Fri. Mar 6th, 2026

ಯೋಗಭ್ಯಾಸ ಮನುಷ್ಯನ ಮಾನಸಿಕ, ದೈಹಿಕ ಸ್ವಾಸ್ಥ್ಯಕ್ಕೆ ಅನುಕೂಲ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

Share this with Friends

ಬೆಂಗಳೂರು:ಒತ್ತಡದ ಬದುಕನ್ನು ನಿರ್ವಹಣೆ ಮಾಡಲು ಯೋಗ ಅತ್ಯಂತ ಪರಿಣಾಮಕಾರಿಯಾಗಿದ್ದು,ಯೋಗಭ್ಯಾಸ ಮನುಷ್ಯನ ಮಾನಸಿಕ, ದೈಹಿಕ ಸ್ವಾಸ್ಥ್ಯಕ್ಕೆ ಅನುಕೂಲಕರವಾಗಿದೆ ಹಾಗಾಗಿ ಎಲ್ಲರೂ ಯೋಗಾಭ್ಯಾಸ ರೂಢಿಸಿಕೊಳ್ಳಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಬೆಂಗಳೂರಿನ ಜಿಕೆವಿಕೆಯಲ್ಲಿ ನಡೆದ ಗ್ಲೋಬಲ್ ಯೋಗ ಸಮ್ಮಿಟ್ ನಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಪಂಚದಾದ್ಯಂತ ಯೋಗ ಅತ್ಯಂತ ಜನಪ್ರಿಯವಾಗಿದೆ. ಯಾಕೆಂದರೆ ಆರೋಗ್ಯಪೂರ್ಣ ಬದುಕಿಗೆ ಯೋಗ ಸಹಕಾರಿ. ಯೋಗಾಭ್ಯಾಸ ಪ್ರಾರಂಭಿಸಿದರೆ ಸಹಜವಾಗಿ ಸಮತೋಲಿತ ಹಿತಮಿತವಾದ ಆಹಾರ ಪದ್ಧತಿ, ಸಹಜವಾಗಿಯೇ ದುರಾಭ್ಯಾಸಗಳಿಂದ ದೂರ ಇರುತ್ತಾರೆ. ಸಂಯಮದಿಂದ ಕೂಡಿದ ಬದಕು ಅವರದ್ದಾಗಿರುತ್ತದೆ. ಬದುಕಿನಲ್ಲಿ ಸುಖ ದುಃಖವನ್ನು ಸಮಾನವಾಗಿ ಸ್ವೀಕರಿಸಬೇಕು. ಕೆಲವೊಮ್ಮೆ ಅತಿಯಾದ ಸುಖಮಯ ಬದುಕು ಸಮಸ್ಯೆ ತಂದೊಡ್ಡುತ್ತದೆ. ದುಃಖದಿಂದ ಖಿನ್ನತೆಗೆ ಜಾರುವ ಸಾಧ್ಯತೆ ಇರುತ್ತದೆ. ಯೋಗಾಭ್ಯಾಸದಿಂದ ಇವೆರಡನ್ನು ನಿಭಾಸಲು ಸಹಾಯಕವಾಗುತ್ತದೆ ಎಂದರು.

ವಿಜ್ಞಾನ ಸಾಕಷ್ಟು ಮುಂದುವರೆದಿದೆ, ಬದುಕಿನ ಮಟ್ಟ ಹೆಚ್ಚಾಗಿದೆ, ಶಿಕ್ಷಣದಲ್ಲೂ ಮುಂದುವರೆದಿದ್ದೇವೆ. ಇಷ್ಟೆಲ್ಲ ಆದರೂ ಯೋಗ ಪ್ರಸ್ತುತವಾಗಿದೆ. ಯಾಕೆಂದರೆ ಒತ್ತಡದ ಬದುಕನ್ನು ನಿರ್ವಹಣೆ ಮಾಡಲು ಯೋಗ ಅತ್ಯಂತ ಪರಿಣಾಮಕಾರಿ. ಪಾಶ್ಚಾತ್ಯ ದೇಶಗಳು ಸಹ ಇದನ್ನು ಅಳವಡಿಸಿಕೊಳ್ಳುತ್ತಿವೆ. ಬದುಕಿಗೆ ಅರ್ಥ ಇರಬೇಕು. ಯಾವ ರೀತಿಯ ಬದುಕು, ಯಾಕಾಗಿ ಬದುಕಬೇಕು ಎನ್ನುವುದನ್ನು ಭಾರತೀಯ ಋಷಿಮುನಿಗಳು ತಿಳಿಸಿಕೊಟ್ಟಿದ್ದಾರೆ ಎಂದು ಹೇಳಿದರು.


Share this with Friends

Related Post