Fri. Jun 5th, 2026

“ನನ್ನ ಹೆಸರಲ್ಲಿ ಐಪಿಎಲ್ ಟಿಕೆಟ್ ಪರಭಾರೆ: ಟಿಕೆಟ್ ದಂಧೆ ಬಿಚ್ಚಿಟ್ಟ ಸುರೇಶ್ ಕುಮಾರ್”

Share this with Friends

ಬೆಂಗಳೂರು: ಶಾಸಕರಿಗೆ ನೀಡಲಾಗುವ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಟಿಕೆಟ್‌ಗಳು ದುರುಪಯೋಗವಾಗುತ್ತಿವೆ ಮತ್ತು ಕಾಳಸಂತೆಯಲ್ಲಿ ಭಾರೀ ಮೊತ್ತಕ್ಕೆ ಮಾರಾಟವಾಗುತ್ತಿವೆ ಎಂಬ ಆಘಾತಕಾರಿ ಅಂಶವನ್ನು ಹಿರಿಯ ಶಾಸಕ ಎಸ್. ಸುರೇಶ್ ಕುಮಾರ್ ಬಹಿರಂಗಪಡಿಸಿದ್ದಾರೆ.

ಈ ಕುರಿತು ವಿಧಾನಸಭೆಯ ಸಭಾಧ್ಯಕ್ಷರಿಗೆ ಬರೆದಿರುವ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು, ಟಿಕೆಟ್ ಹಂಚಿಕೆಯ ವ್ಯವಸ್ಥೆಯನ್ನೇ ಬಲವಾಗಿ ಪ್ರಶ್ನಿಸಿದ್ದಾರೆ.

ಪರಭಾರೆಗೆ ತೀವ್ರ ವಿರೋಧ:

“ಯಾವ ಶಾಸಕರು ಟಿಕೆಟ್ ನಿರಾಕರಿಸಿದ್ದಾರೋ, ಅಂತಹವರ ಹೆಸರಿನಲ್ಲಿರುವ ಪಾಸ್‌ಗಳನ್ನು ಬೇರೆಯವರು ಪಡೆದುಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ನನಗಿದೆ. ನನ್ನ ಹೆಸರಿನಲ್ಲಿರುವ ಟಿಕೆಟ್‌ಗಳನ್ನು ಇತರರು ಪಡೆಯಲು ನಾನು ಯಾವುದೇ ಕಾರಣಕ್ಕೂ ಅನುಮತಿ ನೀಡುವುದಿಲ್ಲ. ಒಂದು ವೇಳೆ ಈ ರೀತಿ ಟಿಕೆಟ್ ಪರಭಾರೆ ಮಾಡಿದರೆ ಅದಕ್ಕೆ ನನ್ನ ತೀವ್ರ ವಿರೋಧವಿದೆ,” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಮಾಧ್ಯಮಗಳ ಮಾಹಿತಿ:

ಕೆಲವು ಮಾಧ್ಯಮ ಸ್ನೇಹಿತರು ನೀಡಿರುವ ಮಾಹಿತಿಯಂತೆ, ಶಾಸಕರಿಗೆ ಮೀಸಲಿಟ್ಟ ಈ ಟಿಕೆಟ್‌ಗಳು ಕಾಳಸಂತೆಯಲ್ಲಿ (Black Market) ದೊಡ್ಡ ಮೊತ್ತಕ್ಕೆ ಮಾರಾಟವಾಗುತ್ತಿವೆ. ಇಂತಹ ಅಕ್ರಮಗಳಿಗೆ ಅವಕಾಶ ನೀಡಬಾರದು ಎಂಬುದು ಅವರ ಕಳಕಳಿಯಾಗಿದೆ.

ಐಪಿಎಲ್ ಟಿಕೆಟ್‌ಗಾಗಿ ಶಾಸಕರು ಬೇಡಿಕೆ ಇಟ್ಟಿರುವುದು ಮತ್ತು ಅದಕ್ಕೆ ಸರ್ಕಾರ ಸಮ್ಮತಿಸಿರುವುದು ಈಗಾಗಲೇ ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಗಿದೆ. ಇದರ ಬೆನ್ನಲ್ಲೇ ಸುರೇಶ್ ಕುಮಾರ್ ಅವರು ಈ ‘ವಿಐಪಿ ಸಂಸ್ಕೃತಿ’ ಮತ್ತು ಟಿಕೆಟ್ ದಂಧೆಯ ವಿರುದ್ಧ ಧ್ವನಿ ಎತ್ತಿರುವುದು ವಿಶೇಷ ಗಮನ ಸೆಳೆದಿದೆ.

 


Share this with Friends

Related Post