ಬೆಳಗಾವಿ ಸುವರ್ಣಸೌಧ:ಖಾದಿಯು ಕೇವಲ ವಸ್ತ್ರ ಅಲ್ಲ; ಅದು ದೇಶದ ಹೆಮ್ಮಯ ಸಂಕೇತ,ಪ್ರತಿಯೊಬ್ಬರೂ ದೇಶಪ್ರೇಮ ಬೆಳೆಸಿಕೊಳ್ಳಬೇಕು,ಜಾತ್ಯತೀತರಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಬೆಳಗಾವಿ ಸುವರ್ಣಸೌಧದ ಪಶ್ವಿಮ ದ್ವಾರದಲ್ಲಿ ಜಗತ್ತಿನ ಎರಡನೇ ಅತಿ ದೊಡ್ಡ ಖಾದಿ ರಾಷ್ಟ್ರಧ್ವಜವನ್ನು ಚರಕ ತಿರುಗಿಸುವ ಮೂಲಕ ಸಿಎಂ ಸಿದ್ದರಾಮಯ್ಯ ಅನಾವರಣಗೊಳಿಸಿದರು.
ಇದೆ ವೇಳೆ, ರಾಷ್ಟ್ರಗೀತೆ ಮೊಳಗಿತು. ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಬೆಳಗಾವಿ ಕಾಂಗ್ರೇಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದ ನೆನಪಾರ್ಥ ಇತ್ತೀಚೆಗೆ ನಡೆದ ಗಾಂಧೀ ಭಾರತ ಎನ್ನುವ ರಾಷ್ಟ್ರಪ್ರೇಮದ ಅದ್ಭುತ ಕಾರ್ಯಕ್ರಮ ನಡೆದ ಬೆನ್ನಲ್ಲೇ ಮತ್ತೊಂದು ಮಹತ್ವದ ರಾಷ್ಟ್ರಪ್ರೇಮದ ಕಾರ್ಯಕ್ರಮ ಗಂಡುಮೆಟ್ಟಿನ ನಾಡು ಬೆಳಗಾವಿಯಲ್ಲಿ ನೆರವೇರುತ್ತಿದ್ದಂತೆ ಸೇರಿದ್ಧ ಜನಸ್ತೋಮದಿಂದ ಕರತಾಡನ ಕೇಳಿ ಬಂದಿತು.
75 ಅಡಿ ಉದ್ದ ಹಾಗೂ 55 ಅಡಿ ಅಗಲದ ವಿಶಾಲ ದ್ವಜವು ದೇಶಪ್ರೇಮದ ಸಂಕೇತವಾಗಿದ್ದು, ನೋಡುಗರಲ್ಲಿ ದೇಶಭಕ್ತಿಯ ಸುಂದರ ಭಾವನೆಗಳನ್ನು ಬಿತ್ತಲಿದೆ. ಇಂತಹ ಮಹತ್ವದ ಧ್ವಜದ ನಿರ್ಮಾಣಕ್ಕೆ ಶ್ರಮಿಸಿದ ವಿನೋದಕುಮಾರ ರೇವಪ್ಪ ಬಮ್ಮಣ್ಣವರ ಅವರಿಗೆ ಮುಖ್ಯಮಂತ್ರಿಗಳು ಸನ್ಮಾನಿಸಿ ಗೌರವಿಸಿದರು.
ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನಸಭೆಯ ಭವ್ಯ ಮೆಟ್ಟಿಲುಗಳ ಮೇಲೆ ಜಗತ್ತಿನ ಎರಡನೆ ಅತಿ ದೊಡ್ಡ ರಾಷ್ಟ್ರಧ್ವಜ ಅನಾವರಣಕ್ಕೆ ಶ್ರಮಿಸಿ ಉತ್ತಮ ಕಾರ್ಯ ಮಾಡಿದ ಸಭಾಧ್ಯಕ್ಷರಾದ ಯು.ಟಿ.ಖಾದರ್ ಮತ್ತು ಅವರ ತಂಡದವರಿಗೆ ಮತ್ತು ಈ ಧ್ವಜ ನೇಯ್ಗೆಗೆ ಶ್ರಮಿಸಿದ ಕಲಬುರಗಿ ಜಿಲ್ಲೆಯ ಕಮಲಾಪುರದ ವಿನೋದಕುಮಾರ ರೇವಪ್ಪ ಬೊಮ್ಮಣ್ಣವರ ಅವರಿಗೆ ಸರ್ಕಾರದಿಂದ ಅಭಿನಂದನೆ ತಿಳಿಸುವೆ ಎಂದರು. ಖಾದಿಯು ಕೇವಲ ವಸ್ತ್ರ ಅಲ್ಲ; ಅದು ದೇಶದ ಹೆಮ್ಮಯ ಸಂಕೇತ ಎಂದರು.
