ಬೆಂಗಳೂರು:ಶಬರಿಮಲೆ ಯಾತ್ರೆಗೆ ಹೋಗುವ ಕನ್ನಡಿಗರೇ ಭಯ ಬೇಡ, ಕಲುಶಿತ ನೀರಿನಿಂದ ಹರಡುವ ‘ಮೆದುಳು ತಿನ್ನುವ ಅಮೀಬಾ’ ಸೋಂಕಿನ ಬಗ್ಗೆ ಎಚ್ಚರ ಇರಲಿ.ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ಇರಲಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಚಿವರು,ಕೇರಳದಲ್ಲಿ ಕಲುಶಿತ ನೀರು, ನಿಂತ ನೀರು ಅಥವಾ ಈಜು ಕೊಳದ ನೀರಿನಿಂದ ಉಂಟಾಗುವ ‘ಮೆದುಳು ತಿನ್ನುವ ಅಮೀಬಾ’ ಸೋಂಕು ಕಂಡುಬಂದಿದ್ದು, ಜೀವಕ್ಕೆ ಅಪಾಯವನ್ನು ಉಂಟುಮಾಡುತ್ತದೆ. ಹಾಗಾಗಿ ರಾಜ್ಯದಿಂದ ಶಬರಿಮಲೆಗೆ ಹೋಗುವ ಯಾತ್ರಿಕರು ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂದು ಸಲಹೆ ನೀಡಿದ್ದಾರೆ.
ಈ ‘ಮೆದುಳು ತಿನ್ನುವ ಅಮೀಬಾ’ ಜೀವಿಯು ಮೂಗಿನಿಂದ ನೇರವಾಗಿ ಮೆದುಳು ಪ್ರವೇಶಿಸಿ ಸೋಂಕು ಹರಡುವುದರಿಂದ ಜೀವಾಪಾಯ ಹೆಚ್ಚು. ಹಾಗಾಗಿ ಯಾತ್ರೆಯ ವೇಳೆ, ಕಲುಶಿತ/ನಿಂತ ನೀರಿನಿಂದ ಅಥವಾ ಈಜುಕೋಳದ ನೀರಿನಿಂದ ಸ್ನಾನ ಮಾಡುವುದನ್ನು ಆದಷ್ಟು ನಿಯಂತ್ರಿಸಿ. ಇಲ್ಲದಿದ್ದಲ್ಲಿ ಮೂಗಿನ ಕ್ಲಿಪ್ಗಳನ್ನು ಅಥವಾ ಮೂಗನ್ನು ಬಿಗಿಹಿಡಿದು ಸ್ನಾನ ಮಾಡುವುದು ಸೂಕ್ತ ಎಂದಿದ್ದಾರೆ.
ಯಾತ್ರೆಯ ವೇಳೆ ಸ್ನಾನ ಮಾಡಿದ ಏಳು ದಿನಗಳಲ್ಲಿ ವಿಪರೀತ ಜ್ವರ, ತೀವ್ರ ತಲೆನೋವು, ವಾಕರಿಕೆ/ವಾಂತಿ, ಕುತ್ತಿಗೆ ಬಿಗಿತ, ಮಾನಸಿಕ ಸ್ಥಿತಿಯಲ್ಲಿ ವ್ಯತ್ಯಾಸ ಕಂಡುಬಂದರೆ ಕೂಡಲೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಿರಿ.ಭಯ ಬೇಡ, ಕಲುಶಿತ ನೀರಿನಿಂದ ಹರಡುವ ‘ಮೆದುಳು ತಿನ್ನುವ ಅಮೀಬಾ’ ಸೋಂಕಿನ ಬಗ್ಗೆ ಎಚ್ಚರ ಇರಲಿ ಎಂದಿದ್ದಾರೆ.

