Fri. Mar 6th, 2026

ವಿಬಿ ಜಿ ರಾಮ್ ಜಿ ಕಾಯ್ದೆ ತರಲು ಕೇಂದ್ರಕ್ಕೆ ಆರ್ ಎಸ್ ಎಸ್ ಪ್ರೇರಣೆ: ಸಿದ್ದರಾಮಯ್ಯ

Share this with Friends

ಬೆಂಗಳೂರು:ಗ್ರಾಮೀಣ ಪ್ರದೇಶದ ಬಡ ಕಾರ್ಮಿಕರಿಗೆ ಮಾರಕವಾಗಿರುವ ವಿಬಿ ಜಿ ರಾಮ್ ಜಿ ಕಾಯ್ದೆ ತರಲು ಕೇಂದ್ರಕ್ಕೆ ಆರ್ ಎಸ್ ಎಸ್ ಪ್ರೇರಣೆ ನೀಡಿದ್ದು, ಇದರ ವಿರುದ್ಧ ರಾಜ್ಯಾದ್ಯಂತ ಎಲ್ಲಾ ಗ್ರಾಮ,ತಾಲ್ಲೂಕು, ಜಿಲ್ಲಾ ಹಂತಗಳಲ್ಲಿಯೂ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ರಾಜ್ಯಪಾಲರ ಭೇಟಿ ನಂತರ ಲೋಕಭವನದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ಇಂತಹ ಜನವಿರೋಧಿ ಕಾಯ್ದೆ ತರಲು ಕೇಂದ್ರಕ್ಕೆ ಆರ್ ಎಸ್ ಎಸ್ ಪ್ರೇರಣೆ ನೀಡಿದ್ದು, ಬಡಜನರು ಆರ್ಥಿಕವಾಗಿ ಸ್ವಾವಲಂಬಿಗಳಾಗಬಾರದು ಎಂಬುದು ಬಿಜೆಪಿ ಹಾಗು ಆರ್ ಎಸ್ ಎಸ್ ನ ದುರುದ್ದೇಶ. ಆದ್ದರಿಂದ ಕೇಂದ್ರದ ಈ ಕಾಯ್ದೆಯನ್ನು ರದ್ದುಗೊಳಿಸಿ, ಮನರೇಗಾ ಪುನರ್ಸ್ಥಾಪಿಸಬೇಕೆಂದು ಹೋರಾಟ ನಡೆಸಲಾಗುತ್ತಿದೆ ಎಂದರು.

ಕೇಂದ್ರಸರ್ಕಾರವು ಮನರೇಗಾ ಕಾಯ್ದೆ ರದ್ದುಗೊಳಿಸಿ ವಿಬಿ ಜಿ ರಾಮ್ ಜಿ ಯನ್ನು ಜಾರಿಗೊಳಿಸಿದ್ದಾರೆ.. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಜನಪರ ಚಿಂತನೆಯಿಂದ ಜಾರಿಗೊಂಡ ಮನರೇಗಾ ಯೋಜನೆಯಡಿ ಬಡವರು, ಸಣ್ಣರೈತರು, ಮಹಿಳೆಯರು 100 ದಿನಗಳ ಕಾಲ ಕೆಲಸವನ್ನು ಖಾತ್ರಿಪಡಿಸುತ್ತಿತ್ತು. ಬಡವರಿಗೆ ಕೆಲಸದ ಹಕ್ಕು ಸಂವಿಧಾನಬದ್ಧವಾದದ್ದು. ಆದರೆ ವಿಬಿ ಜಿ ರಾಮ್ ಜಿ ಕಾಯ್ದೆಯಿಂದ ಸಂವಿಧಾನಬದ್ಧವಾದ ಹಕ್ಕನ್ನು ಕಸಿದುಕೊಂಡಂತಾಗಿದೆ ಎಂದರು.

ಬಡವರಿಗೆ ಕೆಲಸ ಸಿಗುವ ಭರವಸೆಯಿಲ್ಲ:

ಕರ್ನಾಟಕವೊಂದರಲ್ಲೇ ಸುಮಾರು 71 ಲಕ್ಷ ಜನ ಕಾರ್ಮಿಕರಿದ್ದು, ಇವರಲ್ಲಿ ಶೇ.53 ರಷ್ಟು ಮಹಿಳೆಯರು, ಶೇ. 28 ರಷ್ಟು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಠ ವರ್ಗದವರು, 5 ಲಕ್ಷ ಜನ ಅಂಗವಿಕಲ ಕಾರ್ಮಿಕರಿದ್ದಾರೆ. ಹೊಸ ಕಾಯ್ದೆಯಡಿ ಬಡ ಕೂಲಿಕಾರ್ಮಿಕರ ಕೆಲಸದ ಸ್ಥಳ ಮತ್ತು ದಿನಗಳನ್ನು ಕೇಂದ್ರ ಸರ್ಕಾರ ನಿರ್ಧಾರ ಮಾಡಲಿದೆ. ವ್ಯವಸಾಯದ 60 ದಿನಗಳು ಕೂಲಿ ಕಾರ್ಮಿಕರು ಕೆಲಸ ಮಾಡುವಂತಿಲ್ಲ. ಈ ಕಾಯ್ದೆಯಡಿ ಕೇಂದ್ರ ಸರ್ಕಾರ ಪೂರ್ಣ ಅನುದಾನ ನೀಡದೇ, ಕೇವಲ ಶೇ.60 ರಷ್ಟನ್ನು ಮಾತ್ರ ನೀಡುತ್ತಿದ್ದು, ಉಳಿದ ಶೇ. 40 ರಷ್ಟನ್ನು ರಾಜ್ಯ ಸರ್ಕಾರ ನೀಡಬೇಕಿದೆ. ಜನರಿಗೆ ಮಾರಕವಾದ ಕಾಯ್ದೆಯಾಗಿದೆ. ಗ್ರಾಮೀಣ ಪ್ರದೇಶದ ಕಾರ್ಮಿಕರಿಗೆ ಕೆಲಸವನ್ನು ಕಸಿದುಕೊಂಡಂತಾಗಿದೆ ಎಂದರು.


Share this with Friends

Related Post