Fri. Mar 6th, 2026

ನಿರ್ಲಕ್ಷಿತ ಕಟ್ಟಡ ಈಗ ಜ್ಞಾನದ ದೇಗುಲ: ಹಾರೋಹಳ್ಳಿ ಪಂಚಾಯತ್ ಮಾದರಿ ಕಾರ್ಯಕ್ಕೆ ಸಚಿವರ ಮೆಚ್ಚುಗೆ

Share this with Friends

ಮೈಸೂರು: ಸ್ಥಳೀಯ ಆಡಳಿತದ ಇಚ್ಛಾಶಕ್ತಿ ಹಾಗೂ ಅಧಿಕಾರಿಗಳ ದೂರದೃಷ್ಟಿ ಒಂದಾದರೆ ಎಂತಹ ಬದಲಾವಣೆ ತರಬಹುದು ಎಂಬುದಕ್ಕೆ ಮೈಸೂರು ತಾಲೂಕಿನ ಹಾರೋಹಳ್ಳಿ ಗ್ರಾಮ ಪಂಚಾಯತ್ ಈಗ ಉತ್ತಮ ಉದಾಹರಣೆಯಾಗಿದೆ. ಇಲ್ಲಿನ ಹಾಳಾಗುತ್ತಿದ್ದ ಸಮುದಾಯ ಭವನವನ್ನು ಸುಸಜ್ಜಿತ ‘ಅರಿವು ಕೇಂದ್ರ’ವನ್ನಾಗಿ ಪರಿವರ್ತಿಸಿರುವ ಕ್ರಮವನ್ನು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಬದಲಾದ ಚಿತ್ರಣ:

ಒಂದು ಕಾಲದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಅಂಬೇಡ್ಕರ್ ಸಮುದಾಯ ಭವನವು ಈಗ ಗ್ರಾಮದ ಯುವಶಕ್ತಿ ಹಾಗೂ ರೈತರಿಗೆ ದಾರಿದೀಪವಾಗಿದೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಕೆ.ಎಸ್. ಗಣೇಶ್ ಹಾಗೂ ಅಧ್ಯಕ್ಷ ರೇವಣ್ಣ ಅವರ ನೇತೃತ್ವದ ತಂಡವು ಈ ಕೆಡವಬೇಕಿದ್ದ ಕಟ್ಟಡಕ್ಕೆ ಹೊಸ ರೂಪ ನೀಡಿದೆ.

ಏನೇನಿದೆ ಈ ಕೇಂದ್ರದಲ್ಲಿ?

ಕೇವಲ ಗ್ರಂಥಾಲಯವಾಗಿ ಸೀಮಿತವಾಗದೆ, ಈ ಕೇಂದ್ರವು ಬಹುಮುಖಿ ಜ್ಞಾನ ಕೇಂದ್ರವಾಗಿ ಹೊರಹೊಮ್ಮಿದೆ. ರೈತರಿಗೆ ಕೃಷಿ ತಂತ್ರಜ್ಞಾನದ ಮಾಹಿತಿ ನೀಡಲು ವಿಶೇಷ ವಿಭಾಗ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ಗ್ರಾಮೀಣ ಅಭ್ಯರ್ಥಿಗಳಿಗೆ ಅಧ್ಯಯನ ಕೇಂದ್ರ ಹಾಗೂ ಮಹಿಳೆಯರು ಮತ್ತು ಮಕ್ಕಳಿಗಾಗಿ ಪ್ರತ್ಯೇಕ ಸೃಜನಶೀಲ ವಿಭಾಗಗಳನ್ನು ಇಲ್ಲಿ ಸೃಜಿಸಲಾಗಿದೆ.

ಸಚಿವರ ಅಭಿನಂದನೆ:

ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಂಡಿರುವ ಸಚಿವ ಪ್ರಿಯಾಂಕ್ ಖರ್ಗೆ, “ಸಂಪನ್ಮೂಲಗಳ ಸದ್ಬಳಕೆ ಮತ್ತು ಪರಿವರ್ತನೆಯ ಹಂಬಲವಿದ್ದರೆ ಹಳ್ಳಿಯಿಂದ ದಿಲ್ಲಿಯವರೆಗೂ ಮಾದರಿ ಆಡಳಿತ ನೀಡಬಹುದು” ಎಂದು ತಿಳಿಸಿದ್ದಾರೆ. ಹಾರೋಹಳ್ಳಿ ಪಂಚಾಯತ್‌ನ ಈ ಕ್ರಿಯಾಶೀಲತೆಯು ರಾಜ್ಯದ ಇತರ ಸ್ಥಳೀಯ ಸಂಸ್ಥೆಗಳಿಗೆ ಪ್ರೇರಣೆಯಾಗಿದೆ ಎಂದಿದ್ದಾರೆ.


Share this with Friends

Related Post