ಬೆಂಗಳೂರು: ರಾಜ್ಯದ ಶಕ್ತಿಕೇಂದ್ರವಾದ ವಿಧಾನಸೌಧದ ಒಳಗೆ ಮಾಧ್ಯಮ ಪ್ರತಿನಿಧಿಗಳ ಮುಕ್ತ ಸಂಚಾರ ಮತ್ತು ವರದಿಗಾರಿಕೆಗೆ ರಾಜ್ಯ ಸರ್ಕಾರವು ಬುಧವಾರ (ಫೆಬ್ರವರಿ 18, 2026) ಹೊಸ ನಿರ್ಬಂಧಗಳನ್ನು ಹೇರಿದೆ. ಭದ್ರತೆ ಮತ್ತು ಆಡಳಿತಾತ್ಮಕ ಶಿಸ್ತಿನ ನೆಪವೊಡ್ಡಿ ಈ ಆದೇಶ ಹೊರಡಿಸಲಾಗಿದ್ದು, ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕುವ ಪ್ರಯತ್ನ ಎಂದು ವ್ಯಾಪಕ ಟೀಕೆ ವ್ಯಕ್ತವಾಗಿದೆ.
ನಿಗದಿತ ಸ್ಥಳದಲ್ಲಿ ಮಾತ್ರ ಬೈಟ್: ಮಾಧ್ಯಮದವರು ಇನ್ನು ಮುಂದೆ ವಿಧಾನಸೌಧದ ಕಾರಿಡಾರ್ಗಳಲ್ಲಿ ಅಥವಾ ಸಚಿವರ ಕೊಠಡಿಗಳ ಮುಂದೆ ರಾಜಕೀಯ ನಾಯಕರ ಪ್ರತಿಕ್ರಿಯೆ ಪಡೆಯುವಂತಿಲ್ಲ. ಕೇವಲ ಪಶ್ಚಿಮ ದ್ವಾರದ (ಕೆಂಗಲ್ ಗೇಟ್) ಪೋರ್ಟಿಕೋ ಬಳಿ ನಿಗದಿಪಡಿಸಿದ ಸ್ಥಳದಲ್ಲಿ ಮಾತ್ರ ವರದಿಗಾರಿಕೆಗೆ ಅವಕಾಶ ನೀಡಲಾಗಿದೆ.
ಹಿಂಬಾಲಿಸುವಂತಿಲ್ಲ: ಮುಖ್ಯಮಂತ್ರಿಗಳು, ಸಚಿವರು ಅಥವಾ ಶಾಸಕರು ಸಂಕೀರ್ಣದೊಳಗೆ ಸಂಚರಿಸುವಾಗ ಮಾಧ್ಯಮದವರು ಅವರನ್ನು ಹಿಂಬಾಲಿಸಿ (Follow) ಹೇಳಿಕೆ ಪಡೆಯುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಗುರುತಿನ ಚೀಟಿ ಕಡ್ಡಾಯ: ವಾರ್ತಾ ಇಲಾಖೆಯ ಅಧಿಕೃತ ಮಾನ್ಯತೆ ಪಡೆದ ಪತ್ರಕರ್ತರಿಗೆ ಮಾತ್ರ ಈ ನಿಗದಿತ ಸ್ಥಳ ಪ್ರವೇಶಿಸಲು ಅನುಮತಿ ಇರುತ್ತದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (DPAR) ಹೊರಡಿಸಿರುವ ಈ ಆದೇಶದ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಚಲುವರಾಯಸ್ವಾಮಿ ಅವರು, “ಮಾಧ್ಯಮಗಳ ನಿಯಂತ್ರಣದ ಬಗ್ಗೆ ತಮಗೆ ಹೆಚ್ಚಿನ ಮಾಹಿತಿ ಇಲ್ಲ. ಒಂದು ವೇಳೆ ಇಂತಹ ಆದೇಶ ಜಾರಿಯಾಗಿದ್ದರೆ ಇದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸರಿಪಡಿಸಲಾಗುವುದು,” ಎಂದು ತಿಳಿಸಿದ್ದಾರೆ.
ವಿಪಕ್ಷಗಳ ಆಕ್ರೋಶ:
ಸರ್ಕಾರದ ಈ ನಡೆಯನ್ನು ಪ್ರತಿಪಕ್ಷಗಳು ತೀವ್ರವಾಗಿ ಖಂಡಿಸಿವೆ. “ಇದು ಮಾಧ್ಯಮಗಳ ಧ್ವನಿಯನ್ನು ಹತ್ತಿಕ್ಕುವ ಕೆಲಸ. ಭದ್ರತೆಯ ನೆಪದಲ್ಲಿ ಪಾರದರ್ಶಕತೆಯನ್ನು ಕಸಿಯಲಾಗುತ್ತಿದೆ” ಎಂದು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

