Fri. Mar 6th, 2026

ಪಾರ್ಕಿಂಗ್ ಬದಲು ಫುಡ್ ಕೋರ್ಟ್: ಮೆಟ್ರೋ ವಿರುದ್ಧ ಲೋಕಾಯುಕ್ತಕ್ಕೆ ದೂರು

Share this with Friends

ಬೆಂಗಳೂರು: ನಮ್ಮ ಮೆಟ್ರೋದ ಮೆಟ್ರೋ ನಿಲ್ದಾಣಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕಾದ ಜಾಗದಲ್ಲಿ ಬಿಎಂಆರ್ಸಿಎಲ್ ಅಧಿಕಾರಿಗಳು ಹೋಟೆಲ್ ಉದ್ಯಮಿಗಳಿಗೆ ಅಕ್ರಮವಾಗಿ ಜಾಗ ಕೊಡುತ್ತಿದ್ದಾರೆ ಎಂದು ಆರೋಪಿಸಿ ಬಿಎಂಆರ್ಸಿಎಲ್ ವಿರುದ್ಧ ಲೋಕಾಯುಕ್ತಕ್ಕೆ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಮತ್ತು ಶಾಸಕ ಸಿ.ಕೆ. ರಾಮಮೂರ್ತಿ ದೂರು ಸಲ್ಲಿಕೆ ಮಾಡಿದ್ದಾರೆ‌

ಮೆಟ್ರೋ ಅಧಿಕಾರಿಗಳು ಫುಡ್ ಕೋರ್ಟಿಗೆ ಅಕ್ರಮವಾಗಿ ಜಾಗ ನೀಡುತ್ತಿದ್ದಾರೆ. ಇದರ ವಿರುದ್ಧ ಲೋಕಾಯುಕ್ತಕ್ಕೆ ದೂರು ಕೊಡಲಾಗಿದೆ ಎಂದು ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಮತ್ತು ಶಾಸಕ ಸಿ.ಕೆ. ರಾಮಮೂರ್ತಿ ಅವರು ತಿಳಿಸಿದ್ದಾರೆ.

ಎಂ.ಎಸ್. ಬಿಲ್ಡಿಂಗ್‍ನಲ್ಲಿರುವ ಲೋಕಾಯುಕ್ತ ಕಚೇರಿಗೆ ತೆರಳಿ ಮೆಟ್ರೋದಲ್ಲಿ ಫುಡ್ ಕೋರ್ಟ್ ಗೆ ಜಾಗ ನೀಡುತ್ತಿರುವುದರ ವಿರುದ್ಧ ದೂರು ನೀಡಿದ ಬಳಿಕ ಮಾತನಾಡಿದ ಶಾಸಕ ರಾಮಮೂರ್ತಿ, ಮೆಟ್ರೋ ನಿಲ್ದಾಣಗಳಲ್ಲಿ ಪಾರ್ಕಿಂಗ್ ಮತ್ತು ಶೌಚಾಲಯ ವ್ಯವಸ್ಥೆ ಕಲ್ಪಿಸುತ್ತಿಲ್ಲ ಆದರೆ ಮೆಟ್ರೋ ಪಾರ್ಕಿಂಗ್ ಜಾಗದಲ್ಲಿ ಹೋಟೆಲ್ ಉದ್ಯಮಿಗಳಿಗೆ ಜಾಗ ಕೊಡುತ್ತಿದ್ದಾರೆ. ಇದು ಸರಿಯಲ್ಲ ಎಂದರು.

ದುಡ್ಡಿನ ಆಸೆಗೆ ಹೀಗೆ ಮಾಡುತ್ತಿದ್ದಾರೆ. ವ್ಯವಸ್ಥಾಪಕ ನಿರ್ದೇಶಕರಿಗೆ (ಎಂ.ಡಿ) ಮನವಿ ಮಾಡಿದರೂ ಪ್ರಯೋಜನ ಆಗಿಲ್ಲ. ಗ್ಯಾಸ್ ಸಮಸ್ಯೆಯಿಂದ ಅನಾಹುತ ಆಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು. ಮೆಟ್ರೋ ಎಂ.ಡಿ, ಮುಖ್ಯ ಎಂಜಿನಿಯರ್, ಜಿಬಿಎ ಚೀಫ್ ಕಮಿಷನರ್ ಮೊದಲಾದವರ ವಿರುದ್ಧ ದೂರು ಕೊಟ್ಟಿದ್ದೇವೆ ಎಂದರು.

ಬಿಡಿಎಯಲ್ಲಿ ಹಸಿರು ವಲಯ ಎಂದಿದೆಯೋ ಅಲ್ಲಿ ಅವಕಾಶ ಕೊಡದಿರಲು ಮನವಿ ಮಾಡಿದ್ದೇವೆ. ಆರ್.ವಿ.ರಸ್ತೆಯ 4 ಕಿಮೀ ಅನ್ನು ಹಸಿರು ವಲಯ ಎಂದು ತಿಳಿಸಿದೆ. ಆ ಹಸಿರು ಜಾಗದಲ್ಲಿ ಯಾವುದೇ ವಾಣಿಜ್ಯ ಉದ್ದೇಶಕ್ಕೆ ಅವಕಾಶವಿಲ್ಲ. ಮೆಟ್ರೋದವರು ನಿಲ್ದಾಣ, ಪಾರ್ಕಿಂಗ್ ಮಾಡಲಿ; ಆದರೆ, ಈ ರೀತಿ ಕೊಟ್ಟದ್ದು ಅಕ್ಷಮ್ಯ ಅಪರಾಧ ಎಂದು ಟೀಕಿಸಿದರು.

ನಿನ್ನೆ ಪ್ರತಿಭಟನೆ ಮಾಡಿದ್ದೇವೆ. ಸಮನ್ವಯ ವೇದಿಕೆಯ ಅಧ್ಯಕ್ಷ ವೈ.ಕೆ.ಮುದ್ದುಕೃಷ್ಣ ಅವರು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ದಾಖಲಿಸುತ್ತಿದ್ದಾರೆ ಎಂದು ವಿವರಿಸಿದರು.

ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಒಬಿಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಮತ್ತು ಸಮನ್ವಯ ವೇದಿಕೆಯ ಅಧ್ಯಕ್ಷ ವೈ.ಕೆ.ಮುದ್ದುಕೃಷ್ಣ, ಪ್ರಮುಖರು ಇದ್ದರು.

 


Share this with Friends

Related Post