ಬೆಂಗಳೂರು: ಶರಣರ ನಾಡು ಬೀದರ್ ಜಿಲ್ಲೆಯಲ್ಲಿ ವಚನ ಸಾಹಿತ್ಯದ ಸಂಶೋಧನೆ ಮತ್ತು ಪ್ರಸಾರಕ್ಕಾಗಿ ‘ವಚನ ಗ್ಲೋಬಲ್ ವಿಶ್ವವಿದ್ಯಾಲಯ’ ಸ್ಥಾಪಿಸಬೇಕೆಂಬ ದಶಕಗಳ ಕನಸಿಗೆ ಈಗ ಮರುಜೀವ ಬಂದಿದೆ. ಭಾಲ್ಕಿ ಹಿರೇಮಠದ ನಾಡೋಜ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರ ನೇತೃತ್ವದ ವಿವಿಧ ಮಠಾಧೀಶರ ನಿಯೋಗವು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಅಧಿಕೃತವಾಗಿ ಮನವಿ ಸಲ್ಲಿಸಿತು.
ಬೆಂಗಳೂರಿನ ಮುಖ್ಯಮಂತ್ರಿಯವರ ಗೃಹ ಕಚೇರಿ ‘ಕಾವೇರಿ’ಯಲ್ಲಿ ನಡೆದ ಈ ಭೇಟಿಯಲ್ಲಿ, ವಿಶ್ವವಿದ್ಯಾಲಯ ಸ್ಥಾಪನೆಗೆ ಅಗತ್ಯವಿರುವ ಭೂಮಿ ಮತ್ತು ಮೂಲಸೌಕರ್ಯಗಳ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು.
ನಿಯೋಗದಲ್ಲಿ ಯಾರಿದ್ದರು?:
ಈ ಸಂದರ್ಭದಲ್ಲಿ ಗದಗಿನ ಪೂಜ್ಯ ಶ್ರೀ ಜಗದ್ಗುರು ಡಾ. ತೋಟದ ಸಿದ್ದರಾಮಯ್ಯಗಳು, ಹಂದಿಗುಂದ ವಿರಕ್ತಮಠದ ಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿಗಳು, ಭಾಲ್ಕಿಯ ಕಿರಿಯ ಶ್ರೀಗಳು ಹಾಗೂ ಕುಂಬಳಗೋಡು ಬಸವ ಮಂಟಪದ ಶ್ರೀಗಳು ಉಪಸ್ಥಿತರಿದ್ದರು. ರಾಜಕೀಯ ಮುಖಂಡರಾದ ಸಚಿವರಾದ ಎಂ.ಬಿ. ಪಾಟೀಲ್, ಈಶ್ವರ ಖಂಡ್ರೆ ಹಾಗೂ ಶಾಸಕ ಬಿ.ಆರ್. ಪಾಟೀಲ್ ಅವರು ಮಠಾಧೀಶರ ಬೇಡಿಕೆಗೆ ಸಾಥ್ ನೀಡಿದರು.
ಬಸವಕಲ್ಯಾಣವು 12ನೇ ಶತಮಾನದ ಸಾಮಾಜಿಕ ಕ್ರಾಂತಿಯ ಕೇಂದ್ರಬಿಂದು. ಇಲ್ಲಿ ವಚನ ವಿಶ್ವವಿದ್ಯಾಲಯ ಸ್ಥಾಪನೆಯಾಗಬೇಕು ಎನ್ನುವುದು ಕೇವಲ ಶೈಕ್ಷಣಿಕ ಬೇಡಿಕೆಯಲ್ಲ, ಅದು ಸಾಂಸ್ಕೃತಿಕ ಅನಿವಾರ್ಯತೆಯೂ ಹೌದು. ಪ್ರಸ್ತುತ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ವಚನ ಅಧ್ಯಯನ ಕೇಂದ್ರಗಳಿವೆಯಾದರೂ, ಕೇವಲ ವಚನ ಸಾಹಿತ್ಯ ಮತ್ತು ಶರಣರ ಜೀವನ ದರ್ಶನಕ್ಕಾಗಿಯೇ ಪ್ರತ್ಯೇಕ ‘ಗ್ಲೋಬಲ್ ವರ್ಸಿಟಿ’ ಸ್ಥಾಪನೆಯಾದರೆ, ಜಾಗತಿಕ ಮಟ್ಟದಲ್ಲಿ ಲಿಂಗಾಯತ ಧರ್ಮದ ತತ್ವಗಳು ಪಸರಿಸಲಿವೆ.
ಈ ಹಿಂದೆ ಸರ್ಕಾರವು ಇದಕ್ಕೆ ತಾತ್ವಿಕ ಒಪ್ಪಿಗೆ ಸೂಚಿಸಿತ್ತಾದರೂ, ಅನುದಾನ ಮತ್ತು ತಾಂತ್ರಿಕ ಕಾರಣಗಳಿಂದ ಯೋಜನೆ ವಿಳಂಬವಾಗಿತ್ತು. ಈಗ ಮಠಾಧೀಶರು ಒಗ್ಗಟ್ಟಾಗಿ ಒತ್ತಡ ಹೇರಿರುವುದು ಮುಂಬರುವ ಬಜೆಟ್ನಲ್ಲಿ ಈ ಯೋಜನೆಗೆ ದೊಡ್ಡ ಮೊತ್ತದ ಹಣ ಮೀಸಲಿಡುವಂತೆ ಮಾಡುವ ಸಾಧ್ಯತೆಯಿದೆ.
ಮುಖ್ಯಮಂತ್ರಿಗಳ ಸ್ಪಂದನೆ:
ಮನವಿ ಸ್ವೀಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ವಚನ ಸಾಹಿತ್ಯವು ನಾಡಿನ ಆಸ್ತಿಯಾಗಿದ್ದು, ಅದರ ಅಧ್ಯಯನಕ್ಕೆ ಪೂರಕವಾದ ವಿಶ್ವವಿದ್ಯಾಲಯ ಸ್ಥಾಪನೆಯ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

