Thu. Mar 5th, 2026

ನಿಗದಿತ ಸಮಯದಲ್ಲಿ ಮೆಟ್ರೋ ಕಾಮಗಾರಿ ಮುಗಿಸದ ಗುತ್ತಿಗೆದಾರರಿಗೆ ಮುಂದೆ ಯಾವುದೇ ಕೆಲಸ ನೀಡುವುದಿಲ್ಲ: ಡಿಸಿಎಂ ಎಚ್ಚರಿಕೆ

Share this with Friends

ಬೆಂಗಳೂರು:ನಿಗದಿತ ಸಮಯದೊಳಗೆ ನೀಲಿ ಮೆಟ್ರೋ ಮಾರ್ಗ ಪೂರ್ಣಗೊಳಿಸಲು ಸೂಚನೆ ನೀಡಿದ್ದು,ನಮ್ಮ ಸೂಚನೆ ಪಾಲಿಸದಿದ್ದರೆ ಅತರವಾ ಕಡೆಗಣಿಸಿದರೆ ಅಂತಹ ಗುತ್ತಿಗೆದಾರರಿಗೆ ಮುಂದೆ ಯಾವುದೇ ಕೆಲಸ ನೀಡುವುದಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಕೊಡಿಗೆಹಳ್ಳಿಯಲ್ಲಿ ನಡೆಯುತ್ತಿರುವ ಮೆಟ್ರೋ ಕಾಮಗಾರಿ ಪರಿಶೀಲಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ/ಅವರು,“ನಿಗದಿತ ಸಮಯದೊಳಗೆ ನೀಲಿ ಮೆಟ್ರೋ ಮಾರ್ಗ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದ್ದು, ಕೆ.ಆರ್ ಪುರದಿಂದ ಸಿಲ್ಕ್ ಬೋರ್ಡ್ ವರೆಗೆ ಮಾರ್ಗವನ್ನು 2026 ಡಿಸೆಂಬರ್ ಗೆ ಮುಗಿಸಲು ನಿರ್ಧರಿಸಿದ್ದೇವೆ. ಉಳಿದಂತೆ ಕೆ.ಆರ್ ಪುರದಿಂದ ಹೆಬ್ಬಾಳದವರೆಗಿನ ಮಾರ್ಗವನ್ನು 2027 ಡಿಸೆಂಬರ್ ವೇಳೆಗೆ ಹಾಗೂ ಹೆಬ್ಬಾಳದಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 2027 ಜೂನ್ ಗೆ ಪೂರ್ಣಗೊಳಿಸುತ್ತೇವೆ ಎಂದು ಗುತ್ತಿಗೆದಾರರು ತಿಳಿಸಿದ್ದಾರೆ” ಎಂದು ಮಾಹಿತಿ ನೀಡಿದರು.

“ವಿಮಾನ ನಿಲ್ದಾಣಕ್ಕೆ ಸಂಪರ್ಕ ಸಾಧಿಸುತ್ತಿರುವ ಮೆಟ್ರೋ ಮಾರ್ಗದ ಕಾಮಗಾರಿಯನ್ನು ನಾವು ನಿಗದಿತ ಸಮಯದೊಳಗೆ ಪೂರ್ಣಗೊಳಿಸಬೇಕಿದೆ. ಇದಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರರನ್ನು ಕರೆಸಿ ಚರ್ಚಿಸಿದ್ದೇವೆ. ಗುತ್ತಿಗೆದಾರ ಸಂಸ್ಥೆಯು ಕೆಲವು ಸಬೂಬು ಹೇಳುತ್ತಿದ್ದು, ಆದಷ್ಟು ಬೇಗ ಕಾಮಗಾರಿ ಮುಗಿಸಲು ಸೂಚಿಸಿದ್ದೇನೆ. ಈ ಭಾಗದಲ್ಲಿ ಕೆಲವು ಸಮಸ್ಯೆಗಳಿದ್ದ ಕಾರಣ ನಾನು ಸ್ಥಳಕ್ಕೆ ಬಂದು ಭೇಟಿ ನೀಡಿದ್ದೇನೆ. ಇಲ್ಲಿ ಕೆಲಸ ಪೂರ್ಣವಾಗುವವರೆಗೂ ಇಲ್ಲಿರುವ ಪ್ರಮುಖ ಯಂತ್ರವನ್ನು ಬೆಂಗಳೂರಿನಿಂದಾಚೆಗೆ ಸ್ಥಳಾಂತರಿಸಲು ಅವಕಾಶ ನೀಡುವುದಿಲ್ಲ. ಇದರ ಉಸ್ತುವಾರಿಯನ್ನು ತುಷಾರ್ ಗಿರಿನಾಥ್ ಅವರಿಗೆ ನೀಡಲಾಗಿದೆ. ಇದು 58 ಕಿ.ಮೀ ಉದ್ಧದ ಈ ಯೋಜನೆ 15 ಸಾವಿರ ಕೋಟಿ ಮೊತ್ತದ ಯೋಜನೆಯಾಗಿದೆ. ಸಿಲ್ಕ್ ಬೋರ್ಡ್ ನಿಂದ ವಿಮಾನ ನಿಲ್ದಾಣದವೆರೆಗಿನ ಈ ಮಾರ್ಗದಲ್ಲಿ 30 ನಿಲ್ದಾಣಗಳು ಬರಲಿವೆ” ಎಂದು ತಿಳಿಸಿದರು.

