ಹುಬ್ಬಳ್ಳಿ: ಮಹಿಳೆಯರಿಗೆ ತಿಂಗಳಿಗೆ ಎರಡು ಸಾವಿರ ಕೊಟ್ಟು ಬಾಯಿ ಮುಚ್ಚಿಸಲು ಸಾಧ್ಯವಿಲ್ಲ. ಮಹಿಳೆಯರಿಗೆ ಸುರಕ್ಷತೆ ನೀಡದೆ ಮಕ್ಕಳು ಮನೆಗೆ ಬರದಂತಹ ಪರಿಸ್ಥಿತಿ ನಿರ್ಮಾಣ ಮಾಡಿ ಎರಡು ಸಾವಿರ ಕೊಟ್ಟರೆ ಅವರು ಸುಮ್ಮನಿರುತ್ತಾರೆಯೇ ಎಂದು ಸರ್ಕಾರದ ವಿರುದ್ಧ ಸಂಸದ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದು,ಮಹಿಳೆಯರು ಅನ್ಯಾಯದ ವಿರುದ್ದ ಕಿತ್ತೂರು ಚೆನ್ನಮ್ಮ, ದುರ್ಗಾದೇವಿ ರೀತಿ ಆಗಬೇಕು ಎಂದು ಕರೆ ನೀಡಿದರು.
ಭಾರತೀಯ ಜನತಾ ಪಾರ್ಟಿ ಕರ್ನಾಟಕ ಮಹಿಳಾ ಮೋರ್ಚಾದ ವತಿಯಿಂದ ಇಂದು ಹುಬ್ಬಳ್ಳಿಯ ಅರವಿಂದ ನಗರದಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯಾಲಯದಲ್ಲಿ ಉತ್ತರ ಕರ್ನಾಟಕ ವಿಭಾಗದ ಮಹಿಳಾ ಮೋರ್ಚಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮುಂದಿನ ಪೀಳಿಗೆಯನ್ನು ಸುಸಂಸ್ಕೃತ ಮಾಡುವುದರಲ್ಲಿ ತಾಯಂದಿರ ಪಾತ್ರ ಬಹಳ ಮುಖ್ಯವಾಗಿದೆ. ತಾಯಿತನ ಅತ್ಯಂತ ಶ್ರೇಷ್ಟವಾಗಿದೆ. ನಾವು ಭೂಮಿಗೆ ಬರುವ ಮುಂಚೆ ಇರುವುದು ತಾಯಿಯ ಸಂಬಂಧ’. ಉಳಿದ ಸಂಬಂಧಗಳು ನಾವು ಹುಟ್ಟಿದ ನಂತರ ಬರುತ್ತವೆ. ಆ ತಾಯಿತನ ಎಲ್ಲವನ್ನು ಕಲಿಸಿಕೊಡುತ್ತದೆ ಎಂದು ಹೇಳಿದರು.
ಈಗ ನಿಮ್ಮ ನಾಯಕತ್ವದ ಗುಣಗಳನ್ನು ತೋರಿಸಿದರೆ 2030 ಕ್ಕೆ ಬರುವಂತಹ ಮೀಸಲಾತಿಯಲ್ಲಿ ತಾಯಂದಿರಿಗೆ ನಾಯಕತ್ವ ತೋರಿಸಲು ಆವಕಾಶ’ ಸಿಗುತ್ತದೆ. ಭಾರತದ ಸುಸಂಸ್ಕೃತಿ ಸಂಸ್ಕಾರ ಯಾವುದಾದರೂ ರಾಜಕೀಯ ಪಕ್ಷದಲ್ಲಿ ಇದ್ದರೆ ಅದು ಬಿಜೆಪಿಯಲ್ಲಿದೆ. ನೀವು ಯಶಸ್ವಿ ಗೃಹಿಣಿಯರಾಗಿ, ತಾಯಂದಿರಾಗಿ ನಿಮ್ಮ ನೈತಿಕತೆಯನ್ನು ಉಳಿಸಿಕೊಂಡು