ಬೆಂಗಳೂರು: ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ ಬಜೆಟ್ ಇದಾಗಿದೆ. ಸಬ್ ಕಾ ಸಾತ್, ಸಬ್ ಕಾ ವಿಕಾಸ್ ಧ್ಯೇಯದಂತೆ ಆಯವ್ಯಯ ಪತ್ರವು ಎಲ್ಲರಿಗೂ ಹತ್ತಿರವಾಗಿದೆ ಎಂದು ಕೇಂದ್ರದ ಬಜೆಟ್ ಗೆ ರಾಜ್ಯ ಬಿಜೆಪಿ ಹಿರಿಯ ನಾಯಕ ಹಾಗು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ನಿರ್ಮಲಾ ಸೀತಾರಾಮನ್ ಮಂಡಿಸಿದ 2026-27ನೇ ಸಾಲಿನ ಮುಂಗಡ ಪತ್ರವನ್ನು ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ವೀಕ್ಷಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು,ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಐತಿಹಾಸಿಕ ಬಜೆಟ್ ಮಂಡಿಸಿದ್ದಾರೆ.ದೇಶದ ಸಾರ್ವಭೌಮತ್ವ, ಏಕತೆಯ ಉದ್ದೇಶವನ್ನು ಎತ್ತಿ ಹಿಡಿಯುವಲ್ಲಿ ಇದು ಸಫಲವಾಗಿದೆ. ದೇಶದ ಪುರಾತನ ಸ್ಥಳಗಳ ಅಭಿವೃದ್ಧಿಗೆ ಒತ್ತು ಕೊಟ್ಟಿದ್ದಾರೆ. ಕರ್ನಾಟಕ ರೈಲ್ವೆ ಸ್ಟೇಷನ್ ಕಾರಿಡಾರ್ ಘೋಷಿಸಿದ್ದಾರೆ. ಕಳೆದ 10 ವರ್ಷಗಳಲ್ಲಿ 25 ಕೋಟಿ ಜನರು ಬಡತನ ರೇಖೆಯಿಂದ ಮೇಲೆ ಬಂದಿದ್ದಾರೆ ಎಂದು ವಿವರಿಸಿದರು.
ರೈತರ ಆದಾಯ ದ್ವಿಗುಣಗೊಳಿಸಲು ಹೆಚ್ಚಿನ ಒತ್ತು ಕೊಡಲಾಗಿದೆ. 500 ಜಲಾಶಯಗಳು ಮತ್ತು ಅಮೃತ ಸರೋವರಗಳ ಅಭಿವೃದ್ಧಿಯ ಮೂಲಕ ಮೀನುಗಾರಿಕೆ ಕ್ಷೇತ್ರವನ್ನು ಬಲಪಡಿಸಲು ಮುಂದಾಗಿದ್ದಾರೆ. ಪಶುಸಂಗೋಪನೆ ಕ್ಷೇತ್ರದಲ್ಲಿ ಉದ್ಯಮಶೀಲತೆ ಅಭಿವೃದ್ಧಿ ಮೂಲಕ ಉದ್ಯೋಗಾವಕಾಶ ಒದಗಿಸಲಾಗುತ್ತದೆ. ತೆಂಗಿನ ಉತ್ಪಾದನೆ ಹೆಚ್ಚಳ ಹಾಗೂ ಒಂದು ಕೋಟಿ ರೈತರು ಸೇರಿ 3 ಕೋಟಿ ಜನರಿಗೆ ನೆರವು ನೀಡುವಂಥದ್ದು, ಭಾರತೀಯ ಗೋಡಂಬಿ ಮತ್ತು ಸ್ಥಳೀಯ ಕೋಕೋವನ್ನು 2030ರ ವೇಳೆಗೆ ಪ್ರೀಮಿಯಂ ಬ್ರ್ಯಾಂಡ್ ಆಗಿ ರೂಪಿಸಲು ಉದ್ದೇಶಿಸಲಾಗಿದೆ. 7 ಹೈಸ್ಪೀಡ್ ರೈಲ್ವೆ ಓಡಾಟಕ್ಕೆ ಮೆಚ್ಚುಗೆ ಸೂಚಿಸಿದರು.
ಜನಹಿತದ ಕೇಂದ್ರ ಬಜೆಟ್:
ಇಂದು ಮಂಡಿಸಿದ ಕೇಂದ್ರ ಬಜೆಟ್ ಜನಹಿತದಿಂದ ಕೂಡಿದೆ ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ್ ವಿಶ್ಲೇಷಿಸಿದರು.ಕೈಗಾರಿಕೆಗೆ ವಿಶೇಷ ಒತ್ತು ಕೊಟ್ಟಿದ್ದಾರೆ. ವಿದ್ಯಾಭ್ಯಾಸಕ್ಕೆ ಹೆಚ್ಚು ಆದ್ಯತೆ ನೀಡಿದ್ದಾರೆ.ಮಹಿಳೆಯರು, ಹೆಣ್ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರತಿ ಜಿಲ್ಲೆಯಲ್ಲಿ ಹಾಸ್ಟೆಲ್ ನಿರ್ಮಿಸಲು ಕೇಂದ್ರ ಸರಕಾರವೇ ಮುಂದೆ ಬಂದಿದೆ ಇದು ಮೊದಲ ಬಾರಿ ಎಂಬ ಅನಿಸಿಕೆ ತಮ್ಮದು ಎಂದರು.
ಕರ್ನಾಟಕವು ಗಂಧದ ನಾಡು. ಇದೇ ಮೊದಲ ಬಾರಿಗೆ ಗಂಧ ಬೆಳೆಯಲು, ಸಂರಕ್ಷಿಸಲು ಮತ್ತು ಹೊಸದಾಗಿ ಕೆಲವು ಪ್ರದೇಶಗಳಲ್ಲಿ ಗಂಧ ಬೆಳೆಯಲು ಉತ್ತೇಜನವನ್ನು ನಿರ್ಮಲಾ ಸೀತಾರಾಮನ್ ಅವರು ಮಾಡಿದ್ದಾರೆ. ಹಲವು ಜಿಲ್ಲೆಗಳಲ್ಲಿರುವ ತೆಂಗಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಅವಕಾಶ ಆಗಲು ಉತ್ತೇಜನ ಕೊಡುವ ಕೆಲಸ ಮಾಡಿದ್ದಾರೆ. ನಮ್ಮಲ್ಲಿ ಬಹಳ ಪ್ರವಾಸೋದ್ಯಮ ಅವಕಾಶವಿದೆ. ಮೊದಲ ಬಾರಿಗೆ ಟೂರಿಸ್ಟ್ ಗೈಡ್ಗಳಿಗೆ ತರಬೇತಿ ಕೊಡುವ ಶಾಲೆ ಆರಂಭಿಸುತ್ತಿದ್ದಾರೆ. ಪ್ರವಾಸೋದ್ಯಮ ಕ್ಷೇತ್ರಕ್ಕೂ ಹೆಚ್ಚು ಒತ್ತು ಕೊಟ್ಟಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.

