Fri. Mar 6th, 2026

ಡಾ. ರಾಜಕುಮಾರ್ ಅವರು ಬೌನ್ಸರ್‌ಗಳ ಜೊತೆ ಬರುತ್ತಿರಲಿಲ್ಲ: ಸಾಧು ಕೋಕಿಲ

Share this with Friends

ಬೆಂಗಳೂರು: ವರನಟ ಡಾ.ರಾಜ್ ಕುಮಾರ್ ಅವರು ಎಲ್ಲಿಗೂ ಕೂಡ ಈಗಿನವರ ತರಹ ಬೌನ್ಸರ್‌ಗಳನ್ನು ಸುತ್ತಮುತ್ತ ಇಟ್ಟುಕೊಂಡು ಬರುತ್ತಿರಲಿಲ್ಲ. ಅವರ ಸುತ್ತಮುತ್ತ ಇದ್ದಿದ್ದು ಅಭಿಮಾನಿಗಳು,ಅವರನ್ನು ನೋಡಲು ಇಡೀ ಕರ್ನಾಟಕವೇ ಕಾಯುತ್ತಿತ್ತು ಎಂದು ಸಂಗೀತ ನಿರ್ದೇಶಕ ಹಾಗು ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ ತಿಳಿಸಿದ್ದಾರೆ.

17  ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸ ದಲ್ಲಿ ಅಪರೂಪಕ್ಕೆ ರಾಜಕುಮಾರ್ ಹೆಸರಿನ ಕಾರಣದಿಂದ ಚಿತ್ರೋತ್ಸವದ ಗೋಷ್ಠಿಯಲ್ಲಿ ಮಾತನಾಡಿದ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ, ‘ಯಾವುದೇ ಸಾಂಸ್ಕೃತಿಕ ಘಟಕಕ್ಕೆ ಹೋದರೂ ಕುವೆಂಪು ಅವರ ಜೊತೆ ರಾಜಕುಮಾರ್ ಅವರನ್ನೂ ನೋಡಬಹುದು. ಅವರು ಎಲ್ಲರಿಗೂ ಸಲ್ಲುವವರು. ನಾನು ಸಂಗೀತ ಸಂಯೋಜಿಸಿದ ಕೆಲವು ಹಾಡುಗಳನ್ನು ರಾಜಕುಮಾರ್ ಅವರು ಹಾಡಿದ್ದಾರೆ. ಆಗ ಅವರು ಹಾಡುವ ಮೊದಲು ತಯಾರಾಗಿ ಬರುತ್ತಿದ್ದರು. ಹಾಡುವ ದಿನ ನಮ್ಮನ್ನೆಲ್ಲಾ ಸಾಲಾಗಿ ನಿಲ್ಲಿಸುತ್ತಿದ್ದಾರೆ. ತಲೆಯಿಂದ ಕಾಲಿನವರೆಗೆ ಮುಟ್ಟಿ ನಮಸ್ಕಾರ ಮಾಡಿ ಆಮೇಲೆಯೇ ಹಾಡಲು ಹೋಗುತ್ತಿದ್ದರು. ಅಂಥಾ ಸಂಸ್ಕಾರ ಅವರದು. ಈಗಿನವರ ತರಹ ಅವರು ಬೌನ್ಸರ್‌ಗಳನ್ನು ಸುತ್ತಮುತ್ತ ಇಟ್ಟುಕೊಂಡು ಬರುತ್ತಿರಲಿಲ್ಲ. ಅವರ ಸುತ್ತಮುತ್ತ ಇದ್ದಿದ್ದು ಅಭಿಮಾನಿಗಳು. ಅವರು ಮನೆಯಿಂದ ಹೊರಗೆ ಕಾಲಿಟ್ಟರೆ ಸಾಕು, ಅವರನ್ನು ನೋಡಲು ಇಡೀ ಕರ್ನಾಟಕವೇ ಕಾಯುತ್ತಿತ್ತು. ಅವರು ಒಂದು ಹಾಡನ್ನು ಹಾಡಲು 25000 ಸಾವಿರ ತೆಗೆದುಕೊಳ್ಳುತ್ತಿದ್ದರು. ಆದರೆ, ಅದರಲ್ಲಿ ಎಲ್ಲವೂ ಬಡವರಿಗೆ ಸಂಬಂಧಿಸಿದ ಟ್ರಸ್ಟ್ ಗೆ ಹೋಗುತ್ತಿತ್ತು. ಅದನ್ನು ಅವರು ಯಾವತ್ತೂ ಹೇಳಿಕೊಳ್ಳಲಿಲ್ಲ’ ಎಂದು ಹೇಳಿದರು.

