ಬೆಂಗಳೂರು: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಇರಾನ್ ಮತ್ತು ಇಸ್ರೇಲ್ ನಡುವೆ ಯುದ್ಧದ ಕಾರ್ಮೋಡ ಕವಿದಿರುವ ಹಿನ್ನೆಲೆಯಲ್ಲಿ ವಿಮಾನ ಸಂಚಾರ ಅಸ್ತವ್ಯಸ್ತಗೊಂಡಿದ್ದು, ದುಬೈನಲ್ಲಿ ನೂರಾರು ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ನಡುವೆ, ಪುಲಕೇಶಿನಗರದ ಕಾಂಗ್ರೆಸ್ ಶಾಸಕ ಎ.ಸಿ. ಶ್ರೀನಿವಾಸ್ ಅವರು ಪರ್ಯಾಯ ಮಾರ್ಗದ ಮೂಲಕ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದಾರೆ.
ಮಸ್ಕತ್ ಮಾರ್ಗವಾಗಿ ಶಾಸಕರ ಆಗಮನ:
ಆರು ದಿನಗಳ ಹಿಂದೆ ಖಾಸಗಿ ಪ್ರವಾಸಕ್ಕಾಗಿ ದುಬೈಗೆ ತೆರಳಿದ್ದ ಶಾಸಕ ಎ.ಸಿ. ಶ್ರೀನಿವಾಸ್, ವಿಮಾನಗಳ ರದ್ದತಿಯಿಂದಾಗಿ ಅಲ್ಲಿಯೇ ಉಳಿದಿದ್ದರು. ಆದರೆ, ಸಮಯಪ್ರಜ್ಞೆ ಮೆರೆದ ಅವರು ದುಬೈನಿಂದ ರಸ್ತೆ ಮಾರ್ಗದ ಮೂಲಕ 450 ಕಿಲೋಮೀಟರ್ ಕ್ರಮಿಸಿ ಒಮನ್ ನ ಮಸ್ಕತ್ಗೆ ತಲುಪಿ, ಅಲ್ಲಿಂದ ವಿಮಾನದ ಮೂಲಕ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭಾನುವಾರ ತಡರಾತ್ರಿ ಬಂದಿಳಿದರು.
ಶಾಸಕರ ಮೊದಲ ಪ್ರತಿಕ್ರಿಯೆ:
ತಾಯ್ನಾಡಿಗೆ ಬಂದಿಳಿದ ಬಳಿಕ ಮಾಧ್ಯಮಗಳೊಂದಿಗೆ ತಮ್ಮ ಅನುಭವ ಹಂಚಿಕೊಂಡ ಶಾಸಕ ಎ.ಸಿ. ಶ್ರೀನಿವಾಸ್, “ದುಬೈನಲ್ಲಿ ವಿಮಾನಗಳು ರದ್ದಾದ ಕಾರಣ ಪರಿಸ್ಥಿತಿ ತೀರಾ ಗಂಭೀರವಾಗಿತ್ತು. ಪ್ರವಾಸಿಗರು ತಾಯ್ನಾಡಿಗೆ ಮರಳಲಾಗದೆ ದಿಕ್ಕುತೋಚದಂತಾಗಿದ್ದರು. ನಾನು ಅಲ್ಲಿಯೇ ಉಳಿಯುವ ಬದಲು ರಸ್ತೆ ಮಾರ್ಗದ ಮೂಲಕ ಮಸ್ಕತ್ಗೆ ತೆರಳಲು ನಿರ್ಧರಿಸಿದೆ. ಅಲ್ಲಿಂದ ವಿಮಾನ ಲಭ್ಯವಿದ್ದ ಕಾರಣ ಬೆಂಗಳೂರಿಗೆ ಬರಲು ಸಾಧ್ಯವಾಯಿತು” ಎಂದರು.
ಬಾಕಿ ಕನ್ನಡಿಗರ ಬಗ್ಗೆ ಆತಂಕ:
ತಮ್ಮ ಪ್ರವಾಸದ ಬಗ್ಗೆ ಮಾಹಿತಿ ನೀಡುತ್ತಾ, “ನಾನು ಸುರಕ್ಷಿತವಾಗಿ ಬಂದಿದ್ದೇನೆ, ಆದರೆ ಅಲ್ಲಿನ ವಿಮಾನ ನಿಲ್ದಾಣಗಳಲ್ಲಿ ನೂರಾರು ಕನ್ನಡಿಗರು ಇನ್ನೂ ಪರದಾಡುತ್ತಿದ್ದಾರೆ. ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಅವರು ತಮ್ಮ ಕುಟುಂಬದೊಂದಿಗೆ ವಿಮಾನ ನಿಲ್ದಾಣದಲ್ಲೇ ಕಾಲ ಕಳೆಯುತ್ತಿದ್ದಾರೆ. ಡ್ರೋನ್ ಪ್ರತಾಪ್ ಸೇರಿದಂತೆ ಅನೇಕರು ಸೂಕ್ತ ವ್ಯವಸ್ಥೆ ಇಲ್ಲದೆ ಸಿಲುಕಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ಇವರ ರಕ್ಷಣೆಗೆ ಧಾವಿಸಬೇಕು” ಎಂದು ಮನವಿ ಮಾಡಿದರು.
ನಿಲ್ದಾಣದಲ್ಲೇ ಸಿಲುಕಿದ ಗಣ್ಯರು:
ಒಂದೆಡೆ ಶಾಸಕರು ವಾಪಸಾಗಿದ್ದರೆ, ಮತ್ತೊಂದೆಡೆ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಅವರು ತಮ್ಮ ಕುಟುಂಬದೊಂದಿಗೆ ದುಬೈ ವಿಮಾನ ನಿಲ್ದಾಣದಲ್ಲಿಯೇ ಸಿಲುಕಿಕೊಂಡಿದ್ದಾರೆ. ಅವರೊಂದಿಗೆ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್ ಸೇರಿದಂತೆ ಸುಮಾರು 100ಕ್ಕೂ ಹೆಚ್ಚು ಕನ್ನಡಿಗರು ಅಬುಧಾಬಿ ಮತ್ತು ದುಬೈ ಏರ್ಪೋರ್ಟ್ಗಳಲ್ಲಿ ಆಹಾರ ಮತ್ತು ಸರಿಯಾದ ವಿಶ್ರಾಂತಿ ಇಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಸರ್ಕಾರದ ನೆರವಿಗೆ ಮನವಿ:
ಯುದ್ಧದ ಆತಂಕದಿಂದಾಗಿ ಅಂತರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳು ವಿಮಾನ ಸಂಚಾರವನ್ನು ಸ್ಥಗಿತಗೊಳಿಸಿವೆ. ಇದರಿಂದಾಗಿ ಪ್ರವಾಸಿಗರು ಮತ್ತು ಉದ್ಯೋಗದ ನಿಮಿತ್ತ ತೆರಳಿದ್ದ ಕನ್ನಡಿಗರು ಕಂಗೆಟ್ಟಿದ್ದಾರೆ. ಸಿಲುಕಿಕೊಂಡಿರುವ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ರಾಜ್ಯ ಸರ್ಕಾರ ಮತ್ತು ವಿದೇಶಾಂಗ ಇಲಾಖೆ ತಕ್ಷಣವೇ ಮಧ್ಯಪ್ರವೇಶಿಸಬೇಕು ಎಂದು ಸಂಕಷ್ಟಕ್ಕೀಡಾದವರ ಕುಟುಂಬಸ್ಥರು ಒತ್ತಾಯಿಸಿದ್ದಾರೆ.

