Fri. Mar 6th, 2026

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ ವಾಪಸ್‌ ಪಡೆಯುವಂತೆ ಜೆಡಿಎಸ್‌ ಒತ್ತಾಯ

Share this with Friends

ಬೆಂಗಳೂರು:ರಾಜ್ಯ ಸರಕಾರವು ಸಂವಿಧಾನಕ್ಕೆ ವಿರೋಧವಾಗಿ ಜಿಬಿಎ ಕಾಯ್ದೆ ತಿದ್ದುಪಡಿ ಮಾಡಲು ವಿಧೇಯಕ ಮಂಡನೆ ಮಾಡಿರುವುದು ಖಂಡನೀಯವಾಗಿದ್ದು,ಈ ಕೂಡಲೇ ವಿಧೇಯಕವನ್ನು ವಾಪಸ್ ಪಡೆಯಬೇಕು ಎಂದು ಜೆಡಿಎಸ್‌ ನಗರ ಘಟಕದ ಅಧ್ಯಕ್ಷ ಹೆಚ್.ಎಂ. ರಮೇಶಗೌಡ ರಾಜ್ಯ ಸರಕಾರಕ್ಕೆ ಒತ್ತಾಯಿಸಿದರು.

ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು;ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡುವ ಸಂವಿಧಾನಕ್ಕೆ ವಿರೋಧಿಯಾಗಿದೆ.  ಕಾಂಗ್ರೆಸ್‌ ಪಕ್ಷಕ್ಕೆ ರಾಜಕೀಯ ಲಾಭ ಆಗುವ ರೀತಿಯಲ್ಲಿ ವಾರ್ಡ್‌ ವಿಂಗಡಣೆ ಮಾಡಿದೆ. ಈ ವಿಂಗಡಣೆಯು ಸಾಕಷ್ಟು ನ್ಯೂನತೆಗಳಿಂದ ಕೂಡಿದೆ. ಬೆಂಗಳೂರು ಅಭಿವೃದ್ಧಿಗೆ ಮಾರಕವಾಗಿರುತ್ತದೆ. ಈ ವಿಧೇಯಕವನ್ನು ಹಿಂಪಡೆಯಬೇಕೆಂದು ಅವರು ಒತ್ತಾಯಿಸಿದರು.

ರಾಜ್ಯ ಸರಕಾರವು ಸಂವಿಧಾನಕ್ಕೆ ವಿರೋಧವಾಗಿ ಜಿಬಿಎ ಕಾಯ್ದೆ ತಿದ್ದುಪಡಿ ಮಾಡಲು ವಿಧೇಯಕ ಮಂಡನೆ ಮಾಡಿರುವುದು ಖಂಡನೀಯ. ಕೊನೇ ಹಂತದಲ್ಲಿ ಬಿಲ್ ಮಂಡನೆ ಮಾಡಿ ಅಂಗೀಕಾರ ಪಡೆಯುವ ಹುನ್ನಾರವನ್ನು ಸರಕಾರ ನಡೆಸಿದೆ.ಚುನಾವಣೆ ನಡೆಸಲು ಹೊಸ ವಾರ್ಡ್ ಗಳಿಗೆ ಕಾರ್ಪೋರೇಟರ್ ಗಳನ್ನ ನಾಮನಿರ್ದೇಶನ ಮಾಡಲು ಸಂವಿಧಾನವು ಸರಕಾರಕ್ಕೆ ಅವಕಾಶ ನಿಡುವುದಿಲ್ಲ. 74ನೇ ತಿದ್ದುಪಡಿ ಕಾಯ್ದೆ 1992ರಿಂದ ಸ್ಥಾಪಿಸಲ್ಪಟ್ಟ ಪುರಸಭೆಯನ್ನು ನಿಯಂತ್ರಿಸುವ ಮೂಲಭೂತ ತತ್ವವೆಂದರೆ ಎಲ್ಲಾ ವಾರ್ಡ್ ಪ್ರತಿನಿಧಿಗಳಿಗೆ ನೇರ ಚುನಾವಣೆಗೆ ಸ್ಪರ್ಧಿಸುವ ಅವಕಾಶವಿರುತ್ತದೆ ಎಂದು ಅವರು ತಿಳಿಸಿದ್ದಾರೆ.

ಮೂಲ ಸಾಂವಿಧಾನಿಕ ಆದೇಶ (243R) ಕಾಯ್ದೆ:

ಪುರಸಭೆಯ ಎಲ್ಲಾ ಸ್ಥಾನವನ್ನು ಪ್ರದೇಶದ ಪ್ರಾದೇಶಿಕ ಕ್ಷೇತ್ರಗಳಿಂದ ನೇರ ಚುನಾವಣೆಯ ಮೂಲಕ ಆಯ್ಕೆ ಮಾಡಿದ ವ್ಯಕ್ತಿಗಳಿಂದ ತುಂಬಿಸಲಾಗುತ್ತದೆ. ಈ ಉದ್ದೇಶಕ್ಕಾಗಿ ವಾರ್ಡ್ ಎಂದು ಕರೆಯಲಾಗುವುದು. ಇದು ಪ್ರತಿ ವಾರ್ಡ್ʼಗೆ ನೇರ ಚುನಾವಣೆಗೆ ಸಂವಿಧಾನದ ಆಧಾರದ ಮೇಲೆ ವಿಂಗಡಣೆ ಇದೆ ಎಂದು ಹೇಳಿದೆ.ಇನ್ನು 243R(2) ಕಾಯ್ದೆ ಪ್ರಕಾರ ರಾಜ್ಯ ಶಾಸಕಾಂಗವು ಕಾನೂನಿನ ಮೂಲಕ ಪ್ರಾತಿನಿಧ್ಯವನ್ನು ಒದಗಿಸಲು ಅನುಮತಿಸುತ್ತದೆ. ಹಾಗೆಯೇ ನಾಮನಿರ್ದೇಶಿತ ಸದಸ್ಯರು ಪುರಸಭೆಯ ಸಭೆಯಲ್ಲಿ ಮತ ಚಲಾಯಿಸುವ ಹಕ್ಕನ್ನು ಹೊಂದಿರುವುದಿಲ್ಲ ಎಂದು 243R ಕಾಯ್ದೆಯ ನಿಬಂಧನೆಯು ಸ್ಪಷ್ಟವಾಗಿ ಹೇಳುತ್ತದೆ ಎಂದರು.

ಒಟ್ಟಾರೆ ಸಂವಿಧಾನದ ವಿರುದ್ಧವಾಗಿ ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ ಮಂಡನೆ ಮಾಡಿದ್ದಾರೆ. 20 ಸಾವಿರ ಜನಸಂಖ್ಯೆಗೆ ಒಬ್ಬರಂತೆ ನಾಮನಿರ್ದೇಶಿತ ಸದಸ್ಯರನ್ನು ನೇಮಕ ಮಾಡಲು ರಾಜ್ಯ ಸರ್ಕಾರ ವಿಧಾನ ಮಂಡಲದಲ್ಲಿ ಮಂಡನೆಯಾಗಿರುವ ಬಿಲ್  ಪ್ರಜಾಪ್ರಭುತ್ವದ ಕಗ್ಗೊಲೆ. ಈ ಕೂಡಲೇ ಬಿಲ್ಲನ್ನು ವಾಪಸ್ ಪಡೆಯಬೇಕು ಎಂದು ರಮೇಶಗೌಡ ಅವರು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

 


Share this with Friends

Related Post