ಬಿಜೆಪಿಯಲ್ಲಿ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸಲು ಬಂದಿದ್ದೀರಿ. ಶೇ 50 ರಷ್ಟಿರುವ ಮಹಿಳಾ ಶಕ್ತಿ ಭಾರತವನ್ನು ಇಡೀ ವಿಶ್ವದಲಿಯೇ ಉನ್ನತ ಸ್ಥಾನಕ್ಕೆ ತೆಗೆದುಕೊಂಡು ಹೋಗುವ ಶಕ್ತಿ ಹೊಂದಿದೆ. ಶೇ 50 ರಷ್ಟು ಅವಕಾಶ ಕೊಟ್ಟರೂ ಭಾರತ ಅಭಿವೃದ್ಧಿಯಾಗುತ್ತದೆ. ಹತ್ತು ವರ್ಷದಲ್ಲಿ ಆಗಬೇಕಾದ ಕೆಲಸ ಐದು ವರ್ಷದಲ್ಲಿ ಆಗಬೇಕೆಂದರೆ ಮಹಿಳೆಯರಿಗೆ ಅವಕಾಶ ಕೊಡಬೇಕು. ಭಾರತದ ಮಹಿಳೆ ಅಬಲೆಯಲ್ಲ ಸಬಲೆ, ಅವಕಾಶ ಸಿಕ್ಕರೆ ಏನೆಲ್ಲ ಮಾಡಬಹುದು ಎನ್ನುವುದನ್ನು ಇತಿಹಾಸದಲ್ಲಿ ಕಿತ್ತೂರು ಚೆನ್ನಮ್ಮ, ಝಾನ್ಸಿರಾಣಿ ಲಕ್ಷ್ಮೀ ಬಾಯಿ ತೋರಿಸಿಕೊಟ್ಟಿದ್ದಾರೆ. ಮೊಗಲರ ಕಾಲದಲ್ಲಿ ನಮ್ಮ ಮಹಿಳೆಯರ ಮೇಲೆ ಅತ್ಯಾಚಾರ, ಅನಾಚಾರ ನಡೆದರೂ ಅದನ್ನು ಸಹಿಸಿಕೊಂಡು ಈ ದೇಶದ ಸಿಂಧೂರ ಉಳಿಸಿಕೊಂಡು ಬಂದಿರುವುದು ನಮ್ಮ ತಾಯಂದಿರು. ಮಹಿಳೆಯರು ಎಲ್ಲ ರಂಗದಲ್ಲಿಯೂ ಇದ್ದಾರೆ. ನಾಸಾದಲ್ಲಿ ಹೆಚ್ಚು ಭಾರತಿಯರಿದ್ದರೆ ಇಸ್ರೋದಲ್ಲಿ ಐವತ್ತರಷ್ಟು ಮಹಿಳೆಯರಿದ್ದಾರೆ. ನಿಮ್ಮಲ್ಲಿ ಪ್ರಾಮಾಣಿಕತೆ, ನಿಷ್ಠೆ ಇರುತ್ತದೆ ಎಂದ ಹೇಳಿದರು.
ಆಂದೋಲನ ನಡೆಯಲಿ:
ನಮ್ಮತನ ರಕ್ಷಣೆ ಮಾಡುವ ಕಾಲ ಬಂದಿದೆ. ಹಿಂದೂ ಸಮಾಜ ತನ್ನಷ್ಟಕ್ಕೆ ತಾನೇ ಸ್ವಾಭಿಮಾನದಿಂದ ದುಡಿದು ಮುಂದೆ ಬರುತ್ತಿದ್ದರೆ ಕೆಲವರಿಗೆ ಸಹಿಸಿಕೊಳ್ಳಲು ಆಗುವುದಿಲ್ಲ. ಕರ್ನಾಟಕದಲ್ಲಿ ಮಹಿಳೆರಯಿಗೆ ಸುರಕ್ಷತೆ ಇಲ್ಲ. ಪ್ರತಿ ದಿನ ಅತ್ಯಾಚಾರ, ದೌರ್ಜನ್ಯ, ಆತ್ಮಹತ್ಯೆ, ಕೊಲೆ ನಿರಂತರ ನಡೆಯುತ್ತಿವೆ. ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣದಿಂದ ಹಿಡಿದು ಈ ಸರ್ಕಾರದಲ್ಲಿ ಇಂದಿಗೂ ನಿಂತಿಲ್ಲ. ಇದರ ವಿರುದ್ಧ ಸಾಮಾಜಿಕ ಜಾಗೃತಿ ಮಾಡಬೇಕು. ಮಹಿಳೆಯರಿಗೆ ತಿಂಗಳಿಗೆ ಎರಡು ಸಾವಿರ ಕೊಟ್ಟು ಬಾಯಿ ಮುಚ್ಚಿಸಲು ಸಾಧ್ಯವಿಲ್ಲ. ಮಹಿಳೆಯರು ಸುರಕ್ಷತೆ ನೀಡದೆ ಮಕ್ಕಳು ಮನೆಗೆ ಬರದಂತಹ ಪರಿಸ್ಥಿತಿ ನಿರ್ಮಾಣ ಮಾಡಿ ಎಡರು ಸಾ ವಿರ ಕೊಟ್ಟರೆ ಅವರು ಸುಮ್ಮನಿರುತ್ತಾರೆಯೇ. ಗೃಹ ಸಚಿವರು ಅಂಕಿ ಸಂಖ್ಯೆಗಳ ಮೂಲಕ ಎಲ್ಲವನ್ನು ಮುಚ್ಚಿ ಹಾಕಲು ಸಾಧ್ಯವಿಲ್ಲ. ಗೃಹ ಸಚಿವರ ಕೈಯಲ್ಲಿ ಗೃಹ ಇಲಾಖೆ ಇಲ್ಲ. ಪ್ರತಿ ದಿನ ಸಾಕಷ್ಟು ಘಟನೆಗಳು ನಡೆಯುತ್ತವೆ. ಆದನ್ನು ನಿಲ್ಲಿಸಲು ಆಗುತ್ತಿಲ್ಲ. ಜನರು ಇದಿದ್ದು ಇದ್ದಂಗ ಮಾತನಾಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲು ಕಾನೂನು ತಂದಿದ್ದಾರೆ. ಮಹಿಳೆಯರ ಸುರಕ್ಷತೆಗೆ ಏನಾದರೂ ಕಾನೂನು ತನ್ನಿ. ಕೇಂದ್ರ ಸರ್ಕಾರ ನಿರ್ಭಯ ಯೋಜನೆ ಅಡಿಯಲ್ಲಿ ಮಹಿಳೆಯರ ರಕ್ಷಣೆಗೆ ಹಣ ನೀಡುತ್ತದೆ ಅದನ್ನು ಬಳಸಿಕೊಳ್ಳಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಕೇಂದ್ರ ಸರ್ಕಾರದ ಸಂಜೀವಿನಿ ಯೋಜನೆ ಮಹಿಳಾ ಸಂಘಟನೆಗೆ ನೀಡುವುದು ಅದನ್ನು ನಿಲಿಸಿದ್ದಾರೆ. ನಾನು ಸಿಎಂ ಇದ್ದಾಗ ಮಹಿಳಾ ಸಂಘಗಳಿಗೆ ಪ್ರತಿ ವರ್ಷ ಒಂದು ಲಕ್ಷ ನೀಡುವ ಸಾಮರ್ಥ್ಯ ಯೋಜನೆ ಮಾಡಿದ್ದೆ ಅದನ್ನು ನಿಲ್ಲಿಸಿದ್ದಾರೆ. ಮಕ್ಕಳಿಗೆ ಅತ್ಯಂತ ಕಳಪೆ ಮಟ್ಟದ ಊಟ ಕೊಡುತ್ತಿದ್ದಾರೆ. ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಯುತ್ತಿದೆ ಎಂಎಂಆರ್, ಮತ್ತು ಐಎಂಆರ್. ಮದರ್ ಮಾರ್ಟಿಲಿಟಿ ರೇಸಿಯೋ, ಇನ್ಫಾಂಟ್ ಮಾರ್ಟಿಲಿಟಿ ರೇಷಿಯೋ, ಒಂದು ಸಾವಿರಕ್ಕೆ ಎಷ್ಟು ತಾಯಂದಿರು ಮತ್ತು ಎಷ್ಟು ಮಕ್ಕಳು ಸಾಯುತ್ತಾರೆ ಎಂದರೆ ಕರ್ನಾಟಕದಲ್ಲಿಯೇ ಹೆಚ್ಚಾಗಿದೆ. ನಮ್ಮ ಅವಧಿಯಲ್ಲಿ ಕಡಿಮೆ ಇತ್ತು. ಈಗ ಮತ್ತೆ ಹೆಚ್ಚಾಗಿದೆ. ಉತ್ತರ ಕರ್ನಾಟಕದಲ್ಲಿ ವಿಶೇಷವಾಗಿ ರಾಯಚೂರಿನಲ್ಲಿ ಅತಿ ಹೆಚ್ಚು ತಾಯಿ ಮತ್ತು ಮಕ್ಕಳು ಸಾಯುತ್ತಿದ್ದಾರೆ. ಮುಂದಿನ ಪೀಳಿಗೆಯನ್ನು ನಾಶಮಾಡುವ ಕೆಲಸವನ್ನು ಈ ಸರ್ಕಾರ ಮಾಡುತಿದೆ. ಮಹಿಳೆಯುರ ಮಕ್ಕಳು ಸಾಮಜಿಕ ನ್ಯಾಯ, ಮಹಿಳಾ ಸಬಲೀಕರಣ, ಮಹಿಳೆಯರ ಆರ್ಥಿಕತೆ ನಿಮ್ಮ ಹೋರಾಟ ಆಗಬೇಕು. ನೀವು ಬೀದಿಗಿಳಿದು ಹೋರಾಟ ಮಾಡಿದರೆ ಜಗತ್ತಿನ ಯಾವುದೇ ಶಕ್ತಿ ತಡೆಯಲು ಸಾಧ್ಯವಿಲ್ಲ. ಸರ್ಕಾರಕ್ಕೆ ಎರಡು ಸಾವಿರ ಕೊಟ್ಟರೆ ಯಾರೂ ಏನೂ ಕೇಳುವುದಿಲ್ಲ ಎನ್ನುವ ಭ್ರಮೆ ಇದೆ. ದುಡಿಯುವ ಮಹಿಳೆಗೆ ಹಲವಾರು ಸಮಸ್ಯೆಗಳಿವೆ. ತಾವೆಲ್ಲ ವೀರರಾಣಿ ಕಿತ್ತೂರು ಚೆನ್ನಮ್ಮ, ದುರ್ಗಾದೇವಿ ಆಗಬೇಕು. ಮಹಾಲಕ್ಷ್ಮೀ ಸರಸ್ವತಿ ಆದರೆ ಎಲ್ಲರೂ ಬಂದು ನಮಸ್ಕಾರ ಮಾಡುತ್ತಾರೆ. ನಾವು ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಮನೆಯೊಳಗೆ ಆಗದಿದ್ದರೂ ಹೊರಗೆ ದುರ್ಗಾ ಆಗಲೇಬೇಕು. ಎಲ್ಲಿ ಅನ್ಯಾಯ ನಡೆಯುತ್ತದೆ’ ಅಲ್ಲಿ ನೀವು ಇರಬೇಕು. ನೀವು ಅಲ್ಲಿಗೆ ಹೋದರೆ ವಾತಾವರಣ ಬೇರೆ ಆಗುತ್ತದೆ. ಅಧಿಕಾರಿಗಳ ನಡವಳಿಗೆ ಬದಲಾಗುತ್ತದೆ. ನ್ಯಾಯ ಸಿಗುತ್ತದೆ. ನಾವು ನಿಮ್ಮ ಬೆನ್ನಿಗೆ ನಿಲ್ಲುತ್ತೇವೆ. ಇದೊಂದು ದೊಡ್ಡ ಆಂದೋಲನ ಮಾಡಿ ಪರಿವರ್ತನೆ ತರಬೇಕು. ಮುಂದೆ ಯಾವುದೇ ಸರ್ಕಾರ ಬಂದರೂ ಮಹಿಳೆಗೆ ಅನ್ಯಾಯ ಅತ್ಯಾಚಾರ ಆಗಬಾರದು, ಅಕ್ಕ ಮಹಾದೇವಿ, ಬಸವಣ್ಣ, ಚೆನ್ನಮ್ಮ ಶೃಂಗೇರಿಯ ಶಾರದಾಂಬೆಯ ನಾಡಿನಲ್ಲಿ ಅತ್ಯಂತ ಸುರಕ್ಷಿತವಾಗಿ ನಿಮ್ಮ ಕಾಯಕ ಮಾಡಿ ಮೊದಲು ದುರ್ಗಾ ಆಗಿ, ನಂತರ ಶಾರದಾಂಬೆ, ಮಹಾಲಕ್ಷ್ಮೀ, ಮಹಾಸರಸ್ವತಿ ಆಗಬೇಕು ಎಂದು ಹೇಳಿದರು.

