ಬೆಂಗಳೂರು:ಹಾಸನ ಜಿಲ್ಲೆಯ ಅರಸಿಕೆರೆ ತಾಲ್ಲೂಕಿನ ಬಾಣವಾರ ಹಾಗೂ ಗಂಡಸಿ ಬ್ಲಾಕ್ನ 530 ಜನವಸತಿಗಳ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯ ಐದು ವರ್ಷಗಳ ಕಾರ್ಯಾಚರಣೆ ಹಾಗೂ ನಿರ್ವಹಣೆ ಕಾಮಗಾರಿಗೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ರೂ.73.22 ಕೋಟಿಗಳ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಈ ಯೋಜನೆಯಡಿ ಅರಸೀಕೆರೆ ತಾಲ್ಲೂಕಿನ ಗಂಡಸಿ ಮತ್ತು ಬಾಣಾವರ ಗ್ರಾಮೀಣ ಪ್ರದೇಶದಲ್ಲಿನ 530 ಜನವಸತಿಗಳಲ್ಲಿನ ಬ್ಲಾಕ್ ಜನಸಂಖ್ಯೆ 2047ನೆ ವರ್ಷದ ವೇಳೆಗೆ 2,51,880 ಎಂದು ಲೆಕ್ಕಾಚಾರ ಮಾಡಲಾಗಿದ್ದು ಶುದ್ಧೀಕರಿಸಿದ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಈ ಉದ್ದೇಶಕ್ಕೆ 22.04 ಎಂ.ಎಲ್.ಡಿ ಸಾಮರ್ಥ್ಯದ ಶುದ್ದೀಕರಣ ಘಟಕ (WTP) ವಿನ್ಯಾಸಗೊಳಿಸಲಾಗಿದ್ದು, ಸದರಿ WTP ಯನ್ನು ತಾಲ್ಲೂಕಿನ ಗಂಡಸಿ ಸಂತೆ ಮೈದಾನದ ಅರಸೀಕೆರೆ ಕುತುಕುಂದಿ/ಲಾಳನಕೆರೆ ರಸ್ತೆ ಪಕ್ಕದಲ್ಲಿ ನಿರ್ಮಿಸಲಾಗಿದೆ. ಈ ಯೋಜನೆಯಡಿ ನೀರು ರಾಂಜೀಹಳ್ಳಿ, ಗುಡ್ಡದ ಮೇಲೆ ಮುಖ್ಯ ಸಮತೋಲನ ಜಲಾಶಯದಲ್ಲಿ ಸಂಗ್ರಹಣೆಯಾಗುತ್ತಿದ್ದು ಎಲ್ಲಾ 530 ಜನವಸತಿಗಳಿಗೆ ಸರಬರಾಜು ಆಗುತ್ತಿದೆ ಎಂದು ಸಚಿವರು ವಿವರ ನೀಡಿದರು.
ಮುಂದಿನ ಐದು ವರ್ಷಗಳ ಕಾಲ ವಿದ್ಯುತ್ ವೆಚ್ಚ ಸೇರಿದಂತೆ ಕಾರ್ಯಾಚರಣೆ ಹಾಗೂ ನಿರ್ವಹಣೆಗಾಗಿ ಸಂಪುಟ ಸಬೆಯಲ್ಲಿ ಆಡಳಿತಾತ್ಮಕ ಅನುಮೊದನೆ ದೊರೆತಿದೆ ಎಂದು ಹೇಳಿದರು.

