ಬೆಂಗಳೂರು:ಈ ಬಾರಿಯ ಸಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಕೆ ಮಾಡಲು ಆಧಾರ್ ಅಥವಾ ಡಿಜಿ ಲಾಕರ್ ಲಿಂಕ್ ಮೂಲಕ ವಿವರ ಖಚಿತಪಡಿಸುವ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗಿದ್ದು,ವಿವರಗಳಲ್ಲಿ ಆಗುತ್ತಿದ್ದ ಲೋಪಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪರಿಹಾರ ಕಂಡುಕೊಳ್ಳಲಾಗಿದೆ.
ಸಿಇಟಿ ದಿಕ್ಸೂಚಿ ಕಿರುಹೊತ್ತಿಗೆ ಬಿಡುಗಡೆಗೊಳಿಸಿದ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್,2026ನೇ ಸಾಲಿನ ಸಿಇಟಿ ಪರೀಕ್ಷೆಗೆ ನಾವು ಈಗಿನಿಂದಲೇ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು, ಜ.17ರಂದು ಅರ್ಜಿ ಬಿಡುಗಡೆ ಮಾಡಲಿದ್ದೇವೆ. ಈ ಬಾರಿಯ ವಿಶೇಷ ಅಂದರೆ, ಅರ್ಜಿ ಸಲ್ಲಿಸುವ ಪ್ರತಿಯೊಬ್ಬ ಅಭ್ಯರ್ಥಿಯ ಹೆಸರೂ, ಹುಟ್ಟಿದ ದಿನಾಂಕ, ವಿಳಾಸ ಇತ್ಯಾದಿ ವಿವರಗಳನ್ನು ಆಧಾರ್ ಅಥವಾ ಡಿಜಿ ಲಾಕರ್ ಮೂಲಕ ಪ್ರಾಮಾಣೀಕರಿಸುವ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಹೆಸರು ಬರೆಯುವುದರಲ್ಲಿ ಆಗುತ್ತಿದ್ದ ತಪ್ಪು ಗಳನ್ನು ತಪ್ಪಿಸಬಹುದಾಗಿದೆ ಎಂದರು.
ಸಿಇಟಿ ದಿಕ್ಸೂಚಿ:
ಇದರ ಒಂದು ಭಾಗವಾಗಿ ಸಿಇಟಿ ದಿಕ್ಸೂಚಿ ಕಿರು ಹೊತ್ತಿಗೆಯನ್ನು ಇಂದು ಬಿಡುಗಡೆ ಮಾಡಲಾಗಿದೆ. ಅರ್ಜಿ ತುಂಬುವುದರಿಂದ ಹಿಡಿದು ಶುಲ್ಕ ವಿವರ, ಲಭ್ಯವಿರುವ ಸೀಟುಗಳು, ಅರ್ಹತಾ ಮಾನದಂಡಗಳು, ಪರೀಕ್ಷಾ ಕೇಂದ್ರಗಳು, ಹೀಗೆ ಸಮಗ್ರ ವಿವರಗಳು ಇದರಲ್ಲಿ ಇವೆ. ಸರಳ ಭಾಷೆಯಲ್ಲಿ ವಿವರಿಸಿರುವ ಕೈಪಿಡಿಯನ್ನು ಸಿಇಟಿ ತೆಗೆದುಕೊಳ್ಳುವ ಪ್ರತಿ ವಿದ್ಯಾರ್ಥಿಗೂ ಆಯಾ ಕಾಲೇಜುಗಳ ಮೂಲಕವೇ ತಲುಪಿಸಲಾಗುವುದು.ಸರ್ಕಾರಿ ಸೇರಿದಂತೆ ಮಾನ್ಯತೆ ಪಡೆದ ಒಟ್ಟು 3,112 ವಿಜ್ಞಾನ ಪಿಯು ಕಾಲೇಜುಗಳು ರಾಜ್ಯದಲ್ಲಿ ಇದ್ದು, ಇವುಗಳಲ್ಲಿ ದ್ವಿತೀಯ ಪಿಯುಸಿಯಲ್ಲಿ 2,92,733 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇದರ ಜತೆಗೆ ರಾಜ್ಯದಲ್ಲಿನ ಸಿಬಿಎಸ್ಇ ಹಾಗೂ ಇಐಎಸ್ಇ ಕಾಲೇಜುಗಳಲ್ಲಿ ಓದುವ 83 ಸಾವಿರ ಮಂದಿಯನ್ನೂ ಸೇರಿಸಿದರೆ ಅವರ ಒಟ್ಟು ಸಂಖ್ಯೆ 3,75,507 ಆಗಲಿದೆ. ಇಷ್ಟೂ ಮಂದಿಗೆ ಬಹಳ ವ್ಯವಸ್ಥಿತವಾಗಿ ಕೈಪಿಡಿ ತಲುಪಿಸುವ ಕೆಲಸ ಮಾಡಲಾಗುವುದು ಎಂದರು.
ಕಾಲೇಜು ಹಂತದಲ್ಲೇ ಅರ್ಜಿ ಭರ್ತಿ:
ಆನ್ ಲೈನ್ ನಲ್ಲಿ ಪರಿಶೀಲನೆಯಾಗದವರ ದಾಖಲೆಗಳನ್ನು ಕಾಲೇಜು ಹಂತದಲ್ಲಿ ಪರಿಶೀಲನೆಗೆ ಕಳೆದ ವರ್ಷ ಅವಕಾಶ ನೀಡಲಾಗಿತ್ತು. ಈ ಪ್ರಯೋಗ ಅತ್ಯಂತ ಯಶಸ್ವಿಯಾಗಿದ್ದು, ಈ ಬಾರಿ ಇದರ ಜತೆಗೆ ಕಾಲೇಜು ಹಂತದಲ್ಲೇ ಅರ್ಜಿ ಭರ್ತಿ ಮಾಡುವುದಕ್ಕೂ ನೆರವಾಗಲು ಕೆಇಎ ಮುಂದಾಗಿದೆ.ಪ್ರತಿಯೊಂದು ಪಿಯು ವಿಜ್ಞಾನ ಕಾಲೇಜುಗಳ ಆಯ್ದ ಉಪನ್ಯಾಸಕರಿಗೆ ಅರ್ಜಿ ಭರ್ತಿ ಬಗ್ಗೆ ಆನ್ ಲೈನ್ ತರಬೇತಿ ನೀಡಲಾಗುವುದು. ಬಳಿಕ ಆ ಉಪನ್ಯಾಸಕರು ತಮ್ಮ ಕಾಲೇಜಿನ ಇತರ ಸಿಬ್ಬಂದಿಗೆ ತರಬೇತಿ ನೀಡಿ, ವಿದ್ಯಾರ್ಥಿಗಳ ಅರ್ಜಿ ಭರ್ತಿಯ ಮೇಲ್ವಿಚಾರಣೆ ನಡೆಸಲಿದ್ದಾರೆ. ಅನುಮಾನಗಳಿಗೆ ಪರಿಹಾರ ನೀಡಲಿದ್ದಾರೆ. ಇದರಿಂದ ಅರ್ಜಿ ಭರ್ತಿ ವೇಳೆ ಆಗುತ್ತಿದ್ದ ತಪ್ಪುಗಳಿಗೆ ಕಡಿವಾಣ ಹಾಕಬಹುದು. ಹಾಗೂ ಸೈಬರ್ ಸೆಂಟರ್ ಗಳ ಮೇಲೆ ಅವಲಂಬಿಸುವುದನ್ನೂ ಕಡಿಮೆ ಮಾಡಬಹುದು ಎಂದರು.