ಪೂರ್ಣಗೊಂಡ ನಿಲ್ದಾಣಗಳ ಮಧ್ಯೆ ರೈಲ್ವೆ ಸಂಚಾರ ಆರಂಭಿಸಲು ಚಿಂತನೆ:

“ಈ ಮಾರ್ಗದಲ್ಲಿ 5-10 ರೈಲ್ವೇ ನಿಲ್ದಾಣಗಳು ಪೂರ್ಣಗೊಳ್ಳುತ್ತಿದ್ದಂತೆ ಅಲ್ಲಿ ರೈಲು ಸಂಚಾರ ಆರಂಭಿಸಲು ಚಿಂತನೆ ನಡೆಸುತ್ತಿದ್ದೇವೆ”. “ಇಲ್ಲಿ ಕೇವಲ ರಾತ್ರಿ ವೇಳೆ ಮಾತ್ರ ಕೆಲಸ ಮಾಡಲಾಗುತ್ತಿದೆ. ಕಾಮಗಾರಿ ನಡೆಯುವ ವೇಳೆ ಒಂದು ಸಾವು ಉಂಟಾದ ನಂತರ ಸಂಚಾರ ದಟ್ಟಣೆ ನೋಡಿಕೊಂಡು ಕೆಲಸ ಮಾಡಲಾಗುತ್ತಿದೆ. ಇದು ವಾಸ್ತವದ ಪರಿಸ್ಥಿತಿ. ಟೀಕೆ ಮಾಡುವವರು, ಮಾತನಾಡುವವರು ಏನೇ ಹೇಳಿದರೂ ಕೆಲಸ ನಡೆಯಲೇಬೇಕು. ಎನ್ ಸಿಸಿ ಆಗಲಿ ಬೇರೆ ಗುತ್ತಿಗೆದಾರರೇ ಆಗಲಿ ನಿಗದಿತ ಸಮಯದ ಗಡುವಿನಲ್ಲಿ ಪೂರ್ಣಗೊಳಿಸದಿದ್ದರೆ ಮುಂದೆ ಯಾವುದೇ ಕಾಮಗಾರಿಯನ್ನು ಅವರಿಗೆ ನೀಡುವುದಿಲ್ಲ. ನಮಗೆ ಯೋಜನೆ ಜಾರಿ ಮುಖ್ಯ. ಉಳಿದ ಇಬ್ಬರು ಗುತ್ತಿಗೆದಾರರ ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಎನ್ ಸಿಸಿ ಬಗ್ಗೆ ಕೆಲವು ದೂರುಗಳಿವೆ. ಇಲ್ಲಿ ಅಪಘಾತ ಸಂಭವಿಸಿದ ನಂತರ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ” ಎಂದು ತಿಳಿಸಿದರು.

