Fri. Mar 6th, 2026

ಪ್ರಿಯಾಂಕ್ ಖರ್ಗೆ ಇರಲಾರದೆ ಇರುವೆ ಬಿಟ್ಟುಕೊಂಡು ಕಚ್ಚಿಸಿಕೊಂಡು ಓಡಾಡುತ್ತಿದ್ದಾರೆ: ಛಲವಾದಿ ನಾರಾಯಣಸ್ವಾಮಿ

Share this with Friends

ಬೆಂಗಳೂರು:ಆರ್.ಎಸ್.ಎಸ್ ವಿಚಾರದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಇರಲಾರದೆ ಇರುವೆ ಬಿಟ್ಟುಕೊಂಡು ಈಗ ಕಚ್ಚಿಸಿಕೊಂಡು ಓಡಾಡುತ್ತಿದ್ದಾರೆ; ಅವರಿಗೆ ಇರುವೆ ಬಹಳ ಕಚ್ಚಿದೆ ಎಂದು ಪರಿಷತ್ ಪ್ರತಿಪಕ್ಷ ನಾಯಕ  ಛಲವಾದಿ ನಾರಾಯಣಸ್ವಾಮಿ  ವ್ಯಂಗ್ಯವಾಡಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ತಮ್ಮ ಕ್ಷೇತ್ರ ಚಿತ್ತಾಪುರದಲ್ಲಿ ಪಥ ಸಂಚಲನ ಆಗಲು ಬಿಡುವುದಿಲ್ಲ ಎಂದು ಹೇಳಿದ್ದರು. ಆದರೆ, ಇವತ್ತು ಪಥ ಸಂಚಲನ ನಡೆದಿದೆ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಬೇಕು.ನನ್ನ ಕೈಯಲ್ಲಿ ಅಧಿಕಾರವಿದ್ದರೆ ಇವತ್ತೇ ಆರೆಸ್ಸೆಸ್ ನಿಷೇಧಿಸುವುದಾಗಿ ಪ್ರಿಯಾಂಕ್ ಹೇಳಿದ್ದರು. ಅದು ಅವರಿಗೆ ಈ ಜನ್ಮದಲ್ಲಿ ಆಗಲಾರದ ವಿಷಯ. ನೀವು ಅನುಮತಿ ಕೊಟ್ಟಿದ್ದಾಗಿ ಹೇಳಿದ್ದೀರಿ; ಅದು ನಿಮ್ಮ ಅನುಮತಿಯಲ್ಲ; ಅದು ನ್ಯಾಯಾಲಯದಿಂದ ಸಿಕ್ಕಿದೆ.ಸರಣಿ ಸುಳ್ಳು ಹೇಳುವ ಸುಳ್ಳುಗಾರ ಇದ್ದರೆ ಅದು ಪ್ರಿಯಾಂಕ್ ಖರ್ಗೆ. ಎಂದರು.

ಬಾಂಬ್ ಸ್ಫೋಟದ ವಿಷಯವನ್ನು ಧರ್ಮ- ಜಾತಿಗೆ ಹೋಲಿಕೆ ಮಾಡಬಾರದೆಂದು ಪದೇಪದೇ ಹೇಳುತ್ತೇವೆ. ಆದರೆ ಆಗಿದ್ದೇನು? ಸಂಸತ್ ಮೇಲೆ ದಾಳಿ, ಪುಲ್ವಾಮಾ ದಾಳಿ- ಒಂದು ಧರ್ಮದವರಿಂದ ನಡೆದಿದೆ. ದಾಳಿಯ ಹಿನ್ನೆಲೆ ಗಮನಿಸಿದರೆ ಅದು ಒಂದು ಧರ್ಮದವರೇ ಆಗಿದ್ದಾರೆ ಯಾಕೆ? ಅವರೆಲ್ಲರನ್ನೂ ನಾವು ಹುತಾತ್ಮರು ಎಂದು ಕರೆಯಲು ಸಾಧ್ಯವೇ? ದೇಶಕ್ಕೆ ಆಪತ್ತು ಬಂದಾಗ ಅದನ್ನು ವಿರೋಧಿಸಿ ಹೋರಾಟ ಮಾಡಿ ಬಲಿದಾನ ಆದರೆ ಅದನ್ನು ಹುತಾತ್ಮರೆಂದು ಗುರುತಿಸಬಹುದು. ಇಲ್ಲಿ ಸ್ವಾರ್ಥ ಸಾಧನೆಯ ಚಟುವಟಿಕೆಯಲ್ಲಿ ಬಲಿಯಾಗಿದ್ದಾರೆ ಎಂದರು.

ಕ್ರಿಮಿನಲ್ ಚಟುವಟಿಕೆ ನಡೆದಾಗ ತೆಪ್ಪಗಿರುವುದೇಕೆ?