ಮತ್ತಷ್ಟು ಕಾಲೇಜುಗಳಿಗೆ ಸಿಇಟಿ ಮಂಥನ:
ಕೋರ್ಸ್/ ಕಾಲೇಜು (ಆಪ್ಷನ್ಸ್ ಎಂಟ್ರಿ) ಆಯ್ಕೆ ಕುರಿತು ಆಪ್ಶನ್ ದಾಖಲಿಸಲು ನೆರವಾಗುವ `ಸಿಇಟಿ ಮಂಥನ’ ಕಾರ್ಯಕ್ರಮವನ್ನು ಕಳೆದ ವರ್ಷ ಸೀಮಿತ ಸಂಖ್ಯೆಯ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ನಡೆಸಲಾಗಿತ್ತು. ಇದು ವಿದ್ಯಾರ್ಥಿ/ಪೋಷಕರ ಮನ ಗೆದ್ದಿತ್ತು. ಹೀಗಾಗಿ 2026-27ನೇ ಸಾಲಿಗೆ ಅನ್ವಯವಾಗುವಂತೆ ಇನ್ನೂ ಹೆಚ್ಚಿನ ಕಾಲೇಜುಗಳಲ್ಲಿ ಈ ಕಾರ್ಯಕ್ರಮವನ್ನು ನಡೆಸಲು ಕೆಇಎ ತೀರ್ಮಾನಿಸಿದೆ. ಇದನ್ನು ಆಯಾ ಸಂಸ್ಥೆಗಳು ಕಾಲೇಜು ಪ್ರವಾಸ ವಾಗಿಯೂ ಮಾರ್ಪಡಿಸಿಕೊಳ್ಳಬಹುದು. ಬಂದಂತಹ ಪೋಷಕರಿಗೆ ಕಾಲೇಜಿನಲ್ಲಿನ ಮೂಲಸೌಕರ್ಯ ಪ್ರದರ್ಶನಕ್ಕೂ ಅವಕಾಶವಾಗಲಿದೆ ಎಂದರು.
ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಹೆಲ್ಪ್ ಡೆಸ್ಕ್:
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರ್ಕಾರಿ, ಅನುದಾನಿತ ಎಂಜಿನಿಯರಿಂಗ್ ಕಾಲೇಜು ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಕೂಡ ಆಪ್ಷನ್ಸ್ ಎಂಟ್ತಿ ಸಂದರ್ಭದಲ್ಲಿ ಹೆಲ್ಪ್ ಡೆಸ್ಕ್ ಮಾಡಲಾಗುವುದು. ಕಾಲೇಜಿನ ಕಂಪ್ಯೂಟರ್ ಲ್ಯಾಬ್ ಗಳನ್ನು ಆಪ್ಷನ್ಸ್ ಎಂಟ್ರಿ ಗೆ ಬಳಕೆ ಮಾಡಲಾಗುವುದು.ಈ ಬಾರಿ ದಾಖಲೆಗಳ ಪರಿಶೀಲನೆಯ ನಂತರ ಅರ್ಜಿಯನ್ನು ಪೋರ್ಟಲ್ ನಲ್ಲಿ ಮುದ್ರಣ ಮಾಡಿಕೊಳ್ಳುವುದಕ್ಕೂ ವ್ಯವಸ್ಥೆ ಮಾಡಲಾಗಿದೆ ಎಂದರು
ಜಾಗೃತಿಗೆ ಸಾಮಾಜಿಕ ಮಾಧ್ಯಮದ ಬಳಕೆ:
ಕೆಇಎ ತನ್ನ ವೆಬ್ ಸೈಟ್ ಮೂಲಕ ಮಾಹಿತಿ ರವಾನಿಸುವುದರ ಜತೆಗೆ ಅನೇಕ ಸಾಮಾಜಿಕ ಮಾಧ್ಯಮಗಳ ಮೂಲಕವೂ ವಿದ್ಯಾರ್ಥಿಗಳು/ಪೋಷಕರನ್ನು ತಲುಪುವ ಕೆಲಸ ಮಾಡುತ್ತಿದೆ.