ಸರ್ಕಾರದ ಪರಿಹಾರ ಒಪ್ಪದವರಿಗೆ ಹಳೆ ದರದಲ್ಲಿ ಡೆಪಾಸಿಟ್ ಇಡಲು ಅಧಿಕಾರಿಗಳಿಗೆ ಸೂಚನೆ:

“ನಾನು ಬೆಳಗ್ಗೆಯಿಂದ ವಿವಿಧ ಕಾಮಗಾರಿಗಳ ಬಗ್ಗೆ ಪರಿಶೀಲನಾ ಸಭೆ ನಡೆಸಿದ್ದೇನೆ. ಮುಂದಿನ ಹದಿನೈದು ದಿನಗಳ ಕಾಲ ಚಳಿಗಾಲದ ಅಧಿವೇಶನಕ್ಕಾಗಿ ಬೆಳಗಾವಿಗೆ ತೆರಳಬೇಕಿದ್ದು, ಅದಕ್ಕೂ ಮುನ್ನ ಬಿಎಂಆರ್ ಡಿಎ, ಬಿಡಿಎ, ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗಳಲ್ಲಿ ಏನೆಲ್ಲಾ ಆಗಬೇಕಿದೆ ಎಂದು ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇನೆ. ಬೆಂಗಳೂರು ಬಿಸಿನೆಸ್ ಕಾರಿಡಾರ್ ವಿಚಾರದಲ್ಲಿ ಸರ್ಕಾರದ ಪರಿಹಾರಕ್ಕೆ ಒಪ್ಪಿ ಭೂಮಿ ನೀಡುವ ರೈತರಿಗೆ ತೀರ್ಮಾನ ಮಾಡಲಾಗಿರುವ ಪರಿಹಾರವನ್ನು ನೀಡುತ್ತೇವೆ. ಯಾರು ಒಪ್ಪುವುದಿಲ್ಲವೋ ಅವರಿಗೆ ನ್ಯಾಯಾಲಯದಲ್ಲಿ ಹಳೆಯ ದರದಲ್ಲಿ ಡೆಪಾಸಿಟ್ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ” ಎಂದು ತಿಳಿಸಿದರು.

“ಟಿಡಿಆರ್, ಎಫ್ಎಆರ್ ಸೇರಿದಂತೆ ನಾನು ಭೂ ಸಂತ್ರಸ್ತ ರೈತರಿಗೆ ಐದು ಆಯ್ಕೆಗಳ ಪರಿಹಾರವನ್ನು ನೀಡಿದ್ದೇನೆ. ಇಡೀ ದೇಶದಲ್ಲಿ ಯಾರೂ ಇಷ್ಟು ಅವಕಾಶ ನೀಡಿರಲಿಲ್ಲ. ಯಾರು ಏನೇ ಹೇಳಿದರೂ ನಾನಂತೂ ಡಿನೋಟಿಫಿಕೇಶನ್ ಮಾಡುವುದಿಲ್ಲ. ನನಗೆ ಬೆದರಿಸಲು ಕೋರ್ಟ್ ಮೆಟ್ಟಿಲೇರಿದರೆ ಹೋಗಲಿ, ಈಗಾಗಲೇ ನ್ಯಾಯಾಲಯದಲ್ಲಿ ಇಂತಹ ಪ್ರಕರಣಗಳು ವಿಫಲವಾಗಿವೆ. ನಾವು ರಸ್ತೆ ಮಾಡಲೇ ಬೇಕು. ರಸ್ತೆ ಬದಿಯಲ್ಲೇ 35% ವಾಣಿಜ್ಯ ಭೂಮಿಯನ್ನು ಪರಿಹಾರವಾಗಿ ನೀಡಲಾಗುವುದು ಎಂದು ಹೇಳಿದ್ದೇನೆ. ಇಡೀ ದೇಶದಲ್ಲಿ ಯಾರೂ ವಾಣಿಜ್ಯ ಭೂಮಿಯನ್ನು ಪರಿಹಾರವಾಗಿ ನೀಡುವುದಿಲ್ಲ. ಈ ಅವಕಾಶವನ್ನು ರೈತರು ಉಪಯೋಗಿಸಿಕೊಳ್ಳಬೇಕು. ಇದರಿಂದ ಅವರಿಗೆ ಒಳ್ಳೆಯದಾಗುತ್ತದೆ. ಇಲ್ಲದಿದ್ದರೆ ಅದು ಅವರಿಗೆ ಬಿಟ್ಟ ವಿಚಾರ” ಎಂದು ತಿಳಿಸಿದರು.


Share this with Friends

Related Post