ಬೆಂಗಳೂರು:ನಕಲಿ ದಾಖಲೆಯೊಂದಿಗೆ ಬಾಂಗ್ಲಾ ವಲಸಿಗರು ಕೋಗಿಲು ಬಳಿ ವಾಸವಾಗಿದ್ದವರು, ಇದು ಕಾಂಗ್ರೆಸ್ ಪ್ರಾಯೋಜಿತ ಅಕ್ರಮವಾಗಿದೆ. ಇವರಿಗೆ ಪರ್ಯಾಯವಾಗಿ ಮನೆ ಕೊಡುವುದರಿಂದ ಮಿನಿ ಪಾಕಿಸ್ತಾನ ನಿರ್ಮಾಣವಾಗಿ ಡ್ರಗ್ ಮಾಫಿಯಾ ಬೆಳೆಯಲಿದೆ ಹಾಗಾಗಿ ಇವರೆಲ್ಲ ಯಾರು ಎಂದು ಮೊದಲು ಪತ್ತೆ ಮಾಡಬೇಕು ಅಲ್ಲಿಯವರೆಗೂ ಸೂರು ಕೊಡುವುದನ್ನು ನಿಲ್ಲಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ಇಲ್ಲಿ ಮುಸ್ಲಿಮರು 20 ವರ್ಷದಿಂದ ಇದ್ದಾರೆ ಎನ್ನುತ್ತಿದ್ದಾರೆ ಆದರೆ 2023 ರ ಗೂಗಲ್ ಮ್ಯಾಪ್ ಪ್ರಕಾರ, ಇಲ್ಲಿ ನೀರು ತುಂಬಿದ್ದು ಖಾಲಿ ಜಾಗವಿತ್ತು. ಇಲ್ಲಿ ಯಾರೂ ವಾಸ ಇರಲಿಲ್ಲ. 15 ಎಕರೆಯೂ ಖಾಲಿಯೇ ಇತ್ತು. ಇತ್ತೀಚೆಗೆ ಅಲ್ಲಿ ತಾತ್ಕಾಲಿಕವಾಗಿ ಕಳೆದ ಆರು ತಿಂಗಳಿಂದ ವಾಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಮುಖಂಡ ವಾಸಿಮ್ ಎಂಬುವವನು 4-5 ಲಕ್ಷ ರೂ. ಪಡೆದು ಮನೆ ಮಾಡಿಕೊಟ್ಟಿದ್ದಾನೆ. ಇದು ಕಾಂಗ್ರೆಸ್ ಪ್ರಾಯೋಜಿತ ಅಕ್ರಮವಾಗಿದೆ. ಕಂದಾಯ ಸಚಿವ ಕೃಷ್ಣ ಭೈರೇಗೌಡ ತೆರವು ಮಾಡುತ್ತೇನೆ ಎನ್ನುತ್ತಾರೆ. ಆದರೆ ಕಸ ಹಾಕುವ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದಾರೆ. 650 ಕೋಟಿ ರೂ. ಬೆಲೆಬಾಳುವ ಜಮೀನನ್ನು ಇವರಿಗೆ ಕೊಟ್ಟಿದ್ದಾರೆ ಎಂದರು.
ಆಶ್ರಯ ಯೋಜನೆಯಡಿ ಮನೆ ನಿರ್ಮಿಸಲು ಪ್ರಕ್ರಿಯೆಗಳನ್ನು ಪಾಲಿಸಿಲ್ಲ. ಬೆಂಗಳೂರಿನಲ್ಲಿ 40 ಕಡೆ ಒತ್ತುವರಿ ತೆರವು ಮಾಡಿದ್ದು, ಎಲ್ಲರಿಗೂ ಮಾನವೀಯತೆ ಮನೆ ನಿರ್ಮಿಸಬೇಕಾಗುತ್ತದೆ. ಅಂದರೆ ಒತ್ತುವರಿ ಮಾಡುವ ಕಳ್ಳರಿಗೆ ಉತ್ತೇಜನ ನೀಡಲಾಗುತ್ತಿದೆ. ಯಾವ ಯೋಜನೆ ಅಡಿಯಲ್ಲಿ ಸಿಎಂ ಸಿದ್ದರಾಮಯ್ಯ ಮನೆ ನೀಡುತ್ತಾರೆ? ಭೂ ಒತ್ತುವರಿ ಮಾಫಿಯಾಗೆ ಪ್ರೋತ್ಸಾಹ ನೀಡಲಾಗುತ್ತಿದೆಯೇ? ಇದರಿಂದ ಮಿನಿ ಪಾಕಿಸ್ತಾನ ನಿರ್ಮಾಣವಾಗಿ ಡ್ರಗ್ ಮಾಫಿಯಾ ಬೆಳೆಯಲಿದೆ. ಇವರೆಲ್ಲ ಯಾರು ಎಂದು ಮೊದಲು ಪತ್ತೆ ಮಾಡಬೇಕಿದೆ. ಇವರು ವಲಸಿಗರು ಎಂದು ಸಿಎಂ ಹೇಳಿದ್ದಾರೆ ಎಂದರು.