ಎಕ್ಸ್ ಖಾತೆ:
ಅಭ್ಯರ್ಥಿಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಆಯಾ ಕ್ಷಣದಲ್ಲೇ ಟ್ವೀಟ್ ಮೂಲಕ ತಲುಪಿಸಲು X ಖಾತೆಯನ್ನು (@KEA_karnataka) ಹೊಂದಿದೆ. ಇದಕ್ಕೆ 45 ಸಾವಿರಕ್ಕೂ ಹೆಚ್ಚು ಫಾಲೋಯರ್ಸ್ ಇದ್ದಾರೆ.
ಕೆಇಎ ವಿಕಸನ ಯೂಟ್ಯೂಬ್ ಚಾನೆಲ್:
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೆಇಎ ವಿಕಸನ ಯೂಟ್ಯೂಬ್ ಚಾನಲ್ ಆರಂಭಿಸಿದ್ದು, ಇದಕ್ಕೆ 85 ಸಾವಿರಕ್ಕೂ ಹೆಚ್ವು ಮಂದಿ ಫಾಲೋಯರ್ಸ್ ಇದ್ದಾರೆ. ಪ್ರತಿ ಹಂತದ ಬೆಳವಣಿಗೆಗಳನ್ನು ವಿಡಿಯೊ ರೆಕಾರ್ಡ್ ಮಾಡಿ ಅಪ್ ಲೋಡ್ ಮಾಡಲಾಗುತ್ತದೆ
ಕೆಇಎ ಬಾಟ್:
ಇಷ್ಟೇ ಅಲ್ಲದೆ, KEABOT ಮೂಲಕವೂ ಜನರನ್ನು ತಲುಪುವ ಕೆಲಸ ಮಾಡಲಾಗುತ್ತಿದೆ. ಕೆಇಎ ಬಾಟ್ ಗೆ ಹೋಗಿ ಕೇವಲ ಟೈಪ್ ಮಾಡುವುದರ ಮೂಲಕ ತಮಗೆ ಬೇಕಾದ ಯಾವುದೇ ಮಾಹಿತಿ ಬೇಕಾದರೂ ಪಡೆಯಬಹುದು. ಈ ಮೂಲಕ 18.5 ಲಕ್ಷಕ್ಕೂ ಹೆಚ್ಚು ವಿವಿಧ ರೀತಿಯ ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದಿರುವುದು ಸಂತಸದ ವಿಷಯ.
ಕಾಲೇಜು ಪೋರ್ಟಲ್:
ಸಿಇಟಿ ಫಲಿತಾಂಶದ ನಂತರ, ಸೀಟು ಹಂಚಿಕೆಗೂ ಮುನ್ನ ಆಪ್ಶನ್ ದಾಖಲಿಸಲು ಅವಕಾಶ ನೀಡಲಾಗುತ್ತದೆ. ಈ ಸಂದರ್ಭದಲ್ಲಿ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳುವುದಕ್ಕೂ ಮುನ್ನ ಆ ಕಾಲೇಜುಗಳಲ್ಲಿನ ಮೂಲಸೌಲಭ್ಯ, ಶೈಕ್ಷಣಿಕ ವಾತಾವರಣ, ಸಿಬ್ಬಂದಿ, ಶುಲ್ಕ, ಪ್ರಯೋಗಾಲಯ ಇತ್ಯಾದಿಯ ಮಾಹಿತಿ ಕೂಡ ಲಭ್ಯವಾಗುವ ಹಾಗೆ ಕಾಲೇಜು ಪೋರ್ಟಲ್ ಗೆ ಲಿಂಕ್ ಕೊಡುವ ವ್ಯವಸ್ಥೆ ಮಾಡಲಾಗುತ್ತದೆ. ಕಾಲೇಜಿಗೆ ಸೇರಬೇಕೊ ಬೇಡವೊ ಎನ್ನುವುದನ್ನು ನಿರ್ಧರಿಸಲು ಇದು ನೆರವಾಗುತ್ತದೆ. ಎಷ್ಟೋ ಮಂದಿ ಕಾಲೇಜಿನ ಮಾಹಿತಿ ಇಲ್ಲದೆ, ಆಪ್ಶನ್ ದಾಖಲಿಸಿ, ನಂತರ ಸೀಟು ಸಿಕ್ಕಿದ ಮೇಲೆ, ಅಯ್ಯೊ ಅದು ಸರಿ ಇಲ್ಲ; ಮತ್ತೊಂದು ಕಡೆ ಕೊಡಿ ಎನ್ನುವುದು ಮಾಮೂಲು. ಹೀಗಾಗಿ ಈ ರೀತಿಯ ಹೊಸ ಉಪಕ್ರಮ ಸೂಕ್ತ ಕಾಲೇಜುಗಳ ಆಯ್ಕೆಗೆ ನೆರವಾಗಲಿದೆ ಎಂದರು.