ರಾಜ್ ಕುಮಾರ್ ವ್ಯಕ್ತಿತ್ವ, ಸಾಧನೆ ಕುರಿತು ಸಂವಾದ:

 ‘ಕುವೆಂಪು ಅವರು ಸಾಹಿತ್ಯದ ಮೂಲಕ ಮೌಲ್ಯಗಳನ್ನು ದಾಟಿಸಿದರೆ, ರಾಜಕುಮಾರ್ ಅವರು ಜನಸಾಮಾನ್ಯರಿಗೂ ತಲುಪುವಂತೆ ಮೌಲ್ಯಗಳನ್ನು ಕಲಿಸಿದರು. ಕಾಳಜಿ ಮತ್ತು ತುಡಿತ ಇಟ್ಟುಕೊಂಡು, ಸಮಾಜ ಕಟ್ಟುವ ಕಡೆಗೆ ಕೆಲಸ ಮಾಡಿದರು. ಬಡವರಲ್ಲಿ ಸ್ವಾಭಿಮಾನ, ಘನತೆ ಹೆಚ್ಚಿಸಿದರು. ಅವರು ಬಡವರ್ಗದವರಿಗೆ ಆತ್ಮವಿಶ್ವಾಸದಿಂದ ಬದುಕುವ ಮಾರ್ಗವನ್ನು ಹೇಳಿಕೊಟ್ಟರು’ ಎಂದು ಸಾಹಿತಿ, ಪತ್ರಕರ್ತ ಡಾ.ಮಂಜುನಾಥ ಅದ್ದೆಯವರು ಹೇಳಿದರು.

ಡಾ.ಮಂಜುನಾಥ ಅದ್ದೆಯವರು ರಚಿಸಿರುವ ‘ಬಡವರ ರಾಜಕುಮಾರ್’ ಕೃತಿಯ ಆಧಾರದಲ್ಲಿ ನಡೆದ ‘ತಳಸಮುದಾಯಗಳ ನಾಯಕ’ ಗೋಷ್ಠಿಯಲ್ಲಿ ಮಾತನಾಡಿದ ಅದ್ದೆಯವರು, ‘ಈಗಿನ ಸಿನಿಮಾಗಳಲ್ಲಿ ವಾಸ್ತವ ಬದುಕು ಇರುವುದಿಲ್ಲ, ಸಾವಯವ ಚಿಂತನೆ ಇರುವುದಿಲ್ಲ. ಆದರೆ, ರಾಜಕುಮಾರ್ ಅವರು ವಾಸ್ತವ ಮತ್ತು ವ್ಯಾಪಾರ ಎರಡನ್ನೂ ಸರಿತೂಗಿಸಿಕೊಂಡು ಹೋದ ಮಾದರಿ ವ್ಯಕ್ತಿತ್ವ’ ಎಂದರು.

ಬಾಲ್ಯದಲ್ಲಿ ತಮ್ಮ ಮೇಲೆ ರಾಜಕುಮಾರ್ ಬೀರಿದ ಪರಿಣಾಮದ ಕುರಿತು ಮಾತನಾಡಿದ ಅವರು, ‘ ಪಿಯುಸಿ ಸೇರುವ ಕಾಲಕ್ಕೆ ನನ್ನ ಬಳಿ ಪ್ಯಾಂಟ್ ಹೊಲಿಸಿಕೊಳ್ಳಲು ಹಣವಿರಲಿಲ್ಲ. ಅಂದು ಚಡ್ಡಿ ಹಾಕಿಕೊಂಡೇ ಮೇಯರ್ ಆಗುವ ‘ಮೇಯರ್ ಮುತ್ತಣ್ಣ’ನ ಪಾತ್ರ ನನ್ನಲ್ಲಿ ಆತ್ಮವಿಶ್ವಾಸ ತುಂಬಿತ್ತು’ ಎಂದರು,