ರಾಜ್ಯದಲ್ಲಿ 17.31 ಲಕ್ಷ ಜನರು ನಿವೇಶನ ರಹಿತರು ಹಾಗೂ 3 ಲಕ್ಷ ಜನರು ವಸತಿ ರಹಿತರಾಗಿದ್ದಾರೆ. ಒಟ್ಟು 37.48 ಲಕ್ಷ ಜನರು ಮನೆ ಇಲ್ಲದೆ ಅರ್ಜಿ ಹಾಕಿಕೊಂಡು ಕಾಯುತ್ತಿದ್ದಾರೆ. ಸ್ಥಳೀಯ ಬಡವರಿಗೆ ಅವಕಾಶ ಇಲ್ಲ. ಆದರೆ ಹೊರಗಿಂದ ಬಂದವರಿಗೆ ಮನೆ ಕಟ್ಟಿಕೊಡುತ್ತೇನೆ ಎನ್ನುತ್ತಾರೆ. ಕರ್ನಾಟಕದ ಇತಿಹಾಸದಲ್ಲಿ ಇಷ್ಟು ವೇಗವಾಗಿ ಮನೆ ಯೋಜನೆ ಮಂಜೂರಾಗಿರುವುದನ್ನು ನಾನು ನೋಡಿಯೇ ಇಲ್ಲ. ಕೇರಳದಲ್ಲಿ ಆನೆಯಿಂದ ಸತ್ತರೆ, ಪ್ರವಾಹದಿಂದ ಸತ್ತರೆ ಪರಿಹಾರ ನೀಡುತ್ತಾರೆ. ಕರ್ನಾಟಕವನ್ನು ಕೇರಳ ಸರ್ಕಾರಕ್ಕೆ ಅಡಮಾನ ಇಡಲಾಗಿದೆಯೇ ಎಂದು ಪ್ರಶ್ನೆ ಮಾಡಿದರು.
ಕೋಗಿಲು ಕ್ರಾಸ್ನಲ್ಲಿರುವ ಸರ್ಕಾರಿ ಜಮೀನಿನಲ್ಲಾದ ಒತ್ತುವರಿ ತೆರವು ಬಗ್ಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಮಾತನಾಡಿದ್ದಾರೆ. ಇಲ್ಲಿ ಘನತ್ಯಾಜ್ಯ ನಿರ್ವಹಣೆ ಘಟಕ ಯೋಜನೆಗೆ 100 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಬಾಂಗ್ಲಾದೇಶದಿಂದ ಬಂದ ಮುಸ್ಲಿಮರು ಇಲ್ಲಿ ವಾಸ ಮಾಡುತ್ತಿದ್ದು, ನಕಲಿ ಆಧಾರ್ ಕಾರ್ಡ್ ಪಡೆದುಕೊಂಡಿದ್ದಾರೆ. ಪಾಕಿಸ್ತಾನದ ವಕ್ತಾರರು ಈ ಬಗ್ಗೆ ಮಾತನಾಡಿ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದಿದ್ದಾರೆ. ಆ ಮಟ್ಟಿಗೆ ಸರ್ಕಾರ ಹಾಳಾಗಿಹೋಗಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಇವರು ಕನ್ನಡಿಗರೇ, ವಿದೇಶಿಯರೇ ಎಂದು ತನಿಖೆ ಮಾಡಬೇಕು. ಅಲ್ಲಿಯವರೆಗೂ ಅವರಿಗೆ ಮನೆ ನೀಡಬಾರದು ಎಂದು ಆಗ್ರಹಿಸಿದರು.

