ಬೆಂಗಳೂರು:ಆರೋಗ್ಯ ಕ್ಷೇತ್ರದದಲ್ಲಿ ಎಐ(AI)ತಂತ್ರಜ್ಞಾನದ ಬಳಕೆಗೆ ಹೆಚ್ಚಿನ ಒತ್ತು ನೀಡುವುದು ಅಗತ್ಯವಾಗಿದ್ದು, ಕರ್ನಾಟಕ ಸರ್ಕಾರ ಕೂಡ ಎಐ(AI)ತಂತ್ರಜ್ಞಾನ ಬಳಸಿಕೊಂಡು ಔಷಧಿ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಬೇಕಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಕನಕಪುರ ರಸ್ತೆ, ಹಾರೋಹಳ್ಳಿಯ ದಯಾನಂದ ಸಾಗರ ವಿಶ್ವವಿದ್ಯಾಲಯದಲ್ಲಿ ನಡೆದ ಐಸಿಟಿಹೆಚ್ಎಎಸ್( ICTHAS)ನ ಅಂತರರಾಷ್ಟ್ರೀಯ ಸಮ್ಮೇಳನ – 2025 ರಲ್ಲಿ ಭಾಗವಹಿಸಿ, ವಿದ್ಯಾರ್ಥಿ-ಯುವಜನರನ್ನು ಉದ್ದೇಶಿಸಿ ಮಾತನಾಡಿದ ಅವರು,ಆರೋಗ್ಯ ಕ್ಷೇತ್ರದದಲ್ಲಿ ಎಐ ತಂತ್ರಜ್ಞಾನ ಬಳಸಿಕೊಂಡು ಔಷಧಿ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಬೇಕಿದೆ.ಎಐ ತಂತ್ರಜ್ಞಾನವನ್ನು ಸಾಮಾನ್ಯ ಜನರಿಗೆ, ವಿಶೇಷವಾಗಿ ಗ್ರಾಮೀಣ ಪ್ರದೇಶದ ಜನರಿಗೆ ನೆರವಾಗುವಂತೆ ಬಳಸಿಕೊಳ್ಳಲು ರಾಜಗಯದ ಆರೋಗ್ಯ ಇಲಾಖೆಯಿಂದ ಯೋಚಿಸುತ್ತಿದ್ದೇವೆ ಎಂದರು.
ನಮ್ಮಲ್ಲಿ ಪುನೀತ್ ರಾಜ್ ಕುಮಾರ್ ಹೃದಯ ಜ್ಯೋತಿ ಯೋಜನೆ ಇದೆ. ಆದರೆ, ಯಾವುದೇ ಗ್ರಾಮೀಣ, ತಾಲೂಕು ಆಸ್ಪತ್ರೆ ಅಥವಾ ಸಿಎಚ್ಸಿಯಲ್ಲಿ ಇಸಿಜಿ ಸೇರಿದಂತೆ ಹೆಚ್ಚಿನ ಸೌಲಭ್ಯಗಳು ಲಭ್ಯವಿಲ್ಲ ಹಾಗಾಗಿ ಈ ಯೋಜನೆಯಡಿಯಲ್ಲಿ ಬರುವ 85 ಸೌಲಭ್ಯಗಳನ್ನು, ರಾಜ್ಯದ ಎಲ್ಲ ತಾಲೂಕುಗಳಿಗೆ ವಿಸ್ತರಿಸಲು ತೀರ್ಮಾನಿಸಲಾಗಿದೆ ಎಂದರು.
ಇಸಿಜಿ ಸೇರಿದಂತೆ ಹೃದಯ ಸಂಬಂಧಿತ ತಪಾಸಣೆಗಳನ್ನು ಮಾಡಲು ಎಐ ಆಧಾರಿತ ಸಾಫ್ಟ್ವೇರ್ ಬಳಸಿಕೊಳ್ಳಲು ಹೃದ್ರೋಗ ತಜ್ಞರಿಗೆ ಶಿಫಾರಸು ಮಾಡಿದ್ದು, ಹೃದಯಾಘಾತದ ಯಾವುದೇ ಸೂಚನೆಯಿದ್ದರೆ ಅಂತಹ ಪ್ರಕರಣವನ್ನು ತಕ್ಷಣವೇ ತಾಲೂಕು ಆಸ್ಪತ್ರೆಗಳಿಗೆ ಶಿಫ್ಟ್ ಮಾಡಲಾಗುತ್ತದೆ. ಅಲ್ಲದೆ, ತುರ್ತು ಸಂದರ್ಭದಲ್ಲಿ ಹೃದಯಾಘಾತ ತಡೆಯುವ ಚುಚ್ಚುಮದ್ದನ್ನು ನೀಡಲು ಸಾಧ್ಯವಾಗುತ್ತದೆ. ಹಾಗಾಗಿ, ಇಂದಿನ ಬದಲಾದ ಕಾಲಮಾನದಲ್ಲಿ ಎಐ ತಂತ್ರಜ್ಞಾನ ಬಳಕೆ ಅಗತ್ಯವೂ ಅರ್ಥಪೂರ್ಣವೂ ಆಗಿದ್ದು, ಅದನ್ನು ಆರೋಗ್ಯ ಕ್ಷೇತ್ರದಲ್ಲಿ ಸಮರ್ಪಕವಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬುದನ್ನು ವಿವರಿಸಿ ಎಲ್ಲ ಕ್ಷೇತ್ರಗಳಲ್ಲಿ ಎಐ ತಂತ್ರಜ್ಞಾನ ಬಳಕೆಗೆ ಒತ್ತು ನೀಡಬೇಕೆಂದು ಕರೆ ನೀಡಿದರು.