ಹಿರಿಯ ಪತ್ರಕರ್ತ ರಘುನಾಥ ಚ.ಹ. ಮಾತನಾಡಿ, ‘ಕರ್ನಾಟಕ ಏಕೀಕರಣಗೊಂಡಾಗ ರಾಜಕೀಯವಾಗಿ, ಭೌಗೋಳಿಕವಾಗಿ ಏಕೀಕರಣವಾಗಿತ್ತು. ಆದರೆ, ಸಾಂಸ್ಕೃತಿಕ ಏಕೀಕರಣವಾಗಿದ್ದು ರಾಜಕುಮಾರ್ ಅವರಿಂದ. ಕುವೆಂಪು ಪ್ರಜ್ಞಾಪೂರ್ವಕವಾಗಿ ತಾತ್ವಿಕತೆ ಕಟ್ಟಿದರೆ, ರಾಜಕುಮಾರ್ ಅಪ್ರಜ್ಞಾಪೂರ್ವಕವಾಗಿ ತಾತ್ವಿಕತೆ ಹೇಳಿಕೊಟ್ಟರು. ಕುವೆಂಪು ಬೌದ್ಧಿಕ ಪ್ರತಿನಿಧಿಯಾದರೆ, ರಾಜಕುಮಾರ್ ಜನಪದರ ಪ್ರತಿನಿಧಿ. ಅವರ ಸಿನಿಮಾಗಳು ನಮಗೆ ಸಾಂವಿಧಾನಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಹೇಗೆಂದು ಕಲಿಸಿದವು’ ಎಂದು ಹೇಳಿದರು.

‘ಯಾರ ಭೇಟಿ ಆದಾಗ ಒಂದು ಗಾಢ ಅನುಭವ ನಮಗೆ ಆಗುತ್ತದೆಯೋ ಅಂಥವರನ್ನು ನಾವು ಲೆಜೆಂಡ್ ಎಂದು ಕರೆಯುತ್ತೇವೆ. ಹಾಗೊಂದು ಅನುಭವ ದಕ್ಕದಿದ್ದರೆ ಅವರು ಲೆಜೆಂಡ್ ಆಗಿರುವುದಿಲ್ಲ. ರಾಜಕುಮಾರ್ ಕಾರಿನಿಂದ ಕೈಬೀಸಿದರೂ ಸಾಕಿತ್ತು, ಜನರಿಗೆ ಹೇಳಲು ಕತೆಗಳು ದೊರಕುತ್ತಿದ್ದವು. ಅವರನ್ನು ಹೊರತುಪಡಿಸಿ ಕನ್ನಡ ಚಿತ್ರರಂಗದ ಚರಿತ್ರೆಯೇ ಇಲ್ಲ’ ಎಂದು ಅವರು ಹೇಳಿದರು.

ಪತ್ರಕರ್ತೆ ಮಂಜುಳಾ ಹುಲಿಕುಂಟೆ ಮಾತನಾಡಿ, ʼರಾಜಕುಮಾರ್ ಅವರು ತಳ ಸಮುದಾಯದ ಮಂದಿ ಕೀಳರಿಮೆ ಮೀರಬೇಕಾದರೆ ಅವರಿಗೆ ಇರುವ ಶಕ್ತಿ ಪ್ರಾಮಾಣಿಕತೆ ಎಂಬ ಪ್ರಜ್ಞೆಯನ್ನು ಮೂಡಿಸಿದರು. ಅವರ ಬದುಕೇ ಒಂದು ಪಾಠವಾಗಿತ್ತುʼ ಎಂದು ಹೇಳಿದರು.

 


Share this with Friends

Related Post