ಬೆಂಗಳೂರು: ನಮ್ಮ ಕಡೆ ಭೂತಾರಾಧಯನ್ನು ಸಂತೃಪ್ತಿಗೊಳಿಸಲು ಕೋಳಿಬಲಿ ಕೊಡಲಾಗುತ್ತದೆ ಆದರೆ ಇಲ್ಲಿ ಯಾವ ಭೂತಕ್ಕೆ ನಾಟಿಕೋಳಿ ಬಲಿ ಕೊಡಲಾಗುತ್ತಿದೆಯೋ ಗೊತ್ತಿಲ್ಲ ಎಂದು ನಾಳೆ ಡಿಸಿಎಂ ಡಿಕೆ ಶಿವಕುಮಾರ್ ಮನೆಯಲ್ಲಿ ಆಯೋಜನೆ ಮಾಡಿರುವ ನಾಟಿ ಕೋಳಿ ಬ್ರೇಕ್ ಫಾಸ್ಟ್ ಮೀಟಿಂಗ್ ಅನ್ನು ಮಾಜಿ ಸಿಎಂ ಡಿವಿ ಸದಾನಂದಗೌಡ ವ್ಯಂಗ್ಯವಾಡಿದ್ದಾರೆ.
ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕರ್ನಾಟಕ ರಾಜ್ಯದ ಜನರನ್ನೇ ಬಲಿ ಕೊಟ್ಟ ಮೇಲೆ ನಾಲ್ಕು ನಾಟಿ ಕೋಳಿಗಳನ್ನು ಬಲಿ ಕೊಟ್ಟರೆ ವ್ಯತ್ಯಾಸವೇನು? ಇವರ ಒಳ ಜಗಳದಿಂದ ರಾಜ್ಯದ ಜನರ ಹಿತಾಸಕ್ತಿ ಬಲಿಕೊಟ್ಟಿದ್ದಾರೆ ಅದೇ ರೀತಿ ನಾಳೆ 4 ಕೋಳಿಗಳ ಬಲಿಕೊಡುವುದು ನಿಶ್ಚಿತವಾಗಿದೆ ಎಂದರು.
ಈ ಕೋಳಿ ಬಲಿ ನಿರ್ಧಾರವನ್ನು ಇಬ್ಬರೂ ಸೇರಿ ಮಾಡಿರಬೇಕು ನಮ್ಮಲ್ಲಿ ಭೂತಾರಾಧನೆ ವೇಳೆ ಕೋಳಿಗಳನ್ನು ಬಲಿ ಕೊಟ್ಟು ಆರಾಧನೆ ಮಾಡುತ್ತಾರೆ ಭೂತವನ್ನು ಸಂಪ್ರೀತಗೊಳಿಸುವ ಕೆಲಸ ಮಾಡುತ್ತಾರೆ, ಆದರೆ ಇದು ಯಾವ ಭೂತಕ್ಕೆ ಇದನ್ನ ಬಲಿಕೊಟ್ಟು ಮಾಡುತ್ತಿದ್ದಾರೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಪ್ಲಾನ್ ಆಫ್ ಆಕ್ಷನ್ ಸರಿಯಾಗಿ ಇಲ್ಲದಿರುವುದೇ ಬೆಂಗಳೂರಿನ ಸಂಚಾರ ದಟ್ಟಣೆಗೆ ಪ್ರಮುಖ ಕಾರಣ. ಮೆಟ್ರೋ ಇತ್ಯಾದಿ ಬಳಕೆಯಿಂದಾಗಿ ಖಾಸಗಿ ವಾಹನ ಸಂಚಾರ ಹೆಚ್ಚಾಗಿಲ್ಲ.ಆದರೂ ಜಾಮ್ ಆಗುತ್ತಿದೆ, ರಸ್ತೆ ಗುಂಡುಗಳಿಂದಾಗಿ ಪದೇ ಪದೇ ಬ್ರೇಕ್ ಹಾಕುತ್ತಿರುವುದೇ ಸಂಚಾರದಟ್ಟಣೆಗೆ ಕಾರಣ, ಒಳ್ಳೆಯ ರೀತಿಯ ರಸ್ತೆಗಳನ್ನ ಕೊಟ್ಟರೆ ಇಷ್ಟು ದೊಡ್ಡ ರೀತಿಯಲ್ಲಿ ವಾಹನ ಸಂಚಾರ ದಟ್ಟಣೆ ಆಗುವುದಿಲ್ಲ ಇವರ ದುರಾಡಳಿತವೇ ಇದಕ್ಕೆಲ್ಲಾ ಕಾರಣ ಎಂದರು.

