Fri. Mar 6th, 2026

ಈಜು ಕೊಳದಲ್ಲಿ ಮುಳುಗಿ ಮೈಸೂರಿನ ಮೂವರು ಯುವತಿಯರು ಸಾವು

Share this with Friends

ಮಂಗಳೂರು: ಸ್ವಿಮ್ಮಿಂಗ್ ಪೂಲ್ ನಲ್ಲಿ ಈಜಲು ಹೋದ ಮೈಸೂರಿನ ಮೂವರು ಯುವತಿಯರು ನೀರಿನಲ್ಲಿ ಮುಳುಗಿ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಉಲ್ಲಾಳದ ಖಾಸಗಿ ರೆಸಾರ್ಟ್ ನಲ್ಲಿ ನಡೆದಿದೆ.

ಮೈಸೂರಿನ ಕುರುಬರಹಳ್ಳಿ ನಾಲ್ಕನೆ ಕ್ರಾಸ್ ನಿವಾಸಿ ನಿಷಿತ ಎಂ. ಡಿ(21) ಕೆ.ಆರ್ ಮೊಹಲ್ಲ ರಾಮಾನುಜ ರಸ್ತೆ‌ ವಾಸಿ ಪಾರ್ವತಿ ಎಸ್(20), ದೇವರಾಜ ಮೊಹಲ್ಲಾದ ಕೀರ್ತನ ಎನ್(21) ಮೃತಪಟ್ಟ ದುರ್ದೈವಿಗಳು.

ಮಂಗಳೂರಿನ ಉಳ್ಳಾಲದ ಉಚ್ಚಿಲ ಬೀಚ್ ಬಳಿ ಇರುವ ಖಾಸಗಿ ರೆಸಾರ್ಟ್​ನ ಈಜುಕೊಳದಲ್ಲಿ ಈ ಮೂರೂ ಯುವತಿಯರು ಮುಳುಗಿ ಮೃತಪಟ್ಟಿದ್ದು
ಘಟನೆ ಸುಮಾರು 9.30ರ ವೇಳೆಯಲ್ಲಿ ನಡೆದಿದೆ.

ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಸೋಮೇಶ್ವರ ಗ್ರಾಮದ ಬಟ್ಟಪ್ಪಾಡಿ ಅಡ್ಡರಸ್ತೆ ಪೆರಿಬೈಲ್ ಸಮೀಪ ಇರುವ ವಾಸ್ಗೊ ರೆಸಾರ್ಟ್‌ನಲ್ಲಿ ಘಟನೆ ನಡೆದಿದೆ.

ಒಬ್ಬ ಯುವತಿ ಮುಳುಗುತ್ತಿದ್ದನ್ನು ಕಂಡು ಆಕೆಯ ರಕ್ಷಣೆಗೆ ಹೋದ ಮತ್ತಿಬ್ಬರು ಯುವತಿಯರು ಮೃತಪಟ್ಟಿದ್ದಾರೆ.

ರಜೆ ಇದ್ದ ಕಾರಣ ಪ್ರವಾಸಕ್ಕೆ ಉಳ್ಳಾಲಕ್ಕೆ ಆಗಮಿಸಿದ್ದ ಯುವತಿಯರು ರೆಸಾರ್ಟ್‌ನಲ್ಲಿ ತಂಗಿದ್ದರು‌. ಬೆಳಿಗ್ಗೆ ಮೂವರೂ ಈಜುಕೊಳಕ್ಕೆ ಇಳಿದಿದ್ದು ಇದರ ವಿಡಿಯೋ ಸೆರೆ ಹಿಡಿಯಲು ತಮ್ಮ ಮೊಬೈಲ್​ ರೆಕಾರ್ಡ್ ಮೋಡ್‌ನಲ್ಲಿಟ್ಟಿದ್ದರು. ಯುವತಿಯರು ಈಜುಕೊಳದಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿರುವ ವಿಡಿಯೋ ರೆಸಾರ್ಟ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಉಳ್ಳಾಲ ಪೊಲೀಸ್​​ ಇನ್ಸ್‌ಪೆಕ್ಟರ್​ ಹೆಚ್.ಎನ್.ಬಾಲಕೃಷ್ಣ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಪೋಸ್ಟ್ ಮಾರ್ಟಮ್ ಮಾಡಿಸಿ ವಾರಸುದಾರರಿಗೆ ತಲುಪಿಸಲು ಕ್ರಮ ಕೈಗೊಂಡರು.


Share this with Friends

Related Post