ವೃತ್ತಿಪರ ಶಿಕ್ಷಣ ಕೋರ್ಸ್ಗಳ ಅಧ್ಯಯನ ಮಾಡಲು ಬಯಸುವವರಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಯನ್ನು ಮೂರು ದಶಕಗಳಿಂದಲೂ ನಡೆಸಿಕೊಂಡು ಬರುತ್ತಿರುವ ಹೆಗ್ಗಳಿಕೆ ಹೊಂದಿದೆ.ಪಿಜಿ ಮತ್ತು ಯುಜಿ ನೀಟ್ ಕೌನ್ಸೆಲಿಂಗ್, ಪಿಜಿಸಿಇಟಿ/ಪಿಜಿಇಟಿ, ಕೆ-ಸೆಟ್ ಹಾಗೂ ಪದವಿ ಕಾಲೇಜು ಉಪನ್ಯಾಸಕರು, ಪಿಎಸ್ಐ ಸೇರಿದಂತೆ ಇತರ ಪ್ರಮುಖ ನೇಮಕಾತಿ ಪರೀಕ್ಷೆಗಳನ್ನೂ ಅತ್ಯಂತ ಸಮರ್ಥವಾಗಿ ನಡೆಸಿಕೊಂಡು ಬಂದಿದೆ.ಪ್ರಾಧಿಕಾರವು ಕಾಲದಿಂದ ಕಾಲಕ್ಕೆ ಹಲವು ಬದಲಾವಣೆಗಳಿಗೆ ತೆರೆದುಕೊಂಡಿದ್ದು, ಕೃತಕ ಬುದ್ಧಿಮತ್ತೆಯಂತಹ (Artifical Inteligence) ಆಧುನಿಕ ತಂತ್ರಜ್ಞಾನವನ್ನು ಕೂಡ ತನ್ನ ಪರೀಕ್ಷಾ ಪ್ರಕ್ರಿಯೆಯಲ್ಲಿ ಪರಿಣಾಮಕಾರಿಯಾಗಿ ಅಳವಡಿಸಿಕೊಂಡಿದೆ.ಈ ಮೂಲಕ 2025ನೇ ಸಾಲಿನ ಸಿಇಟಿ ಪರೀಕ್ಷೆಯನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ್ದು, ಜನರ ಮನ ಗೆದ್ದಿದೆ ಎಂದರು.
2025ರಲ್ಲಿ ಎದುರಾದ ಸವಾಲುಗಳನ್ನು ಗಮನದಲ್ಲಿ ಇಟ್ಟುಕೊಂಡು 2026ನೇ ಸಾಲಿನ ಸಿಇಟಿ ಪ್ರಕ್ರಿಯೆಗೆ ಹೊಸ ರೀತಿಯಲ್ಲಿ ಸಿದ್ಧತೆ ಆರಂಭಿಸಲಾಗಿದೆ ಎಂದು ಸಚಿವರು ವಿವರ ನೀಡಿದರು.

