ಬೆಂಗಳೂರು:ಬಂಡೀಪುರ ಮತ್ತು ನಾಗರಹೊಳೆ ಪ್ರದೇಶಗಳಲ್ಲಿ ಟ್ರೆಕ್ಕಿಂಗ್, ಸಫಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಹುಲಿ ಸೆರೆಗೆ ನಡೆಸಿದ ಪ್ರಯತ್ನ ಸಫಲವಾಗಿದ್ದು, ಜನರ ಮೇಲೆ ಪದೆಪದೆ ದಾಳಿ ಮಾಡುತ್ತಿದ್ದ ಹುಲಿಯನ್ನು ಯಶಸ್ವಿಯಾಗಿ ಸೆರೆ ಹಿಡಿಯಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ,ಸರಗೂರು ತಾಲೂಕಿನಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಜನ ಮತ್ತು ಜಾನುವಾರುಗಳ ಮೇಲೆ ದಾಳಿ ಮಾಡಿ ಜೀವಹಾನಿಗೆ ಕಾರಣವಾಗಿದ್ದ ಗಂಡು ಹುಲಿಯನ್ನು ಯಶಸ್ವಿಯಾಗಿ ಸೆರೆ ಹಿಡಿಯಲಾಗಿದೆ ಎಂದು ತಿಳಿಸಿದ್ದಾರೆ.
ಮೃತ ವ್ಯಕ್ತಿಗಳ ಮರಣೋತ್ತರ ಪರೀಕ್ಷಾ ವರದಿ ಮತ್ತು ಸೆರೆ ಹಿಡಿದ ಹುಲಿಯ ಡಿ.ಎನ್.ಎ. ಮಾದರಿ ಎರಡನ್ನೂ ಪರಿಶೀಲಿಸಿ, ಇದೇ ಹುಲಿ ಜನಹಾನಿಗೆ ಕಾರಣವಾಗಿದ್ದೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.ಬಂಡೀಪುರ ಮತ್ತು ನಾಗರಹೊಳೆ ಪ್ರದೇಶಗಳಲ್ಲಿ ಮಾನವ-ವನ್ಯಜೀವಿ ಸಂಘರ್ಷದ ಘಟನೆಗಳು ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಸಫಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಅಲ್ಲಿ ನಿಯೋಜಿಸಲಾದ ಸಿಬ್ಬಂದಿಯನ್ನು ಹುಲಿ ಸೆರೆ ಕಾರ್ಯಾಚರಣೆಗೆ ನಿಯೋಜಿಸಲಾಯಿತು ಅದರ ಫಲವಾಗಿ ಹುಲಿಯನ್ನು ಸೆರೆ ಹಿಡಿಯಲಾಗಿದೆ ಎಂದರು.
ಸುಮಾರು 12-13 ವರ್ಷ ವಯಸ್ಸಿನ ಈ ಗಂಡು ಹುಲಿ ಅರಣ್ಯದಲ್ಲಿ ಬೇಟೆ ಆಡಲು ಅಸಮರ್ಥವಾಗಿದ್ದರಿಂದ ಗ್ರಾಮಗಳತ್ತ ನುಗ್ಗಿ ದಾಳಿ ಮಾಡುತ್ತಿದ್ದುದಾಗಿ ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ವನ್ಯಜೀವಿ ವಿಭಾಗದ ಉನ್ನತಾಧಿಕಾರಿಗಳಿಗೆ ವಸತಿ ಪ್ರದೇಶಗಳ ಸುತ್ತಮುತ್ತ ಹುಲಿಗಳ ಸಂಚಾರವನ್ನು ನಿಗಾದಲ್ಲಿ ಇಟ್ಟು, ಇತರ ಯಾವುದೇ ಹುಲಿಗಳು ದಾಳಿ ಮಾಡಿದೆಯೇ ಎಂಬುದನ್ನೂ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ ಎಂದರು.

