ಬೆಂಗಳೂರು: ಬಿಹಾರದ ಪ್ರಜ್ಞಾವಂತ ಮತದಾರರು ಕಾಂಗ್ರೆಸ್ಸಿಗೆ ಕಪಾಳಮೋಕ್ಷ ಮಾಡಿದ್ದಾರೆ. ಇನ್ನಾದರೂ ರಾಹುಲ್ ಗಾಂಧಿ ಎಚ್ಚತ್ತುಕೊಂಡು ವಿಪಕ್ಷದ ನೆಲೆಯಲ್ಲಿ ಜವಾಬ್ದಾರಿಯಿಂದ ಕೆಲಸ ಮಾಡಿದರೆ ಅವರ ದೃಷ್ಟಿಯಿಂದ ಒಳ್ಳೆಯದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಹಾರ ಚುನಾವಣೆ ವೇಳೆ ರಾಹುಲ್ ಗಾಂಧಿ ಅವರು ಮತಗಳ್ಳತನದ ಹೆಸರಿನಲ್ಲಿ ಮತ ಪಡೆಯುವ ಪ್ರಯತ್ನ ಮಾಡಿದರು. ಆದರೆ ಅದಕ್ಕೆ ಮನ್ನಣೆ ಸಿಕ್ಕಿಲ್ಲ,ಬಿಹಾರ ಫಲಿತಾಂಶದ ನಂತರದಲ್ಲಿ ರಾಹುಲ್ ಗಾಂಧಿ ಒಂದು ರೀತಿ ಕಾಣೆಯಾಗಿದ್ದಾರೆ. ಮತದಾರರು ಆಶೀರ್ವಾದ ಮಾಡುವ ಭ್ರಮೆಯಲ್ಲಿದ್ದ ಅವರಿಗೆ ಬಿಹಾರದ ಪ್ರಜ್ಞಾವಂತ ಮತದಾರರು ಕಾಂಗ್ರೆಸ್ಸಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್ಸಿಗರ ಮಾತನ್ನು ನಂಬಿ ಅವರನ್ನು ಅಧಿಕಾರಕ್ಕೆ ತಂದ ರಾಜ್ಯದ ಜನರಲ್ಲಿ ತಮಗೆ ಅನ್ಯಾಯವಾಗಿದೆ; ಮೋಸ ಆಗುತ್ತಿದೆ ಎಂಬ ಭಾವನೆ ಇದೆ. ಆಡಳಿತ ಪಕ್ಷದ ಸಚಿವರ ಹೇಳಿಕೆ ಗಮನಿಸಿದರೆ ಅರ್ಧದಷ್ಟು ಸಚಿವರು, ಶಾಸಕರು ಮುಖ್ಯಮಂತ್ರಿ ಬದಲಾಗಲಿ ಎನ್ನುತ್ತಿದ್ದಾರೆ. ಒಟ್ಟಾರೆಯಾಗಿ ವಿಪಕ್ಷವಾಗಿ ನಮ್ಮ ಅಭಿಪ್ರಾಯ ಕೇಳಿದರೆ ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತಂದ ಜನರು ಬೇಸತ್ತಿದ್ದಾರೆ ಎಂದರು.
ಕಾನೂನು- ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ:
ಬೆಂಗಳೂರಿನಲ್ಲಿ 7 ಕೋಟಿ ಹಣ ದರೋಡೆ ಮಾತ್ರವಲ್ಲ; ಬೀದರ್ನಲ್ಲಿ ಎಟಿಎಂಗೆ ತುಂಬಿಸಲು ಒಯ್ಯುತ್ತಿದ್ದ ಹಣದ ದರೋಡೆ ನಡೆದಿತ್ತು. ಇದುವರೆಗೂ ಅದಕ್ಕೆ ಉತ್ತರ ಲಭಿಸಿಲ್ಲ; ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಗೃಹಸಚಿವರಿಗೆ ಕೇಳಿದರೆ ಅವರಿಗೆ ಮಾಹಿತಿಯೇ ಇರುವುದಿಲ್ಲ ಎಂದು ಈ ಕುರಿತ ಪ್ರಶ್ನೆಗೆ ಉತ್ತರ ಕೊಟ್ಟರು. ಗೃಹ ಸಚಿವರು ಅಸಹಾಯಕರಾಗಿದ್ದಾರೆ ಎಂದು ಟೀಕಿಸಿದರು.
ಸಿಎಂ ಕುರ್ಚಿಗಾಗಿ ಕಾಂಗ್ರೆಸ್ಸಿನಲ್ಲಿ ದಿನೇದಿನೇ ಪೈಪೋಟಿ:
ಡಿ.ಕೆ.ಶಿವಕುಮಾರ್ ಅವರು ಕಳೆದ 2-3 ತಿಂಗಳಿನಿಂದ ಬಹಳ ಮಾರ್ಮಿಕವಾಗಿ ಮಾತನಾಡುತ್ತಿದ್ದಾರೆ. ಒಂದಂತೂ ಸತ್ಯ; ರಾಜ್ಯದಲ್ಲಿ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಅಭಿವೃದ್ಧಿ ಕೆಲಸ ಕಾರ್ಯಗಳೇನೂ ನಡೆಯುತ್ತಿಲ್ಲ. ಆಡಳಿತ ಪಕ್ಷದ ಶಾಸಕರೇ ಅಸಹಾಯಕರಾಗಿ ಮುಖ್ಯಮಂತ್ರಿಗಳ ವಿರುದ್ಧ ಹೇಳಿಕೆ ಕೊಡುತ್ತಿದ್ದಾರೆ. ಸಿಎಂ ಕುರ್ಚಿಗಾಗಿ ಕಾಂಗ್ರೆಸ್ಸಿನಲ್ಲಿ ದಿನೇದಿನೇ ಪೈಪೋಟಿ ಹೆಚ್ಚಾಗಿದೆ. ಬಡವರು, ರೈತರು, ಜನರಿಗೆ ಈ ರಾಜ್ಯದಲ್ಲಿ ಒಂದು ಚುನಾಯಿತ ಸರಕಾರ ಇದೆ ಎಂಬುದೇ ಮರೆತುಹೋಗಿದೆ ಎಂದು ನುಡಿದರು.
28ರಂದು ಉಡುಪಿಗೆ ಪ್ರಧಾನಿ ಭೇಟಿ:
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇದೇ 28ರಂದು ಉಡುಪಿ ಮಠಕ್ಕೆ ಭೇಟಿ ಕೊಡುತ್ತಾರೆಂಬ ಮಾಹಿತಿ ನಮಗೂ ಬಂದಿದೆ. ಬಹುತೇಕ ಬರುವ ಮಾಹಿತಿ ಇದ್ದು, ನಮ್ಮೆಲ್ಲ ಶಾಸಕರು, ಸಂಸದರ ನೇತೃತ್ವದಲ್ಲಿ ಪೂರ್ವತಯಾರಿ, ಚರ್ಚೆ ನಡೆಸಿದ್ದೇನೆ ಎಂದರು.

