Sat. Jun 6th, 2026

‘ಲವ್ ಮಾಕ್ಟೇಲ್ 3’ ಕಥೆ ವಿವಾದ: ಗುರು ದೇಶಪಾಂಡೆ, ರಾಘವೇಂದ್ರ ನಾಯಕ್ ವಿರುದ್ಧ ಕಾನೂನು ಹೋರಾಟಕ್ಕೆ ಡಾರ್ಲಿಂಗ್ ಕೃಷ್ಣ ಸಜ್ಜು!

Share this with Friends

ಬೆಂಗಳೂರು: ‘ಲವ್ ಮಾಕ್ಟೇಲ್ 3’ ಚಿತ್ರದ ಕಥೆ ಕೃತಿಚೌರ್ಯವಾಗಿದೆ ಎಂದು ಆರೋಪಿಸಿರುವ ನಿರ್ಮಾಪಕ ಗುರು ದೇಶಪಾಂಡೆ ಮತ್ತು ನಿರ್ದೇಶಕ ರಾಘವೇಂದ್ರ ಎಂ. ನಾಯಕ್ ಅವರಿಗೆ ನಟ-ನಿರ್ದೇಶಕ ಡಾರ್ಲಿಂಗ್ ಕೃಷ್ಣ ಈಗ ಕಾನೂನು ಶಾಕ್ ನೀಡಲು ಮುಂದಾಗಿದ್ದಾರೆ. ಆಧಾರರಹಿತವಾಗಿ ತಮ್ಮ ಮೇಲೆ ಕಥೆ ಕಳ್ಳತನದ ಆರೋಪ ಮಾಡಿರುವ ಇಬ್ಬರ ವಿರುದ್ಧವೂ ‘ಮಾನನಷ್ಟ ಮೊಕದ್ದಮೆ’ (Defamation Case) ಹೂಡುವುದಾಗಿ ಕೃಷ್ಣ ಗುಡುಗಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಥೆಯ ಪೇಟೆಂಟ್ ವಿಚಾರವಾಗಿ ಬಹಿರಂಗವಾಗಿಯೇ ಸವಾಲು ಹಾಕಿದರು, “ನನ್ನ ವಿರುದ್ಧ ಕೃತಿಚೌರ್ಯದ ಆರೋಪ ಮಾಡುತ್ತಿರುವವರು ಮೊದಲು ತಮ್ಮ ಬಳಿ ಇರುವ ದಾಖಲೆಗಳನ್ನು ತೋರಿಸಲಿ. ಕಥೆ ನಿಮ್ಮದು ಎನ್ನಲು ನೀವು ಕೋರ್ಟ್‌ನಲ್ಲಿ ಪೇಟೆಂಟ್ ಪಡೆದಿದ್ದೀರಾ?” ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೆ, ಸುಳ್ಳು ಆರೋಪಗಳ ಮೂಲಕ ತಮ್ಮ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಯತ್ನಿಸುತ್ತಿರುವ ಗುರು ದೇಶಪಾಂಡೆ ಮತ್ತು ರಾಘವೇಂದ್ರ ನಾಯಕ್ ವಿರುದ್ಧ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

ನಾಲ್ಕು ವರ್ಷಗಳ ಶ್ರಮಕ್ಕೆ ಅವಮಾನ:

“ಲವ್ ಮಾಕ್ಟೇಲ್ 3 ಚಿತ್ರದ ಕಥೆಗಾಗಿ ನಾನು, ಮಿಲನಾ ನಾಗರಾಜ್ ಮತ್ತು ಯದುನಂದನ್ ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಶ್ರಮಿಸಿದ್ದೇವೆ. ಪ್ರತಿಯೊಂದು ಹಂತದ ಸ್ಕ್ರಿಪ್ಟ್ ಪ್ರಕ್ರಿಯೆಗೂ ನಮ್ಮ ಬಳಿ ಸ್ಪಷ್ಟ ದಾಖಲೆಗಳಿವೆ. ಹೀಗಿರುವಾಗ, ಯಾರೋ ಹೇಳಿದ ಕಥೆಯನ್ನು ಕದ್ದು ಸಿನಿಮಾ ಮಾಡುವ ದಾರಿದ್ರ್ಯ ನಮಗೆ ಬಂದಿಲ್ಲ” ಎಂದು ಕೃಷ್ಣ ಕಿಡಿಕಾರಿದ್ದಾರೆ.

ವಿವಾದದ ಮೂಲ:

ನಿರ್ದೇಶಕ ರಾಘವೇಂದ್ರ ನಾಯಕ್ ಅವರು ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಒಂದನ್ನು ಹಾಕಿ, “ನಾನು ಹೇಳಿದ ಕಥೆಯನ್ನೇ ಕೃಷ್ಣ ಅವರು ತಮ್ಮ ಸಿನಿಮಾದ ದ್ವಿತೀಯಾರ್ಧದಲ್ಲಿ ಬಳಸಿಕೊಂಡಿದ್ದಾರೆ” ಎಂದು ಆರೋಪಿಸಿದ್ದರು. ಇದಕ್ಕೆ ನಿರ್ಮಾಪಕ ಗುರು ದೇಶಪಾಂಡೆ ಸಾಥ್ ನೀಡಿದ್ದರು. ಈ ಬೆಳವಣಿಗೆಯಿಂದ ಕೆರಳಿರುವ ಡಾರ್ಲಿಂಗ್ ಕೃಷ್ಣ, ಈಗ ಪ್ರಕರಣವನ್ನು ಕಾನೂನು ಮಟ್ಟದಲ್ಲಿ ಬಗೆಹರಿಸಿಕೊಳ್ಳಲು ನಿರ್ಧರಿಸಿದ್ದಾರೆ.

ಈ ಕಾನೂನು ಹೋರಾಟವು ಸ್ಯಾಂಡಲ್‌ವುಡ್‌ನಲ್ಲಿ ಹೊಸ ಸಂಚಲನ ಮೂಡಿಸಿದ್ದು, ಗಾಂಧಿನಗರದ ಮಂದಿ ಈ ಬೆಳವಣಿಗೆಯನ್ನು ಕುತೂಹಲದಿಂದ ಗಮನಿಸುತ್ತಿದ್ದಾರೆ.

 


Share this with Friends

Related Post