಬು ಬೆಳೆಗಾರರು ಸಂಕಷ್ಟದಲ್ಲಿದ್ದು, ಒಂದು ತಿಂಗಳಿಂದ ಪ್ರತಿಭಟನೆಗಳು ನಿರಂತರವಾಗಿ ನಡೆಯುತ್ತಿದೆ. ನಾನೂ ಬೆಳಗಾವಿ ಜಿಲ್ಲೆಯಲ್ಲಿ ಅಹೋರಾತ್ರಿ ಧರಣಿಯಲ್ಲಿ ಭಾಗವಹಿಸಿದ್ದೇನೆ. ಮುಖ್ಯಮಂತ್ರಿಗಳು ಸಭೆ ನಡೆಸಿದ್ದರೂ ವಾತಾವರಣ ತಿಳಿ ಆಗುತ್ತಿಲ್ಲ. ಬೀದರ್, ಬಾಗಲಕೋಟೆ ಮೊದಲಾದ ಜಿಲ್ಲೆಗಳಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ಕಾವೇರುತ್ತಿದೆ ಎಂದು ಗಮನ ಸೆಳೆದರು.
ಮುಖ್ಯಮಂತ್ರಿಗಳು ತಮ್ಮ ಒಳಜಗಳ ಬದಿಗಿಡಬೇಕು. ರೈತರ ಹಿತ ಕಾಪಾಡುವಲ್ಲಿ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು. ಉಸ್ತುವಾರಿ ಸಚಿವರನ್ನು ಜಿಲ್ಲೆಗಳಿಗೆ ಕಳಿಸಿಕೊಡಿ ಎಂದು ಒತ್ತಾಯಿಸಿದರು.

