Sat. Mar 14th, 2026

ರಾಜ್ಯದಲ್ಲಿ ₹4,824 ಕೋಟಿ ಹೂಡಿಕೆಗೆ ಒಪ್ಪಿಗೆ: 14,500ಕ್ಕೂ ಅಧಿಕ ಉದ್ಯೋಗ ಸೃಷ್ಟಿ

Share this with Friends

ಬೆಂಗಳೂರು: ರಾಜ್ಯದ ಕೈಗಾರಿಕಾ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸುವ ನಿಟ್ಟಿನಲ್ಲಿ, ಸುಮಾರು 4,824 ಕೋಟಿ ರೂಪಾಯಿಗಳ ಬೃಹತ್ ಹೂಡಿಕೆಯ ಪ್ರಸ್ತಾವನೆಗಳಿಗೆ ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿದೆ. ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಅವರ ನೇತೃತ್ವದಲ್ಲಿ ನಡೆದ 158ನೇ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ (SLSWCC) ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.

ಈ ಹೂಡಿಕೆಗಳಿಂದಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 14,525 ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.ಕೇವಲ ಬೆಂಗಳೂರಿಗೆ ಸೀಮಿತವಾಗದೆ ವಿಜಯಪುರ, ಬಾಗಲಕೋಟೆ, ಚಿತ್ರದುರ್ಗ, ಕೋಲಾರ ಮತ್ತು ರಾಮನಗರ ಸೇರಿದಂತೆ ಒಟ್ಟು 13 ಜಿಲ್ಲೆಗಳಲ್ಲಿ 37 ಹೊಸ ಕೈಗಾರಿಕಾ ಯೋಜನೆಗಳು ಜಾರಿಗೆ ಬರಲಿವೆ. ಐಟಿ ಮೂಲಸೌಲಭ್ಯ, ಸಕ್ಕರೆ ಕಾರ್ಖಾನೆ, ತಾಂತ್ರಿಕ ಜವಳಿ (Technical Textile), ಎಲೆಕ್ಟ್ರಾನಿಕ್ಸ್, ಮತ್ತು ಇವಿ (EV) ಮೋಟಾರ್ ತಯಾರಿಕೆಯಂತಹ ವೈವಿಧ್ಯಮಯ ಕ್ಷೇತ್ರಗಳಲ್ಲಿ ಈ ಹೂಡಿಕೆ ಹರಿದುಬರಲಿದೆ ಎಂದು ತಿಳಿಸಿದರು.

ಪ್ರಮುಖ ಯೋಜನೆಗಳು:

ಬಾಗ್ಮನೆ ಕನ್‌ಸ್ಟ್ರಕ್ಷನ್: ಐಟಿ ಮೂಲಸೌಲಭ್ಯ ಅಭಿವೃದ್ಧಿಗಾಗಿ ₹494.65 ಕೋಟಿ.

ಕರ್ನಾಟಕ ಬಂಗಾರು ಷುಗರ್ಸ್: ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ₹443.50 ಕೋಟಿ.

ತ್ಸುಯೊ ಮ್ಯಾನುಫ್ಯಾಕ್ಚರಿಂಗ್: ಎಲೆಕ್ಟ್ರಿಕ್ ವಾಹನಗಳ ಮೋಟಾರ್ ತಯಾರಿಕೆಗೆ ₹250 ಕೋಟಿ.

ಪಂಚತಾರಾ ಹೋಟೆಲ್: ಪ್ರವಾಸೋದ್ಯಮಕ್ಕೆ ಪೂರಕವಾಗಿ ₹300 ಕೋಟಿ ವೆಚ್ಚದಲ್ಲಿ ಪಂಚತಾರಾ ಹೋಟೆಲ್ ನಿರ್ಮಾಣ.

ಹೂಡಿಕೆಯ ವರ್ಗೀಕರಣ:

ಸಭೆಯಲ್ಲಿ 50 ಕೋಟಿ ರೂ.ಗಿಂತ ಹೆಚ್ಚಿನ ಹೂಡಿಕೆಯ 22 ದೊಡ್ಡ ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, ಇದರಿಂದ ₹3,908 ಕೋಟಿ ಹೂಡಿಕೆಯಾಗಲಿದೆ. ಉಳಿದಂತೆ ಮಧ್ಯಮ ಗಾತ್ರದ 15 ಯೋಜನೆಗಳ ಮೂಲಕ ₹350 ಕೋಟಿ ಹಾಗೂ ಹಳೆಯ ಯೋಜನೆಗಳ ವಿಸ್ತರಣೆಗಾಗಿ ₹565 ಕೋಟಿ ಹೂಡಿಕೆಗೆ ಸಮ್ಮತಿ ಸೂಚಿಸಲಾಗಿದೆ ಎಂದು ಸಚಿವ ಎಂಬಿ ಪಾಟೀಲ್ ತಿಳಿಸಿದರು.

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಉನ್ನತ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದು, ಯೋಜನೆಗಳ ಶೀಘ್ರ ಜಾರಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಚರ್ಚಿಸಿದರು. ಈ ಹೊಸ ಯೋಜನೆಗಳು ರಾಜ್ಯದ ಆರ್ಥಿಕತೆಗೆ ದೊಡ್ಡ ಬಲ ನೀಡಲಿವೆ ಎಂದು ನಿರೀಕ್ಷಿಸಲಾಗಿದೆ.


Share this with Friends

Related Post