ನಮ್ಮ ಮೆಟ್ರೋಗೆ ಬಾಂಬ್ ಬೆದರಿಕೆ ಸುಳ್ಳಿರಬಹುದು; ನಿಜ ಇರಲೂ ಬಹುದು. ಆದರೆ, ಈಚೆಗೆ ಅದು ಹೆಚ್ಚಾಗುತ್ತಿದೆ.ಇದೆಲ್ಲದಕ್ಕೂ ಆಡಳಿತ ನಡೆಸುವ ಸರಕಾರವೇ ಕಾರಣ. ಆಡಳಿತ ಮಾಡುವ ಸರಕಾರವು ತಪ್ಪು ಮಾಡಿದವರಿಗೆ ಶಿಕ್ಷೆ ಸಿಗುವಂತೆ ವರ್ತಿಸಿದರೆ, ಇಂಥವನ್ನು ತಡೆಯಬಹುದು. ಸಾಮಾಜಿಕ ಜಾಲತಾಣದ ಪೋಸ್ಟ್‍ಗೆ ಸಂಬಂಧಿಸಿ ಪೊಲೀಸರನ್ನು ಕಳುಹಿಸಿ ಬಂಧಿಸುತ್ತಾರೆ; ಆದರೆ, ಈ ರೀತಿ ಕ್ರಿಮಿನಲ್ ಚಟುವಟಿಕೆ ನಡೆದಾಗ ಯಾಕೆ ಈ ಸರಕಾರ ತೆಪ್ಪಗಿರುತ್ತದೆ ಎಂದು ಪ್ರಶ್ನೆ ಹುಟ್ಟುತ್ತಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಹೈಕಮಾಂಡ್ ಎಂಬುದು ಸತ್ತು ಹೋಗಿದೆ. ಹೈಕಮಾಂಡ್ ಎಂದರೆ ಎಐಸಿಸಿ ಅಧ್ಯಕ್ಷರು ಇರಬೇಕು. ಕರ್ನಾಟಕದ ಕಾಂಗ್ರೆಸ್ ನಾಯಕರು ಎಐಸಿಸಿ ಅಧ್ಯಕ್ಷರೆಂದು ತಿಳಿದುಕೊಂಡೇ ಇಲ್ಲ. ಅವರು ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರೆಂದು ಇವತ್ತಿಗೂ ತಿಳಿದುಕೊಂಡಂತಿದೆ.ಬಿಹಾರದಲ್ಲಿ ಎಲ್ಲೂ ಕೂಡ ಎಐಸಿಸಿ ಅಧ್ಯಕ್ಷರ ಫೋಟೊಗಳೇ ಇರಲಿಲ್ಲ; ಅವರಿಗೆ ಅಲ್ಲಿ ಮಹತ್ವ ಇರಲಿಲ್ಲ; ರಾಹುಲ್ ಗಾಂಧಿಗೆ ಮಹತ್ವ ಇತ್ತು. ಅಂದರೆ ಹೈಕಮಾಂಡ್ ಯಾರು?  ಖರ್ಗೆಯವರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಗಾದೆಯ ಥರ ಕಾಂಗ್ರೆಸ್ಸಿನಲ್ಲಿ ಇದ್ದಾರೆ. ಅದರಿಂದಾಗಿ ಪರಿಸ್ಥಿತಿ ಹೀಗಾಗಿದೆ ಎಂದು ವಿವರಿಸಿದರು.

ಕಾಂಗ್ರೆಸ್ಸಿನವರು ಒಂದು ಕಡೆ ನಾಯಕತ್ವ ಬದಲಾವಣೆ ಆಗಬೇಕು ಎನ್ನುತ್ತಾರೆ. ಮತ್ತೊಂದು ಕಡೆ ಸಚಿವಸಂಪುಟ ಪುನಾರಚನೆ ಮಾತು ಕೇಳಿಸುತ್ತಿದೆ. ಗುಜರಾತ್‍ನಲ್ಲಿ ಬೆಳಿಗ್ಗೆ ರಾಜೀನಾಮೆ ಕೊಟ್ಟು ಎರಡನೇ ದಿನ ಬೆಳಿಗ್ಗೆ ಬೇರೆ ಸಚಿವಸಂಪುಟವೇ ರಚನೆ ಆಯಿತು. ಇಲ್ಲಿ ಒಂದು ವರ್ಷದಿಂದ ಸಚಿವಸಂಪುಟ ಪುನಾರಚನೆ ದೊಡ್ಡ ಕಾರ್ಯಕ್ರಮದಂತಿದೆ ಎಂದು ವ್ಯಂಗ್ಯವಾಗಿ ನುಡಿದರು.


Share this with Friends

Related Post