ನಾವೆಲ್ಲರೂ ಜಾತ್ಯಾತೀತರಾಗುವುದು ಈಗ ಅತೀ ಅವಶ್ಯವಿದೆ. ಮನುಷ್ಯರು ಮನುಷ್ಯರನ್ನು ಪ್ರೀತಿಸಬೇಕು. ನಾವು ಭಾತೃತ್ವವನ್ನು ಸಾಧಿಸಿದ್ದೇವೆ. ನಾವು ದೇಶಪ್ರೇಮ ಬೆಳೆಸಿಕೊಳ್ಳದೇ ಹೋದರೆ ಮನುಷ್ಯರಾಗಿ ಬಾಳಲು ಸಾಧ್ಯವಾಗುವುದಿಲ್ಲ. ವಿದ್ಯಾರ್ಥಿ ಯುವಜನರಲ್ಲಿ ದೇಶಭಕ್ತಿಯ ಭಾವ ಬೆಳೆಸುವ ಕಾರ್ಯವಾಗಬೇಕು ಎಂದರು. ಪ್ರತಿಯೊಬ್ಬರಿಗೂ ಸಂವಿಧಾನದ ಮಹತ್ವ ತಿಳಿಸಲು ಎಲ್ಲಾ ಕಡೆ ಸಂವಿಧಾನ ಪೀಠಿಕೆ ಬೋಧಿಸುವ ಕಾರ್ಯಕ್ರಮ ರೂಪಿಸಿದ್ದೇವೆ ಎಂದು ತಿಳಿಸಿದರು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಮಾತನಾಡಿ, ಈ ತ್ರಿವರ್ಣ ಧ್ವಜದಿಂದಾಗಿ ಜನತೆಗೆ ರಾಷ್ಟ್ರ ಭಕ್ತಿ ಮೂಡಲಿದೆ. ಇದರಿಂದ ಮುಂದಿನ ಪೀಳಿಗೆಗೆ ಉತ್ತಮ ಸಂದೇಶ ರವಾನೆಯಾಗಲಿದೆ. ಇದಕ್ಕೆ ಶ್ರಮಿಸಿದ ಸಭಾಧ್ಯಕ್ಷರಾದ ಯು ಟಿ ಖಾದರ್, ಉಪಸಭಾಧ್ಯಕ್ಷರಾದ ರುದ್ರಪ್ಪ ಲಮಾಣಿ ಹಾಗೂ ಅವರ ತಂಡದವರಿಗೆ ಅಭಿನಂದನೆಗಳನ್ನು ತಿಳಿಸುವೆ ಎಂದರು. ಸಾರ್ವಜನಿಕ ವೀಕ್ಷಣೆಗೆ ಅವಕಾಶ ಮಾಡಿಕೊಡಬೇಕು ಎಂದು ತಿಳಿಸಿದರು.
ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ ಮಾತನಾಡಿ, ಗಾಂಧೀ ಭೇಟಿ ನೀಡಿದ ನೆಲವಾದ ಬೆಳಗಾವಿಯಲ್ಲಿ ಎರಡನೇ ಅತಿ ದೊಡ್ಡ ರಾಷ್ಟ್ರಧ್ವಜದ ಅನಾವರಣ ನಡೆದಿದ್ದು ಸಂತಸ ತಂದಿದೆ. ಇದರ ಹಿಂದಿನ ಶ್ರಮ, ಬದ್ಧತೆ ಹಾಗೂ ಧ್ವಜದ ಮೇಲಿನ ಪ್ರೇಮ ಶ್ಲಾಘನೀಯವಾದುದು ಎಂದರು.
ಇದು ಕೇವಲ ಧ್ವಜವಲ್ಲ; ರಾಷ್ಟ್ರಭಕ್ತಿ, ರಾಷ್ಟ್ರಪ್ರೇಮದ ಸಂಕೇತ ಎಂದು ಸಂಸದೀಯ ವ್ಯವಹಾರಗಳ ಸಚಿವರು ಹಾಗೂ ಪ್ರವಾಸೋದ್ಯಮ ಸಚಿವರಾದ ಎಚ್ ಕೆ ಪಾಟೀಲ್ ತಿಳಿಸಿದರು.
ಈ ಸಂದರ್ಭದಲ್ಲಿ ವಿಧಾನಸಭೆ ಉಪ ಸಭಾಧ್ಯಕ್ಷರಾದ ರುದ್ರಪ್ಪ ಲಮಾಣಿ, ಸಚಿವರಾದ ಡಾ.ಹೆಚ್.ಸಿ.ಮಹಾದೇವಪ್ಪ,ಲಕ್ಷ್ಮಿ ಹೆಬ್ಬಾಳಕರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿದಂತೆ ಶಾಸಕರಾದ ಅಶೋಕ ಪಟ್ಟಣ,ತಮ್ಮಯ್ಯ, ಸಲೀಂ ಅಹ್ಮದ್, ನಸೀರ್ ಅಹ್ಮದ್ ಸೇರಿದಂತೆ ಇತರರು ಇದ್ದರು.

