ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ಕ್ರೀಡಾಕೂಟಗಳಲ್ಲಿ ಒಂದಾದ ‘ತುರಹಳ್ಳಿ ಕಪ್-2026’ ಇಂಟರ್ ಅಪಾರ್ಟ್ಮೆಂಟ್ ಕ್ರಿಕೆಟ್ ಪಂದ್ಯಾವಳಿಯು ಫೆಬ್ರವರಿ 21ರ ಶನಿವಾರ ಆಯೋಜನೆಗೊಂಡಿದೆ.
ಅದ್ದೂರಿಯಾಗಿ ನಡೆಯಲಿರುವ ಈ ಕ್ರೀಡಾಕೂಟಕ್ಕೆ ಶನಿವಾರ ಮಧ್ಯಾಹ್ನ 3 ಗಂಟೆಗೆ ಬನಶಂಕರಿಯ ಎನ್.ಪಿ.ಎಸ್ ಶಾಲೆಯ ಕೈಟ್ಸ್ ಅಕಾಡಮಿಯಲ್ಲಿ ಚಾಲನೆ ಸಿಗಲಿದ್ದು, ನಂತರ ಪಂದ್ಯಾವಳಿಗಳು ನಡೆಯಲಿವೆ. ವಿವಿಧ ಅಪಾರ್ಟ್ಮೆಂಟ್ಗಳ ನಿವಾಸಿಗಳ ನಡುವೆ ಸೌಹಾರ್ದತೆ ಮತ್ತು ಕ್ರೀಡಾ ಮನೋಭಾವವನ್ನು ಬೆಳೆಸುವ ನಿಟ್ಟಿನಲ್ಲಿ ಈ ಪಂದ್ಯಾವಳಿಯನ್ನು ಕರ್ನಾಟಕ ರಕ್ಷಣಾ ವೇದಿಕೆ ಸಿಂಹಪಡೆ ಆಯೋಜಿಸಿದೆ.
ಗಣ್ಯರ ಉಪಸ್ಥಿತಿ:

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ. ಕೃಷ್ಣಪ್ಪ, ಸಂಸದರಾದ ಡಾ. ಸಿ.ಎನ್. ಮಂಜುನಾಥ್, ಉತ್ತರಹಳ್ಳಿ ವಾರ್ಡ್ನ ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಎಂ. ಹನುಮಂತಯ್ಯ, ಸಮ್ಯಕ್ ದೃಷ್ಟಿ ಕಣ್ಣಿನ ಆಸ್ಪತ್ರೆಯ ಸಂಸ್ಥಾಪಕರು ಹಾಗೂ ಖ್ಯಾತ ನೇತ್ರ ತಜ್ಞರಾದ ಡಾ.ಶ್ವೇತಾ ಜೈನ್ ಮತ್ತು ನಟ ದಲೀಪ್ ರಾಜು ಅವರು ಭಾಗವಹಿಸಿ ಕ್ರೀಡಾಪಟುಗಳನ್ನು ಹುರಿದುಂಬಿಸಲಿದ್ದಾರೆ.

ಈ ಕ್ರಿಕೆಟ್ ಹಬ್ಬದಲ್ಲಿ ಬೆಂಗಳೂರಿನ ಅನೇಕ ಪ್ರಮುಖ ಅಪಾರ್ಟ್ಮೆಂಟ್ಗಳ ತಂಡಗಳು ಪಾಲ್ಗೊಳ್ಳುತ್ತಿದ್ದು, ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪಂದ್ಯಾವಳಿಯನ್ನು ಯಶಸ್ವಿಗೊಳಿಸಬೇಕೆಂದು ಸಂಘಟಕರು ಮನವಿ ಮಾಡಿದ್ದಾರೆ.

