ಬೆಂಗಳೂರು:ಹಣ್ಣುಗಳ ರಾಜ ಮಾವು, ಕಾಳುಗಳ ರಾಜ ಅವರೆಕಾಯಿ,ಬೆಂಗಳೂರಿನ ಸುತ್ತಮುತ್ತಲ ಭಾಗದಲ್ಲಿ ಮಾತ್ರ ಇದನ್ನು ಬೆಳೆಯಲಾಗುತ್ತದೆ. ಹೀಗಾಗಿ ಇದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಬೇಕು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆಕರ್ಷಣೆಯಾಗಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ವಾಸವಿ ಸಂಸ್ಥೆಯವರು ಆಯೋಜಿಸಿರುವ ಅವರೆಬೇಳೆ ಮೇಳ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,“ಅವರೆ ಮೇಳದಲ್ಲಿ 5-6 ಲಕ್ಷ ಜನ ಭಾಗವಹಿಸುತ್ತಾರೆ. ಐಸ್ ಕ್ರೀಮ್ ನಿಂದ ಹಿಡಿದು ದೋಸೆ, ಚಿತ್ರಾನ್ನಾ, ಹೀಗೆ ಬಗೆಬಗೆಯ ಪದಾರ್ಥ ಮಾಡುತ್ತಿದ್ದಾರೆ. ನಾನು ಇಲ್ಲಿ ಪಾನಿಪುರಿ ರುಚಿ ಸವಿದೆ. ಕಳೆದ ವರ್ಷ ಬಂದಾಗ ದೋಸೆ ಸವಿದಿದ್ದೆ. ನನಗೂ ಅವರೆಕಾಳು ಎಂದರೆ ಬಹಳ ಇಷ್ಟ. ನನಗೆ ಅವರೆಕಾಳು ಬಹಳ ಇಷ್ಟವೆಂದು ನನ್ನ ಸ್ನೇಹಿತ ಸಿಹಿಕಹಿ ಚಂದ್ರು ಕಾರ್ಯಕ್ರಮವೊಂದರಲ್ಲಿ ಅವರೆಕಾಳು ಉಪ್ಪಿಟ್ಟು ಮಾಡಿಕೊಟ್ಟಿದ್ದ. ಬೆಂಗಳೂರಿನ ನಾಗರೀಕರಿಗೆ, ರೈತರಿಗೆ ಅನುಕೂಲವಾಗಬೇಕು. ಉದ್ಯೋಗ ಸೃಷ್ಟಿಯಾಗಬೇಕು ನಮ್ಮ ಸಂಸ್ಕೃತಿ ಇತಿಹಾಸ, ನಮ್ಮ ರೈತರ ಬೆಳೆಗೆ ಉತ್ತಮ ಬೆಳೆ ಸಿಗಬೇಕು. ಬೆಂಗಳೂರಿನ ಸುತ್ತಮುತ್ತಲ ಭಾಗದಲ್ಲಿ ಮಾತ್ರ ಇದನ್ನು ಬೆಳೆಯಲಾಗುತ್ತದೆ. ಹೀಗಾಗಿ ಇದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಬೇಕು” ಎಂದರು.
ವಾಸವಿ ಸಂಸ್ಥೆಯವರು ಬಸವನಗುಡಿಯಲ್ಲಿ ಅವರೆಕಾಳು ಮೇಳವನ್ನು ಆಯೋಜಿಸಿ ಅವರೇ ಕಾಳಿನಿಂದ ನೂರಾರು ಪದಾರ್ಥ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಹಣ್ಣುಗಳ ರಾಜ ಮಾವು, ಕಾಳುಗಳ ರಾಜ ಅವರೆಕಾಯಿ. ಮಾಗಡಿ ಅವರೆಕಾಯಿ ತನ್ನ ಸೊಗಡಿಗೆ ಬಹಳ ಪ್ರಸಿದ್ಧಿ. ನಾನು ಜಿಕೆವಿಕೆಯಲ್ಲಿ ನೋಡಿದೆ. ಅಲ್ಲಿ ಅವರೆಕಾಯಿ ಬಿಡಿಸುವ ಯಂತ್ರವನ್ನು ಕೃಷಿ ವಿವಿಯವರು ಕಂಡು ಹಿಡಿದಿದ್ದಾರೆ ಎಂದು ತಿಳಿಸಿದರು.
“ಕರ್ನಾಟಕದ ಈ ಖಾದ್ಯಗಳು, ರುಚಿ ಎಲ್ಲರಿಗೂ ತಲುಪುವಂತಾಗಬೇಕು. ರಾಜ್ಯದ ರೈತರಿಗೆ ಒಳ್ಳೆಯದಾಗಬೇಕು. ವಾಸವಿ ಸಂಸ್ಥೆಯವರು 26 ವರ್ಷಗಳಿಂದ ಈ ಕಾರ್ಯಕ್ರಮ ಮಾಡಿಕೊಂಡು ಬಂದಿದ್ದಾರೆ. ನಾಗರೀಕರು ಬಂದು ಇಲ್ಲಿನ ರುಚಿ ಸವಿಯಲಿ. 2026ರ ಹೊಸ ವರ್ಷ ನಿಮ್ಮ ಬದುಕಿನಲ್ಲಿ ಹೆಚ್ಚಿನ ಶಕ್ತಿ ತುಂಬಲಿ” ಎಂದು ಶುಭ ಹಾರೈಸಿದರು.

