ಬೆಂಗಳೂರು:ಹೆಣ್ಣು ಹುಲಿಯೊಂದು ತನ್ನ ನಾಲ್ಕು ಮರಿಗಳೊಂದಿಗೆ ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದು ಸ್ಥಳೀಯವಾಗಿ ಯಾವುದೇ ಅಹಿತಕರ ಘಟನೆ ಜರುಗದಂತೆ ಅಗತ್ಯ ಮುಂಜಾಗೃತಾ ಕ್ರಮ ಕೈಗೊಳ್ಳುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಚಾಮರಾಜನಗರ ತಾಲ್ಲೂಕಿನ ನಂಜೀದೇವನಪುರ ಗ್ರಾಮದಲ್ಲಿ, ಕಳೆದ ಕೆಲ ದಿನಗಳಿಂದ ಹೆಣ್ಣು ಹುಲಿಯೊಂದಿಗೆ ನಾಲ್ಕು ಅದರ ಮರಿಗಳು ಕಾಣಿಸಿಕೊಂಡಿದ್ದು ಕೆಲ ಸಾಕು ಪ್ರಾಣಿಗಳು ಈ ವನ್ಯಜೀವಿಗಳಿಗೆ ಬಲಿಯಾಗಿದ್ದು, ಈ ಪ್ರದೇಶದ ಜನರಿಗೆ ಆತಂಕ ಉಂಟುಮಾಡಿರುವುದು ವರದಿಯಾಗಿರುತ್ತದೆ. ಈ ಹುಲಿಗಳಿಂದ ಮುಂದೆ ಯಾವುದೇ ರೀತಿ ಹಾನಿಯಾಗದಂತೆ ಹಾಗೂ ಸದರಿ ಹುಲಿಗಳನ್ನು ಸಂರಕ್ಷಿಸಿ, ರಕ್ಷಿಸಲು ಅಗತ್ಯವಿರುವ ಎಲ್ಲಾ ಮುಂಜಾಗೃತಾ ಕ್ರಮಗಳನ್ನು ಶೀಘ್ರವಾಗಿ ಕೈಗೊಂಡು ಈ ಕುರಿತು ವರದಿ ನೀಡಿ ಎಂದು ಸಚಿವ ಈಶ್ವರ ಖಂಡ್ರೆ ಸೂಚಿಸಿದ್ದಾರೆ.
ಇತ್ತೀಚೆಗಷ್ಟೇ ಹುಲಿ ಮರಿಗಳೊಂದಿಗೆ ಹುಲಿಯೂ ವಿಷ ಪ್ರಾಶನದಿಂದ ಮೃತಪಟ್ಟ ಘಟನೆ ನಡೆದಿದ್ದ ಹಿನ್ನಲೆಯಲ್ಲಿ ಹುಲಿಗಳ ರಕ್ಷಣಾ ದೃಷ್ಟಿಯಿಂದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮುನ್ನೆಚ್ಚರಿಕಾ ಕ್ರಮದ ಕುರಿತು ಸಚಿವರು ಸ್ಪಷ್ಟ ಸೂಚನೆ ನೀಡಿದ್ದಾರೆ.

