ಬೆಂಗಳೂರು: ಕನಕದಾಸರು ಉಡುಪಿಗೆ ಹೋಗಿದ್ದ ಯಾವುದೇ ಪುರಾವೆಗಳಿಲ್ಲ ಎಂದು ಕನಕಶ್ರೀ ಪ್ರಶಸ್ತಿ ಪುರಸ್ಕೃತ ಚಂದ್ರಕಾಂತ ಬಿಜ್ಜರಗಿ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶನಿವಾರ ರವೀಂದ್ರ ಕಲಾಕ್ಷೇತ್ರದಲ್ಲಿ ‘ಸಂತಶ್ರೇಷ್ಠ ಭಕ್ತ ಕನಕದಾಸರ’ ಜಯಂತಿ ಕಾರ್ಯಕ್ರಮದಲ್ಲಿ ಕನಕಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಶ್ರೀ ಕೃಷ್ಣ ಮಠದಲ್ಲಿ ಇರುವುದು ಕನಕ ಕಿಂಡಿಯಲ್ಲ. ಕೃತಕವಾಗಿ ಕಿಂಡಿ ಸೃಷ್ಟಿಸಿದ್ದಾರೆ. ಇದನ್ನು ಸರಿಪಡಿಸುವ ಕೆಲಸವಾಗಬೇಕು. ಸಂಶೋಧನೆ ಎನ್ನುವುದು ಸತ್ಯವನ್ನು ಬೆಳಕಿಗೆ ತರುವುದು. ಆದರೆ, ಸಂಶೋಧನೆಗೆ ಬೆಲೆಯೇ ಇಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕನಕದಾಸರು ಈ ನಾಡಿನ ಸಾಂಸ್ಕೃತಿಕ ಸುಧಾಕರು. ಅತ್ಯಂತ ಶ್ರೇಷ್ಠ ಕವಿಗಳಲ್ಲಿ ಒಬ್ಬರು. ಪ್ರಸ್ತುತ ದಿನಗಳಲ್ಲಿ ಕನಕದಾಸರ ಮೌಲ್ಯವನ್ನು ಅಳವಡಿಸಿ ಈ ಸಮಾಜ ಪ್ರೀತಿ,ಶಾಂತಿಯಿಂದ ಬದುಕಬೇಕು.ಗಾಂಧಿ, ಅಂಬೇಡ್ಕರ್ ಅವರು ಭಾರತದ 2 ಕಣ್ಣು ಇದ್ದಂತೆ ಕನಕದಾಸರು ಸಾಮರಸ್ಯ, ಭಾವೈಕ್ಯತೆಯ ಕಣ್ಣು ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ.ಎ.ಎಂ.ಶಿವಸ್ವಾಮಿ ತಿಳಿಸಿದರು.

