ಬೆಂಗಳೂರು: ಸ್ವತಂತ್ರ ಮತ್ತು ಪರ್ಯಾಯ ಸಿನಿಮಾಗಳಿಗೆ ಬೆಂಗಳೂರು ಚಿತ್ರೋತ್ಸವದಂತಹ ವೇದಿಕೆಗಳು ಅತ್ಯಗತ್ಯ, ವಿಭಿನ್ನ ಕಥೆಗಳನ್ನು ಹೇಳಲು ಇಲ್ಲಿ ಮುಕ್ತ ಅವಕಾಶವಿದೆ ಎಂದು ತಮಿಳು ಚಲನಚಿತ್ರ ನಿರ್ದೇಶಕ ಅರವಿಂದ್ ಶಿವ ಅಭಿಪ್ರಾಯಪಟ್ಟರು.
17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ತಮಿಳು ಚಲನಚಿತ್ರ ನಿರ್ದೇಶಕ ಅರವಿಂದ್ ಶಿವ ತಮ್ಮ ನಿರ್ದೇಶನದ ‘ದಿ ಟ್ಯಾಬ್ಲೆಟ್’ (The Tablet) ಚಿತ್ರದ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿರುವ ಈ ಸಿನಿಮಾದ ನಿರ್ಮಾಣದ ಹಂತಗಳು, ಪ್ರೇಕ್ಷಕರಿಂದ ವ್ಯಕ್ತವಾದ ಪ್ರತಿಕ್ರಿಯೆ ಮತ್ತು ಈ ಕಥೆಯನ್ನು ಸೃಷ್ಟಿಸಲು ತಮಗಿದ್ದ ವೈಯಕ್ತಿಕ ಪ್ರೇರಣೆಗಳ ಬಗ್ಗೆ ಅವರು ಹಲವು ವಿಚಾರಗಳನ್ನು ಹಂಚಿಕೊಂಡರು.
ಕೊರೊನಾ ಲಾಕ್ಡೌನ್ ಅವಧಿಯಲ್ಲಿ ಎಚ್ಐವಿ (HIV) ಸೇರಿದಂತೆ ಗಂಭೀರ ಕಾಯಿಲೆಗಳಿಂದ ಪೀಡಿತರಾದ ಮಕ್ಕಳೊಂದಿಗೆ ಸ್ವಯಂಸೇವಕರಾಗಿ ಕೆಲಸ ಮಾಡುತ್ತಿದ್ದಾಗ ಈ ಚಿತ್ರದ ಕಥೆಯ ಕಿಡಿ ಮೂಡಿತು ಎಂದು ಅರವಿಂದ್ ಶಿವ ವಿವರಿಸಿದರು. ಈ ಅನುಭವದ ಮೂಲಕ ಸಮಾಜದಲ್ಲಿ ಎಚ್ಐವಿ ಕುರಿತಾದ ಆಳವಾದ ಕಳಂಕ ಮತ್ತು ಭಯದ ಬಗ್ಗೆ ಅವರಿಗೆ ಅರಿವಾಯಿತು. ಈ ಚಿತ್ರದ ನಿರ್ಮಾಣ ಪ್ರಕ್ರಿಯೆಯು ವೈಯಕ್ತಿಕವಾಗಿ ತಮ್ಮಲ್ಲಿ ಬದಲಾವಣೆ ತಂದಿತು ಮತ್ತು ಸಿನಿಮಾವು ಸತ್ಯ ಹಾಗೂ ಸಂವೇದನಾಶೀಲತೆಯಿಂದ ಕೂಡಿರಲು ಈ ಅನುಭವಗಳು ಸಹಕಾರಿಯಾದವು. ಆ ಸಮಯದಲ್ಲಿ ಕಂಡುಕೊಂಡ ನೈಜ ಸಂಗತಿಗಳೇ ‘ದಿ ಟ್ಯಾಬ್ಲೆಟ್ʼ ಚಿತ್ರದ ನಿರೂಪಣೆ ಮತ್ತು ಭಾವನಾತ್ಮಕ ಧ್ವನಿಯನ್ನು ರೂಪಿಸಿವೆ ಎಂದರು.
ಚಲನಚಿತ್ರೋತ್ಸವದಲ್ಲಿ ಸಿಗುತ್ತಿರುವ ಪ್ರತಿಕ್ರಿಯೆಯ ಬಗ್ಗೆ ಮಾತನಾಡಿದ ಅರವಿಂದ್ ಶಿವ, ʼಪ್ರೇಕ್ಷಕರಿಂದ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಪ್ರದರ್ಶನದ ನಂತರ ಅನೇಕರು ನಮ್ಮನ್ನು ಭೇಟಿ ಮಾಡಿ, ಈ ಚಿತ್ರವು ತಮಗೆ ಭರವಸೆಯ ಭಾವನೆಯನ್ನು ನೀಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರದ ವಿಷಯವನ್ನು ಅನಗತ್ಯವಾಗಿ ಅತಿರಂಜಿತವಾಗಿ ತೋರಿಸದೆ, ಅತ್ಯಂತ ಸಂಯಮದಿಂದ ಕಥೆ ಹೇಳಿರುವುದನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಪ್ರೇಕ್ಷಕರು ಈ ಸಮಸ್ಯೆಯನ್ನು ಮಾನವೀಯ ಮತ್ತು ವೈಜ್ಞಾನಿಕ ದೃಷ್ಟಿಕೋನದಿಂದ ನೋಡಲು ಸಿನಿಮಾ ಸಹಾಯ ಮಾಡಿದೆ ಎಂಬ ಪ್ರತಿಕ್ರಿಯೆಯು ತಮಗೆ ಅತ್ಯಂತ ತೃಪ್ತಿ ತಂದಿದೆʼ ಎಂದು ಅವರು ಹೇಳಿದರು.
ಚಿತ್ರದ ಛಾಯಾಗ್ರಾಹಕ ವಿನೋಜ್ ಕಾವೇರಿ ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದು, ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಪ್ರೇಕ್ಷಕರು ತಮ್ಮ ದೃಶ್ಯ ವೈಭವದ ಕೆಲಸವನ್ನು ಗುರುತಿಸಿ ಮೆಚ್ಚುತ್ತಿರುವುದು ಸಂತಸ ತಂದಿದೆ ಎಂದರು. ಚಿತ್ರೀಕರಣದ ಸಮಯದಲ್ಲಿ ತೆಗೆದುಕೊಂಡ ಸೃಜನಾತ್ಮಕ ಸವಾಲುಗಳು ಮತ್ತು ಪ್ರಯೋಗಗಳಿಗೆ ಇಂದು ಸಾರ್ಥಕತೆ ಸಿಕ್ಕಿದೆ ಎಂದು ಅವರು ತಿಳಿಸಿದರು.

